ದ.ಕ.ಜಿಲ್ಲಾಧಿಕಾರಿಯ ಕಾರ್ಯಕಲಾಪಗಳಲ್ಲಿ ಭಾಗಿಯಾದ ಬಿಕಾಂ ವಿದ್ಯಾರ್ಥಿನಿ ಸೌಜನ್ಯಾ

ಮಂಗಳೂರು, ಸೆ.20: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ವಿಶ್ವ ಯುವ ಕೌಶಲ ದಿನಾಚರಣೆ ಅಂಗವಾಗಿ 2022ರ ಜುಲೈ 15ರಂದು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಕನ್ನಡ ವಿಭಾಗದಲ್ಲಿ ದ.ಕ.ಜಿಲ್ಲೆಯಿಂದ ಆಯ್ಕೆಯಾದ ನಗರದ ಬೆಂದೂರಿನ ಸಂತ ಆಗ್ನೆಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ ಸೌಜನ್ಯಾ ಜೆ. ಮಂಗಳವಾರ ದ.ಕ.ಜಿಲ್ಲಾಧಿಕಾರಿಯ ಕಾರ್ಯಕಲಾಪಗಳಲ್ಲಿ ಭಾಗವಹಿಸುವ ಅವಕಾಶನ್ನು ಪಡೆದರು.
ಬಂಟ್ವಾಳ ತಾಲೂಕು ತಹಶೀಲ್ದಾರರ ಕಚೇರಿಯಲ್ಲಿ ಜಿಲ್ಲಾಧಿಕಾರಿಯ ತಾಲೂಕು ಭೇಟಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸೌಜನ್ಯಾ ಅವರು ಸ್ಥಳೀಯರು ಡಿಸಿಗೆ ಸಲ್ಲಿಸಿದ ಕುಂದು ಕೊರತೆಗಳ ಅಹವಾಲುಗಳ ಸ್ವೀಕೃತಿ ಹಾಗೂ ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾದರು.
ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ನಲ್ಲಿ ನಡೆದ ಜಿಲ್ಲಾಧಿಕಾರಿಯ ನ್ಯಾಯಾಲಯದ ಕಲಾಪಗಳನ್ನು ವೀಕ್ಷಿಸಿದರು. ಸಂಜೆ ಜಿಲ್ಲಾಧಿಕಾರಿಗಳು ಸೌಜನ್ಯಾ ಅವರಿಗೆ ಸನ್ಮಾನಿಸಿ ಪ್ರಮಾಣ ಪತ್ರ ನೀಡಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎಸ್.ಜಿ. ಹೇಮಚಂದ್ರ, ಸಿಡಾಕ್ ಜಂಟಿ ನಿರ್ದೇಶಕ ಅರವಿಂದ ಡಿ. ಬಾಳೇರಿ, ಬೆಂದೂರಿನ ಸಂತ ಆಗ್ನೆಸ್ ಪದವಿ ಕಾಲೇಜಿನ ಪ್ರಾಂಶುಪಾಲ ಸಿಸ್ಟರ್ ವೆನಿಸಾ ವಿವಿಧ ಇಲಾಖೆಗಳ ಉಪಸ್ಥಿತರಿದ್ದರು.





