ಗುಜರಾತ್ ಚುನಾವಣೆಯ ಸೋಲಿನ ಭೀತಿಯಿಂದ ಎಎಪಿ "ತುಳಿಯಲು" ಬಿಜೆಪಿ ಯತ್ನ: ಅರವಿಂದ ಕೇಜ್ರಿವಾಲ್
ಪಕ್ಷದ ಕಾರ್ಯಕ್ರಮ ಪ್ರಸಾರ ಮಾಡದಂತೆ ಟಿವಿ ಚಾನೆಲ್ ಮಾಲಕರಿಗೆ ಪ್ರಧಾನಿ ಸಲಹೆಗಾರರಿಂದ ಎಚ್ಚರಿಕೆ
Photo: PTI
ಹೊಸದಿಲ್ಲಿ,ಸೆ.18: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರವಿವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದರು. ಗುಜರಾತಿನಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಆಪ್ನ ಹೆಚ್ಚುತ್ತಿರುವ ಪ್ರಭಾವದಿಂದಾಗಿ ಬಿಜೆಪಿ ಎಷ್ಟೊಂದು ಕಂಗೆಟ್ಟಿದೆಯೆಂದರೆ ಪ್ರಧಾನಿಯವರ ಸಲಹೆಗಾರ ಹಿರೇನ್ ಜೋಶಿಯವರು ರಾಜ್ಯದಲ್ಲಿ ಆಪ್ಗೆ ಪ್ರಚಾರ ನೀಡದಂತೆ ಹಲವಾರು ಸುದ್ದಿವಾಹಿನಿಗಳ ಮಾಲಿಕರು ಮತ್ತು ಸಂಪಾದಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಇದನ್ನು ಮೀರಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದರು.
ಗುಜರಾತ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಿಸುತ್ತಿರುವ ಬಿಜೆಪಿಯು ಭ್ರಷ್ಟಾಚಾರದ ವಿರುದ್ಧ ಹೋರಾಟದ ಹೆಸರಿನಲ್ಲಿ ಆಪ್ ಅನ್ನು ದಮನಿಸಲು ಪ್ರಯತ್ನಿಸುತ್ತಿದೆ ಎಂದೂ ಅವರು ಆರೋಪಿಸಿದರು.
ತನ್ನ ಪಕ್ಷದ ಚುನಾಯಿತ ಪ್ರತಿನಿಧಿಗಳ ಪ್ರಪ್ರಥಮ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಕೇಜ್ರಿವಾಲ್,ಗುಜರಾತಿನಲ್ಲಿ ಆಪ್ನ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಅರಗಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ,ಹೀಗಾಗಿ ಮೋದಿ ಸರಕಾರವು ತನ್ನ ಪಕ್ಷದ ಸಚಿವರು ಮತ್ತು ನಾಯಕರನ್ನು ಸುಳ್ಳು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದೆ ಎಂದೂ ಆಪಾದಿಸಿದರು.
ಇದನ್ನೆಲ್ಲ ಮಾಡುವುದನ್ನು ನಿಲ್ಲಿಸಿ. ಸುದ್ದಿವಾಹಿನಿಗಳ ಸಂಪಾದಕರು ಜೋಶಿಯವರ ಸಂದೇಶಗಳ ಸ್ಕ್ರೀನ್ ಶಾಟ್ಗಳನ್ನು ಶೇರ್ ಮಾಡಿಕೊಂಡರೆ ಪ್ರಧಾನಿ ಮತ್ತು ಅವರ ಸಲಹೆಗಾರ ದೇಶಕ್ಕೆ ತಮ್ಮ ಮುಖಗಳನ್ನು ತೋರಿಸುವ ಸ್ಥಿತಿಯಲ್ಲಿರುವುದಿಲ್ಲ ಎಂದ ಕೇಜ್ರಿವಾಲ್,‘ನಾವು ಗುಜರಾತಿನಲ್ಲಿ ಸರಕಾರವನ್ನು ರಚಿಸುತ್ತೇವೆ ’ಎಂದು ಘೋಷಿಸಿದರು.
ಮೋದಿಯವರ ‘ರೇವಡಿ ಸಂಸ್ಕೃತಿ’ ಹೇಳಿಕೆಗಾಗಿ ಅವರ ವಿರುದ್ಧ ಪರೋಕ್ಷ ದಾಳಿ ನಡೆಸಿದ ಅವರು,ಜನರಿಗೆ ಉಚಿತ ಸೌಲಭ್ಯಗಳನ್ನು ಒದಗಿಸುವುದು ದೇಶದ ಆರ್ಥಿಕತೆಯನ್ನು ನಾಶಗೊಳಿಸುತ್ತದೆ ಎಂಬ ಕಾರಣವನ್ನೊಡ್ಡಿ ಆಪ್ನ ಉಚಿತ ಕೊಡುಗೆಗಳನ್ನು ಟೀಕಿಸಲಾಗುತ್ತಿದೆ. ಅಪ್ರಾಮಾಣಿಕ ವ್ಯಕ್ತಿ,ಭ್ರಷ್ಟ ಮತ್ತು ದೇಶದ್ರೋಹಿ ಮಾತ್ರ ಉಚಿತ ಕೊಡುಗೆಗಳು ದೇಶಕ್ಕೆ ಒಳ್ಳೆಯದಲ್ಲ ಎಂದು ಹೇಳಬಲ್ಲ. ಉಚಿತ ಸೌಲಭ್ಯಗಳು ದೇಶದ ಆರ್ಥಿಕತೆಯನ್ನು ನಾಶಗೊಳಿಸುತ್ತವೆ ಎಂದು ಯಾವುದೇ ರಾಜಕಾರಣಿ ಹೇಳಿದರೆ ಆತ ತಪ್ಪು ಉದ್ದೇಶವನ್ನು ಹೊಂದಿದ್ದಾನೆ ಎಂದು ಪರಿಗಣಿಸಿ ಎಂದು ಹೇಳಿದರು.