ತಮಿಳುನಾಡಿಗೆ ರಾಜ್ಯದಿಂದ 425 ಟಿಎಂಸಿ ನೀರು: ಕಂದಾಯ ಸಚಿವ ಅಶೋಕ್
ಬೆಂಗಳೂರು, ಸೆ. 19: ‘ರಾಜ್ಯದಿಂದ ತಮಿಳುನಾಡಿಗೆ ಜೂನ್ ತಿಂಗಳಿಂದ ಈವರೆಗೆ ಒಟ್ಟು 425 ಟಿಎಂಸಿಯಷ್ಟು ನೀರನ್ನು ಹರಿಸಲಾಗಿದೆ. ಐವತ್ತು ವರ್ಷಗಳ ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ನೆರೆ ರಾಜ್ಯಕ್ಕೆ ನೀರು ಹರಿಸಿದ್ದು, ಬಿಳಿಗುಂಡ್ಲು ಜಲಾಶಯದ ಮಾಪನ ಕೇಂದ್ರದಲ್ಲಿ ಇದು ದಾಖಲಾಗಿದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಅತಿವೃಷ್ಟಿ ಸಮಸ್ಯೆ ಕುರಿತ ಚರ್ಚೆಗೆ ಸರಕಾರದ ಪರವಾಗಿ ಉತ್ತರಿಸಿದ ಅವರು, ‘ದಾಖಲೆ ಪ್ರಮಾಣದಲ್ಲಿ ತಮಿಳುನಾಡಿಗೆ ನೀರು ಹರಿದಿದ್ದು ನೀರಿಗಾಗಿ ತಮಿಳುನಾಡು ಈ ಬಾರಿ ಯಾವುದೇ ರೀತಿಯಲ್ಲಿ ಕ್ಯಾತೆ ತೆಗೆದಿಲ್ಲ. 1974ರ ಕಾವೇರಿ ಒಪ್ಪಂದದ ನಂತರ ಈ ಪ್ರಮಾಣದ ನೀರು ತಮಿಳುನಾಡಿಗೆ ಹರಿದು ಹೋಗಿರಲಿಲ್ಲ. ಇದು ಸಾರ್ವಕಾಲಿಕ ದಾಖಲೆ' ಎಂದು ವಿವರಿಸಿದರು.
‘ಕಾವೇರಿ ನದಿ ಪಾತ್ರದ ಜಲಾಶಯಗಳು ಸೇರಿದಂತೆ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರು ಗರಿಷ್ಠ ಮಟ್ಟದಲ್ಲಿದ್ದು, ಮಳೆ ಹೆಚ್ಚು ಬಿದ್ದ ಪರಿಣಾಮ ಒಂದು ಕಡೆಯಲ್ಲಿ ಅನುಕೂಲವಾಗಿದ್ದರೂ, ಅನಾಹುತಗಳು ಸಂಭವಿಸಿವೆ. 8.91 ಲಕ್ಷ ಹೆಕ್ಟೇರ್ ಬೆಳೆ ಹಾನಿ, 127 ಜನ ಸಾವನ್ನಪ್ಪಿದ್ದು, 1,289 ಜಾನುವಾರುಗಳು, 1.53 ಲಕ್ಷಕ್ಕೂ ಅಧಿಕ ಕೋಳಿಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, 45,465 ಮನೆಗಳಿಗೆ ಹಾನಿಯಾಗಿದೆ' ಎಂದು ಅವರು ವಿವರ ನೀಡಿದರು.