ಸೆ.20ರಂದು ಸಿಎಂ ಬೊಮ್ಮಾಯಿ ನಿವಾಸದ ಮುಂದೆ ಸತ್ಯಾಗ್ರಹ: ಬಸವಜಯ ಮೃತ್ಯುಂಜಯ ಶ್ರೀ
ಪಂಚಮಸಾಲಿ ಮೀಸಲಾತಿ ಬೇಡಿಕೆ ವಿಚಾರ

ಹಾವೇರಿ, ಸೆ.18: ಪಂಚಮಸಾಲಿ ಮೀಸಲಾತಿ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೊಟ್ಟ ಮಾತು ತಪ್ಪಿದ್ದಾರೆ. ಮೀಸಲಾತಿ ಘೋಷಣೆಯ ವಿಳಂಬ ನೀತಿ ಖಂಡಿಸಿ ಸೆ.20ರಂದು ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿರುವ ಮುಖ್ಯಮಂತ್ರಿ ನಿವಾಸದ ಎದುರು ಒಂದು ದಿನದ ಸತ್ಯಾಗ್ರಹ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ತಿಳಿಸಿದ್ದಾರೆ.
ರವಿವಾರ ಹಾವೇರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿಗಳು ಆ.22ರ ಒಳಗೆ ಸಿಹಿ ಸುದ್ದಿ ಕೊಡುವುದಾಗಿ ಹೇಳಿದ್ದರು.ಆದರೆ, ಸಿಎಂ ಅವರು ನಮ್ಮ ಸಮಾಜದ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಅನಿಸುತ್ತದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಯಡಿಯೂರಪ್ಪ ಮಾತು ತಪ್ಪಿದ್ದರು. ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಕೂಡ ನಾಲ್ಕು ಬಾರಿ ಕೊಟ್ಟ ಮಾತು ತಪ್ಪಿದ್ದಾರೆ. ವಿಶ್ವಾಸಕ್ಕೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಸಮಾಜದ ನಿರ್ಣಯದಂತೆ ಒಂದು ದಿನದ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಶ್ರೀಗಳು ಹೇಳಿದರು.
ಈ ಸತ್ಯಾಗ್ರಹಕ್ಕೆ ರಾಜ್ಯದ ಎಲ್ಲ ಕಡೆಗಳಿಂದಲೂ ಈಗಾಗಲೇ ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಜನರು ಆಗಮಿಸುತ್ತಿದ್ದಾರೆ. ಸೆ.20ರಂದು ಬೆಳಗ್ಗೆ 9ಗಂಟೆಗೆ ಶಿಗ್ಗಾಂವಿಯ ಚೆನ್ನಮ್ಮನ ಮೂರ್ತಿಗೆ ಪೂಜೆ ಸಲ್ಲಿಸಿ ಸಿಎಂ ನಿವಾಸದೆದುರು ಸತ್ಯಾಗ್ರಹ ಆರಂಭಿಸಲಾಗುವುದು ಎಂದು ತಿಳಿಸಿದರು.
ಇನ್ನು, ಸತ್ಯಾಗ್ರಹಕ್ಕೂ ಮಣಿಯದಿದ್ದರೆ ಅಕ್ಟೋಬರ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ ಮಾಡುತ್ತೇವೆ. ಅಂತಿಮವಾಗಿ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಿ ಕೆಲವು ನಿರ್ಣಯಗಳನ್ನು ಕೈಗೊಳ್ಳುತ್ತೇವೆ ಹಾಗೂ ಇನ್ನು ಈ ಬಗ್ಗೆ ನಮ್ಮ ಸಮಾಜದ ಎಲ್ಲ ಶಾಸಕರು ಅಧಿವೇಶನದಲ್ಲಿ ಧ್ವನಿ ಎತ್ತುತ್ತಾರೆ ಎಂದು ತಿಳಿಸಿದರು. ಹಾಲುಮತ ಸಮಾಜಕ್ಕೆ ಮೀಸಲಾತಿ: ಮೀಸಲಾತಿ ಅವಶ್ಯವಿಲ್ಲ ಎಂಬ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿಚಾರ ಕುರಿತಂತೆ ಮಾತನಾಡಿದ ಅವರು, ಈಶ್ವರಪ್ಪ ತಮಗೆ ಜನ್ಮಕೊಟ್ಟ ಹಾಲುಮತ ಸಮಾಜಕ್ಕೆ ಮೀಸಲಾತಿ ವಿರೋಧ ಮಾಡಿದ್ದು ಸರಿಯಲ್ಲ. ಅವರೇ ಮೀಸಲಾತಿ ಹೋರಾಟ ಮಾಡಿ, ಇಂದು ಅವರೇ ವಿರೋಧ ಮಾಡುತ್ತಿರುವುದು ಅವರ ಸಮಾಜಕ್ಕೆ ನೋವಾಗುತ್ತದೆ ಬಸವಜಯ ಮೃತ್ಯುಂಜಯಶ್ರೀಗಳು ತಿಳಿಸಿದರು.







