ಕಳಸ | ಮನೆಗಿಲ್ಲ ರಸ್ತೆ: ವೃದ್ಧೆಯನ್ನು ಆಸ್ಪತ್ರೆಗೆ ಜೋಳಿಗೆಯಲ್ಲಿ ಹೊತ್ತೊಯ್ದ ಸಂಬಂಧಿಕರು!
ಚಿಕ್ಕಮಗಳೂರು, ಸೆ.19: ಮನೆಗೆ ಸಮರ್ಪಕ ರಸ್ತೆ ಸಂಪರ್ಕವಿಲ್ಲದ ಕಾರಣ ಅನಾರೋಗ್ಯಪೀಡಿತ ವೃದ್ಧೆಯನ್ನು ಸಂಬಂಧಿಕರು ಜೋಳಿಗೆಯಲ್ಲಿರಿಸಿ ಹೊತ್ತುಕೊಂಡು ಆಸ್ಪತ್ರೆಗೆ ಕರೆದೊಯ್ದ ಘಟನೆ ಕಳಸ ತಾಲೂಕಿನಿಂದ ವರದಿಯಾಗಿದೆ.
ಕಳಸ ತಾಲೂಕಿನ ಗಂಟೆಮಕ್ಕಿ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ 85 ವರ್ಷ ಪ್ರಾಯದ ವೆಂಕಮ್ಮ ಎಂಬವರ ಮನೆಗೆ ರಸ್ತೆ ವ್ಯವಸ್ಥೆಯಿಲ್ಲ. ಅನಾರೋಗ್ಯಪೀಡಿತರಾದ ವೆಂಕಮ್ಮರನ್ನು ಆಸ್ಪತ್ರೆಗೆ ಕರೆದೊಯ್ಯಲು ಮನೆಯಿಂದ ಜಮೀನಿನ ಕಾಲುದಾರಿಯಲ್ಲಿ ಜೋಳಿಗೆ ಮೂಲಕ ಹೊತ್ತುಕೊಂಡು ಹೋಗಿದ್ದಾರೆ.
ಸುತ್ತ ಜಮೀನು ಮಧ್ಯದಲ್ಲಿ ಮನೆ ಹೊಂದಿರುವ ವೆಂಕಮ್ಮರದ್ದು ಭೂ ಸ್ವಾಧೀನ ಕಾಯ್ದೆಯಡಿಯಲ್ಲಿ ಮಂಜೂರಾಗಿರುವ ಜಮೀನು. ಇವರ ಮನೆಗೆ ಸಮರ್ಪಕ ರಸ್ತೆ ಇಲ್ಲವಾಗಿದ್ದು, ರಸ್ತೆ ನಿರ್ಮಿಸಿಕೊಂಡುವಂತೆ ಕಳೆದೊಂದು ವರ್ಷದಿಂದ ಕಂದಾಯ ಸಚಿವ ಆರ್.ಅಶೋಕ್, ಜಿಲ್ಲಾಧಿಕಾರಿ, ತಹಶೀಲ್ದಾರ್ ರಿಗೆಲ್ಲ ವೆಂಕಮ್ಮ ಮನವಿ ಮಾಡಿದ್ದರು. ಆದರೆ ಇದುವರೆಗೆ ಯಾವುದೇ ಕ್ರಮ ಆಗಿಲ್ಲ ಎಂದು ವೆಂಕಮ್ಮ ಮನೆಗೆ ಮಂದಿ ಅಸಮಾಧಾನ ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಇಚ್ಲಂಗೋಡು | ಕೆರೆಗೆ ಸ್ನಾನಕ್ಕಿಳಿದ ಯುವಕ ನೀರಲ್ಲಿ ಮುಳುಗಿ ಮೃತ್ಯು