ಜಾನುವಾರುಗಳ ಚರ್ಮಗಂಟು ಕಾಯಿಲೆ ಉಲ್ಬಣ: ರಾಜಸ್ಥಾನ ಸರಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ
ರೋಗವನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರಕಾರ ಘೋಷಿಸಬೇಕು ಎಂದ ಸಿಎಂ ಗೆಹ್ಲೋಟ್

Photo:NDTV
ಜೈಪುರ: ಚರ್ಮ ಗಂಟು ಕಾಯಿಲೆ (ಎಲ್ಎಸ್ಡಿ)Lumpy Skin Disease (LSD)ಯಿಂದಾಗಿ ರಾಜಸ್ಥಾನದಲ್ಲಿ 57,000 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಬಿಜೆಪಿ ಮಂಗಳವಾರ ಜೈಪುರದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿತು. ರಾಜ್ಯ ವಿಧಾನಸಭೆಯತ್ತ ಸಾಗುತ್ತಿದ್ದ ಮೆರವಣಿಗೆಯನ್ನು ಪೊಲೀಸರು ತಡೆದರು. ಆಗ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಪೊಲೀಸರೊಂದಿಗೆ ಘರ್ಷಣೆ ನಡೆಸಿದರು, ಬ್ಯಾರಿಕೇಡ್ಗಳನ್ನು ಮುರಿದರು.
ರಾಜ್ಯ ವಿಧಾನಸಭೆಯಲ್ಲೂ ಬಿಜೆಪಿ ಈ ವಿಷಯವನ್ನು ಪ್ರಸ್ತಾಪಿಸಿದೆ. ಸೋಮವಾರ ಬಿಜೆಪಿ ಶಾಸಕರೊಬ್ಬರು ರಾಜ್ಯ ವಿಧಾನಸಭೆ ಆವರಣದ ಹೊರಗೆ ಹಸುವನ್ನು ಕರೆತಂದು ಚರ್ಮ ಗಂಟು ಕಾಯಿಲೆ ಬಗ್ಗೆ ರಾಜ್ಯ ಸರಕಾರದ ಗಮನ ಸೆಳೆದರು.
13 ರಾಜ್ಯಗಳಿಗೆ ಹರಡಿರುವ ಚರ್ಮ ಗಂಟು ರೋಗವನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರಕಾರ ಘೋಷಿಸಬೇಕು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದಿರುವ ಗೆಹ್ಲೋಟ್, ಚರ್ಮ ರೋಗದಿಂದ ಹಸುಗಳ ಜೀವ ಉಳಿಸುವುದು ಹೇಗೆ ಎಂಬುದು ನಮ್ಮ ಆದ್ಯತೆಯಾಗಿದ್ದು, ಕೇಂದ್ರವೇ ಲಸಿಕೆ, ಔಷಧ ನೀಡಬೇಕಿದ್ದು, ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸುತ್ತಿದ್ದೇವೆ ಎಂದರು.







