‘ಆಯಾರಾಮ್ ಗಯಾರಾಮ್’ ಸಂಸ್ಕೃತಿಗೆ ಕೊನೆ ಬೇಕಿದೆ
ಪಕ್ಷಾಂತರ ಚಟುವಟಿಕೆಗಳಲ್ಲಿ ಅಗಾಧ ಪ್ರಮಾಣದ ಹಣವನ್ನು ತೊಡಗಿಸಲಾಗಿದೆ ಎಂಬ ಮಾತುಗಳು ಚಾಲ್ತಿಯಲ್ಲಿವೆ. ಇಂತಹ ಮಾತುಗಳಿಗೆ ಸಾಕ್ಷಿಯಿಲ್ಲ ಎನ್ನುವ ಕಾರಣಕ್ಕಾಗಿ ಅದನ್ನು ಹೊರಗಿಟ್ಟರೂ, ಪಕ್ಷಾಂತರಿ ಶಾಸಕರು ವಿಲಾಸಿ ರೆಸಾರ್ಟ್ಗಳಲ್ಲಿ ಆತಿಥ್ಯ ಅನುಭವಿಸುತ್ತಿರುವ ಮತ್ತು ಖಾಸಗಿ ವಿಮಾನಗಳಲ್ಲಿ ಪ್ರಯಾಣಿಸುವ ವೀಡಿಯೊಗಳು ಪಕ್ಷಾಂತರ ಚಟುವಟಿಕೆಗಳಲ್ಲಿ ಅಗಾಧ ಪ್ರಮಾಣದ ಹಣವನ್ನು ತೊಡಗಿಸಲಾಗಿದೆ ಎನ್ನುವುದನ್ನು ಸೂಚಿಸುತ್ತವೆ.
ಭಾರತೀಯ ರಾಜಕಾರಣಕ್ಕೆ ‘ಆಯಾ ರಾಮ್- ಗಯಾ ರಾಮ್’ ಸಂಸ್ಕೃತಿಯನ್ನು ಪರಿಚಯಿಸಿದ ಕುಖ್ಯಾತಿಯನ್ನು ಹರ್ಯಾಣ ಹೊಂದಿದೆ. ಈ ವಿದ್ಯಮಾನಕ್ಕೆ ಈ ಹೆಸರು ಬರಲು ಕಾರಣವಾದ ಹರ್ಯಾಣದ ಆ ಶಾಸಕನ ನಿಜವಾದ ಹೆಸರು ಗಯಾ ಲಾಲ್. ತನ್ನ ಕೃತ್ಯಗಳು ಮುಂಬರಲಿರುವ ಹಲವು ವರ್ಷಗಳವರೆಗೆ ಭಾರತೀಯ ರಾಜಕಾರಣದ ದೈನಂದಿನ ವ್ಯವಹಾರವಾಗಿರುತ್ತದೆ ಎನ್ನುವುದು ಅವರಿಗೆ ತಿಳಿದಿರಲಿಲ್ಲ.
ಗಯಾಲಾಲ್ ಹರ್ಯಾಣದ ಪಲ್ವಾಲ್ ಜಿಲ್ಲೆಯ ಹಸನ್ಪುರ್ ಕ್ಷೇತ್ರದ ಶಾಸಕನಾಗಿದ್ದರು. ೧೯೬೭ರಲ್ಲಿ, ಅವರು ಒಂದೇ ದಿನದಲ್ಲಿ ಮೂರು ಬಾರಿ ತನ್ನ ಪಕ್ಷ ನಿಷ್ಠೆಯನ್ನು ಬದಲಾಯಿಸಿದರು. ಅವರು ಕಾಂಗ್ರೆಸ್ನಿಂದ ಜನತಾ ಪಕ್ಷಕ್ಕೆ ಹೋದರು. ಬಳಿಕ ವಾಪಸ್ ಕಾಂಗ್ರೆಸ್ಗೆ ಬಂದರು. ಮುಂದೆ, ಒಂಭತ್ತು ಗಂಟೆಗಳ ಬಳಿಕ ಮತ್ತೆ ಜನತಾ ಪಕ್ಷಕ್ಕೆ ಹೋದರು. ಕೊನೆಗೆ ಮತ್ತೆ ಕಾಂಗ್ರೆಸ್ಗೆ ಬಂದರು. ಬಳಿಕ ಚಂಡಿಗಡದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಕಾಂಗ್ರೆಸ್ ಪಕ್ಷದ ಅಂದಿನ ನಾಯಕರೊಬ್ಬರು ಅವರನ್ನು ‘‘ಗಯಾ ಲಾಲ್ ಈಗ ಆಯಾ ಲಾಲ್’’ ಆಗಿದ್ದಾರೆ ಎಂಬುದಾಗಿ ಪರಿಚಯಿಸಿದರು. ಇದು ಹಲ ವಾರು ವರ್ಷಗಳ ಅವಧಿಯಲ್ಲಿ ಮಾರ್ಪಾಡುಗೊಂಡು, ‘‘ಆಯಾ ರಾಮ್, ಗಯಾ ರಾಮ್’’ ಎಂಬ ಹೊಸ ನುಡಿಗಟ್ಟು ಆಗಿದೆ.
೧೯೬೭ರಲ್ಲಿ ಗಯಾ ಲಾಲ್ ಆರಂಭಿಸಿದ ಸಂಪ್ರದಾಯವು ಬಳಿಕ ಎಲ್ಲೆಡೆ ವ್ಯಾಪಿಸಿದೆ. ೨೦೦೩ರಲ್ಲಿ ‘ಇಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ’ಯಲ್ಲಿ ಲೇಖನವೊಂದನ್ನು ಬರೆದಿರುವ ಬಿ. ವೆಂಕಟೇಶ್ ಕುಮಾರ್, ೧೯೬೭ ಮತ್ತು ೧೯೭೧ರ ನಡುವಿನ ಅವಧಿಯಲ್ಲಿ ಆಯ್ಕೆಯಾಗಿರುವ ಸುಮಾರು ೪,೦೦೦ ಶಾಸಕರ ಪೈಕಿ ಬಹುತೇಕ ಶೇ. ೫೦ರಷ್ಟು ನಂತರದ ದಿನಗಳಲ್ಲಿ ಪಕ್ಷಾಂತರ ಮಾಡಿದ್ದಾರೆ.
ಪಕ್ಷಾಂತರ ವಿದ್ಯಮಾನದೊಂದಿಗೆ ವ್ಯವಹರಿಸುವ ಪ್ರಯತ್ನಗಳು ೧೯೬೭ರಲ್ಲೇ ಆರಂಭಗೊಂಡವು. ಲೋಕಸಭೆಯು ವೈ.ಬಿ. ಚವಾಣ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ೧೯೬೮ರಲ್ಲಿ ಅದು ತನ್ನ ವರದಿಯನ್ನು ಸಲ್ಲಿಸಿತು. ಪಕ್ಷಾಂತರ ನಿಷೇಧ ಕಾನೂನೊಂದನ್ನು ಜಾರಿಗೆ ತರುವಂತೆ ಸಮಿತಿಯು ತನ್ನ ವರದಿಯಲ್ಲಿ ಶಿಫಾರಸು ಮಾಡಿತು. ಆದರೆ, ಅಂತಿಮವಾಗಿ ಕಾನೂನು ಅಂಗೀಕಾರಗೊಂಡದ್ದು ೧೯೮೫ರಲ್ಲಿ. ಕಾನೂನು ಆ ವರ್ಷದ ಮಾರ್ಚ್ ೧೮ರಂದು ಜಾರಿಗೆ ಬಂತು.
ಅದೇ ವೇಳೆ, ‘ರಾಜಕೀಯ ಪಕ್ಷ’ ಎಂಬ ಪದವನ್ನು ೫೨ನೇ ತಿದ್ದುಪಡಿ ಮೂಲಕ ಮೊದಲ ಬಾರಿಗೆ ಸಂವಿಧಾನದ ೧೦ನೇ ಶೆಡ್ಯೂಲ್ಗೆ ಸೇರಿಸಲಾಯಿತು. ಅಂದರೆ ಸಂವಿಧಾನಕ್ಕೆ ೧೦೨(೨) ವಿಧಿಯನ್ನು ಪರಿಚಯಿಸಲಾಯಿತು.
ಪಕ್ಷಾಂತರ ನಿಷೇಧ ಕಾಯ್ದೆಯು ಆರಂಭದಲ್ಲಿ ಚೆನ್ನಾಗಿಯೇ ಕೆಲಸ ಮಾಡಿತು. ಆದರೆ, ಕಾಲ ಕಳೆದಂತೆ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಈ ಕಾಯಿದೆಯ ಲೋಪದೋಷಗಳನ್ನು ಪತ್ತೆಹಚ್ಚಿದರು ಹಾಗೂ ಅವುಗಳನ್ನು ಬಳಸಿಕೊಳ್ಳಲು ಆರಂಭಿಸಿದರು. ಈ ಕಾನೂನಿನ ಪ್ರಕಾರ, ಮೂಲ ರಾಜಕೀಯ ಪಕ್ಷದಲ್ಲಿ ಆದ ‘ವಿಭಜನೆ’ಯ ಫಲವಾಗಿ ಶಾಸಕಾಂಗ ಪಕ್ಷದ ಮೂರನೇ ಒಂದರಷ್ಟು ಶಾಸಕರು ಪಕ್ಷದಿಂದ ಹೊರಹೋದರೆ ಅವರನ್ನು ಅನರ್ಹಗೊಳಿಸುವಂತಿಲ್ಲ. ಹಾಗಾಗಿ, ಶಾಸಕಾಂಗ ಪಕ್ಷದ ಸದಸ್ಯರು ‘ಮೂರನೇ ಒಂದರ’ ಗುಂಪುಗಳಲ್ಲಿ ಪಕ್ಷ ತೊರೆಯಲು ಆರಂಭಿಸಿದರು.
ಇದರ ಫಲವಾಗಿ, ೨೦೦೩ರಲ್ಲಿ ೯೧ನೇ ಸಂವಿಧಾನ ತಿದ್ದುಪಡಿಯ ಮೂಲಕ ಕಾನೂನಿಗೆ ಇನ್ನೊಂದು ತಿದ್ದುಪಡಿ ತರಲಾಯಿತು. ಈ ತಿದ್ದುಪಡಿಯು, ಅನರ್ಹತೆಗೆ ಒಳಗಾಗದೆ ರಾಜಕೀಯ ಪಕ್ಷವೊಂದರ ಶಾಸಕಾಂಗ ಪಕ್ಷದಿಂದ ಶಾಸಕರು ಹೊರಹೋಗಬೇಕಾದರೆ ಅವರು ಮೂರನೇ ಎರಡರ ಗುಂಪಿನಲ್ಲಿ ಹೊರಹೋಗಬೇಕಾಗುತ್ತದೆ.
ಈ ತಿದ್ದುಪಡಿಯೂ ಸ್ವಲ್ಪ ಸಮಯ ಚೆನ್ನಾಗಿಯೇ ಕೆಲಸ ಮಾಡಿತು. ಆದರೆ, ರಾಜಕಾರಣಿಗಳು ಮತ್ತೆ ಅದರಲ್ಲಿ ಲೋಪದೋಷಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾದರು.
ಪಕ್ಷಾಂತರ ಚಟುವಟಿಕೆಗಳು ಕಳೆದ ಕೆಲವು ವರ್ಷಗಳಲ್ಲಿ ತೀವ್ರಗತಿಯಿಂದ ನಡೆದಿವೆ. ೨೦೧೮ರಲ್ಲಿ ಅರುಣಾಚಲಪ್ರದೇಶ, ೨೦೧೯ರಲ್ಲಿ ಕರ್ನಾಟಕ, ೨೦೧೮-೧೯ರಲ್ಲಿ ಗುಜರಾತ್, ೨೦೨೦ರಲ್ಲಿ ಮಧ್ಯಪ್ರದೇಶ, ೨೦೨೧ರಲ್ಲಿ ಪಶ್ಚಿಮಬಂಗಾಳ ಮತ್ತು ಈಗ ಗೋವಾದಲ್ಲಿ ಪಕ್ಷಾಂತರ ಚಟುವಟಿಕೆಗಳು ನಡೆದಿವೆ.
ಅತ್ಯಂತ ಆಳವಾಗಿ ಬೇರೂರಿರುವ ಈ ರಾಷ್ಟ್ರೀಯ ಸವಾಲನ್ನು ನಿಭಾಯಿಸಲು ಏನು ಮಾಡಬಹುದು ಎಂಬ ಪ್ರಶ್ನೆಗಳನ್ನು ಈಗ ಕೇಳಲಾಗುತ್ತಿದೆ.
ಆದರೆ, ಈ ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ನಡೆಸುವ ಮೊದಲು, ಈ ಪಕ್ಷಾಂತರಗಳೊಂದಿಗೆ ನೇರವಾಗಿ ತಳುಕು ಹಾಕಿಕೊಂಡಿರುವ ಭಾರತೀಯ ರಾಜಕಾರಣದ ಇನ್ನೊಂದು ಪ್ರಮುಖ ಅಂಶದ ಮೇಲೆ ಬೆಳಕು ಚೆಲ್ಲುವುದು ಅಗತ್ಯವಾಗಿದೆ. ಇದು ಹಣಕ್ಕೆ ಸಂಬಂಧಿಸಿದ್ದಾಗಿದೆ.
ಪಕ್ಷಾಂತರ ಚಟುವಟಿಕೆಗಳಲ್ಲಿ ಅಗಾಧ ಪ್ರಮಾಣದ ಹಣವನ್ನು ತೊಡಗಿಸಲಾಗಿದೆ ಎಂಬ ಮಾತುಗಳು ಚಾಲ್ತಿಯಲ್ಲಿವೆ. ಇಂತಹ ಮಾತುಗಳಿಗೆ ಸಾಕ್ಷಿಯಿಲ್ಲ ಎನ್ನುವ ಕಾರಣಕ್ಕಾಗಿ ಅದನ್ನು ಹೊರಗಿಟ್ಟರೂ, ಪಕ್ಷಾಂತರಿ ಶಾಸಕರು ವಿಲಾಸಿ ರೆಸಾರ್ಟ್ಗಳಲ್ಲಿ ಆತಿಥ್ಯ ಅನುಭವಿಸುತ್ತಿರುವ ಮತ್ತು ಖಾಸಗಿ ವಿಮಾನಗಳಲ್ಲಿ ಪ್ರಯಾಣಿಸುವ ವೀಡಿಯೊಗಳು ಪಕ್ಷಾಂತರ ಚಟುವಟಿಕೆಗಳಲ್ಲಿ ಅಗಾಧ ಪ್ರಮಾಣದ ಹಣವನ್ನು ತೊಡಗಿಸಲಾಗಿದೆ ಎನ್ನುವುದನ್ನು ಸೂಚಿಸುತ್ತವೆ. ಈ ಚಟುವಟಿಕೆಗಳಿಗೆ ಖರ್ಚು ಮಾಡುವ ಹಣಕ್ಕೆ ಲೆಕ್ಕವುಂಟೋ ಇಲ್ಲವೋ, ಕಪ್ಪುಹಣವೋ ಬಿಳಿಯೋ, ಸಂಪೂರ್ಣ ಅಪಾರದರ್ಶಕ ಚುನಾವಣಾ ಬಾಂಡ್ಗಳ ರಾಜಕೀಯ ವ್ಯವಸ್ಥೆಗೆ ೧೦,೦೦೦ ಕೋಟಿ ರೂಪಾಯಿಗೂ ಅಧಿಕ ಹಣವನ್ನು ತರಲಾಗಿದೆ ಎನ್ನುವ ವಾಸ್ತವವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.
ಏನು ಮಾಡಬಹುದು ಮತ್ತು ಮಾಡಬೇಕು?
‘‘ಕಠಿಣ ಸಂದರ್ಭಗಳಲ್ಲಿ ಕಠಿಣ ಕ್ರಮಗಳೇ ಬೇಕು’’ ಎಂಬ ಮಾತಿದೆ. ಇದನ್ನು ಮೊದಲು ಪರಿಚಯಿಸಿದವರು ಪ್ರಾಚೀನ ಗ್ರೀಕ್ ವೈದ್ಯ ಹಿಪೋಕ್ರಾಟಿಸ್ ಎಂಬುದಾಗಿ ನಂಬಲಾಗಿದೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಈ ಮಾತನ್ನು ಅರ್ಥೈಸಬೇಕಾಗಿದೆ. ಪಕ್ಷಾಂತರದಂತಹ ಆಳವಾಗಿ ಬೇರೂರಿರುವ ಹಾಗೂ ಸಂಕೀರ್ಣ ಕಾಯಿಲೆಗೆ, ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಬದಲಾವಣೆ ಮಾಡುವಂತಹ ಸರಳ ಕ್ರಮಗಳು ಸಾಕಾಗುವುದಿಲ್ಲ.
ಪಕ್ಷಾಂತರದ ಸಮಸ್ಯೆಯು ಕೇವಲ ಶಾಸಕರ ಸಮಸ್ಯೆ ಮಾತ್ರವಲ್ಲ ಎನ್ನುವುದಕ್ಕೆ ಒತ್ತು ನೀಡುವುದು ತೀರಾ ಅಗತ್ಯವಾಗಿದೆ. ಈ ದೇಶದ ರಾಜಕೀಯ ರಂಗದಲ್ಲಿ ಪದೇ ಪದೇ ಯಾವುದೇ ಅಳುಕಿಲ್ಲದೆ ಪ್ರದರ್ಶನಗೊಳ್ಳುತ್ತಿರುವ ಈ ಪಕ್ಷಾಂತರ ನಾಟಕದಲ್ಲಿ ರಾಜಕೀಯ ಪಕ್ಷಗಳು ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಹಾಗಾಗಿ, ಪರಸ್ಪರ ಸಂಬಂಧವಿರುವ ಮೂರು ಕ್ರಮಗಳ ಅಗತ್ಯ ಇಲ್ಲಿದೆ.
ಮೊದಲನೆಯದು, ಪಕ್ಷಾಂತರಗೊಳ್ಳುವ ಯಾವುದೇ ಶಾಸಕನನ್ನು (೧) ಶಾಸಕಾಂಗದಿಂದ ಹೊರಹಾಕಬೇಕು ಮತ್ತು ಆತನ/ಆಕೆಯ ಸ್ಥಾನ ಖಾಲಿಯಾಗಿದೆ ಎಂದು ಘೋಷಿಸಬೇಕು, (೨) ಈ ಖಾಲಿ ಸ್ಥಾನವನ್ನು ತುಂಬಲು ನಡೆಸಲಾಗುವ ಹೊಸ ಚುನಾವಣೆಯಲ್ಲಿ ಸ್ಪರ್ಧಿಸಲು ಆತನಿಗೆ/ಆಕೆಗೆ ಅವಕಾಶ ನೀಡಬಾರದು. ಇದು ಅತ್ಯಂತ ಕಠಿಣ ಕ್ರಮವಾಗಿ ಕೆಲವರಿಗೆ ತೋರಬಹುದು. ಆದರೆ, ನಿರ್ದಿಷ್ಟ ರಾಜಕೀಯ ಪಕ್ಷವೊಂದರ ಪ್ರತಿನಿಧಿಯಾಗಿ ಆಯ್ಕೆಯಾದ ಬಳಿಕ ಪಕ್ಷಾಂತರ ಮಾಡುವುದು, ಮತದಾರರು ಆ ಅಭ್ಯರ್ಥಿಯ ಮೇಲಿರಿಸಿದ ನಂಬಿಕೆಗೆ ಮಾಡಿದ ಘೋರ ದ್ರೋಹವಾಗಿದೆ ಎನ್ನುವುದನ್ನು ಗಮನಿಸಬೇಕು. ಈ ವಿಶ್ವಾಸ ದ್ರೋಹವು ಪದೇ ಪದೇ ನಡೆದರೆ, ಮತದಾರರು ಇಡೀ ಚುನಾವಣಾ ಪ್ರಕ್ರಿಯೆ ಮತ್ತು ಅಂತಿಮವಾಗಿ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆಯೇ ವಿಶ್ವಾಸವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಪ್ರಜಾಪ್ರಭುತ್ವವೊಂದರಲ್ಲಿ, ಇಂತಹ ವಿಶ್ವಾಸ ನಷ್ಟದ ಪರಿಣಾಮಗಳನ್ನು ಊಹಿಸಲೂ ಅಸಾಧ್ಯ. ‘ಸಂವಿಧಾನದ ಕ್ರಿಯಾಶೀಲತೆಯನ್ನು ವಿಮರ್ಶಿಸುವ ರಾಷ್ಟ್ರೀಯ ಆಯೋಗ’ (ಎನ್ಸಿಆರ್ಡಬ್ಲ್ಯುಸಿ)ವು ತನ್ನ ಕಲಾಪಗಳಲ್ಲಿ ಇಂತಹ ಕಠಿಣ ಕ್ರಮಗಳ ಪರವಾಗಿ ಧ್ವನಿ ಎತ್ತಿದೆ. ‘‘ಪಕ್ಷಾಂತರಿಯೊಬ್ಬನ/ಳ ವಿರುದ್ಧ ದಂಡನಾ ಕ್ರಮವನ್ನು ತೆಗೆದುಕೊಳ್ಳಬೇಕು ಎನ್ನುವುದು ಎನ್ಸಿಆರ್ಡಬ್ಲ್ಯುಸಿಯ ನಿಲುವು ಕೂಡಾ ಆಗಿದೆ.’’
ಮೂರು ಕ್ರಮಗಳ ಪೈಕಿ ಮೊದಲನೇ ಕ್ರಮದ ದುಷ್ಪರಿಣಾಮಗಳ ತೀವ್ರತೆಯನ್ನು ತಗ್ಗಿಸಲು ಎರಡನೇ ಕ್ರಮವು ಅಗತ್ಯವಾಗಿದೆ. ಮೊದಲ ಕ್ರಮವು, ಪಕ್ಷಾಂತರಿ ಶಾಸಕರನ್ನು ‘ದಂಡಿಸಬೇಕು’ ಎಂದು ಹೇಳುತ್ತದೆ. ಇದು ತಮ್ಮ ಬೆಂಬಲದಿಂದ ಆಯ್ಕೆಯಾದ ಶಾಸಕರ ಮೇಲೆ ಹೆಚ್ಚಿನ ಅಧಿಕಾರ ಮತ್ತು ನಿಯಂತ್ರಣವನ್ನು ರಾಜಕೀಯ ಪಕ್ಷಗಳಿಗೆ ನೀಡುತ್ತದೆ. ಈ ದಂಡನೆಯು ತನ್ನ ಮೂಲ ಸ್ವರೂಪದಲ್ಲಿ ಯಾವುದೇ ಸನ್ನಿವೇಶದಲ್ಲೂ ಅನಪೇಕ್ಷಿತ ಅಲ್ಲ. ಆದರೆ, ಭಾರತದ ರಾಜಕೀಯ ಪಕ್ಷಗಳ ಇಂದಿನ ಪರಿಸ್ಥಿತಿಯಲ್ಲಿ ಇದು ಅಪೇಕ್ಷಿತವಲ್ಲ.
ಇದನ್ನು ನಿಭಾಯಿಸುವುದಕ್ಕಾಗಿ, ತಮ್ಮ ಆಂತರಿಕ ವ್ಯವಹಾರಗಳಲ್ಲಿ ರಾಜಕೀಯ ಪಕ್ಷಗಳನ್ನು ಪ್ರಜಾಸತ್ತಾತ್ಮಕವನ್ನಾಗಿ ಮಾಡುವ ಅಗತ್ಯವಿದೆ. ಇದು ಎಲ್ಲಾ ರಾಜಕೀಯ ಪಕ್ಷಗಳಿಗೆ ನಿಷಿದ್ಧವಾದರೂ, ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಎಲ್ಲಾ ಆಯೋಗಗಳು ಮತ್ತು ವರದಿಗಳು ಪದೇ ಪದೇ ಇದನ್ನೇ ಶಿಫಾರಸು ಮಾಡಿವೆ.
ಮೂರನೆಯದು, ಎಲ್ಲಾ ರಾಜಕೀಯ ಪಕ್ಷಗಳ ಹಣಕಾಸು ವ್ಯವಹಾರಗಳನ್ನು ಪಾರದರ್ಶಕಗೊಳಿಸುವುದು. ಇದನ್ನು ಕೂಡ ಕಳೆದ ೪೦ ವರ್ಷಗಳಲ್ಲಿ ಪದೇ ಪದೇ ಶಿಫಾರಸು ಮಾಡಲಾಗಿದೆ. ಆದರೆ, ಚುನಾವಣಾ ಬಾಂಡ್ ಯೋಜನೆಯೊಂದಿಗೆ ಪರಿಸ್ಥಿತಿಯು ಮೊದಲಿಗಿಂತಲೂ ಹದಗೆಟ್ಟಿದೆ.
ಏನಾಗಬಹುದು?
ಪಕ್ಷಾಂತರ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಈ ಮೂರು ಕ್ರಮಗಳು ಅಗತ್ಯವಾಗಿವೆ. ಆದರೆ, ವಾಸ್ತವಿಕವಾಗಿ, ಈ ಕ್ರಮಗಳು ಸಂಭವಿಸುವ ಸಾಧ್ಯತೆಯಿಲ್ಲ; ಕನಿಷ್ಠ ಅವಸರದಿಂದಂತೂ ಸಂಭವಿಸದು ಎನ್ನುವುದು ನಮಗೆ ಗೊತ್ತಿರಬೇಕು. ರಾಜಕೀಯ ಪಕ್ಷಗಳು ಈ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ, ತಾವು ಈ ನೆಲದ ಕಾನೂನಿಗಿಂತ ಮೇಲಿದ್ದೇವೆ ಹಾಗೂ ಯಾವುದೇ ಕಾನೂನು ತಮಗೆ ಅನ್ವಯಿಸುವುದಿಲ್ಲ ಎನ್ನುವುದು ಅವುಗಳಿಗೆ ಮನವರಿಕೆಯಾದಂತೆ ಕಾಣುತ್ತದೆ.
ಇದು ಪದೇ ಪದೇ ಸಾಬೀತಾಗಿದೆ. ಉದಾಹರಣೆಗೆ; ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಎಫ್ಸಿಆರ್ಎ (ವಿದೇಶಿ ಕರೆನ್ಸಿ ನಿಯಂತ್ರಣ ಕಾಯ್ದೆ)ಯನ್ನು ಉಲ್ಲಂಘಿಸಿವೆ ಎಂಬುದಾಗಿ ೨೦೧೪ರಲ್ಲಿ ದಿಲ್ಲಿ ಹೈಕೋರ್ಟ್ ಹೇಳಿತು ಮತ್ತು ಆರು ತಿಂಗಳ ಒಳಗೆ ಆ ಪಕ್ಷಗಳ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಿತು. ಇಲ್ಲಿ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ. ಮಾತ್ರವಲ್ಲ, ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಎಫ್ಸಿಆರ್ಎಗೆ ಮೂರು ತಿದ್ದುಪಡಿಗಳನ್ನು ತರಲಾಯಿತು.
ಇನ್ನೊಂದು ಉದಾಹರಣೆಯನ್ನು ಕೊಡಬಹುದಾಗಿದೆ. ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ)ವು ದೇಶದಲ್ಲಿ ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ)ಯನ್ನು ಜಾರಿಗೊಳಿಸುವ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯಾಗಿದೆ. ರಾಜಕೀಯ ಪಕ್ಷಗಳು ಆರ್ಟಿಐ ಕಾಯ್ದೆಯಡಿ ಸಾರ್ವಜನಿಕ ಸಂಸ್ಥೆಗಳಾಗಿರುತ್ತವೆ ಎಂಬುದಾಗಿ ಸಿಐಸಿಯ ಪೂರ್ಣಪೀಠವು ೨೦೧೩ ಮಾರ್ಚ್ನಲ್ಲಿ ಆದೇಶ ನೀಡಿತು. ಆದರೆ, ಅದರ ಆದೇಶವನ್ನು ಪಾಲಿಸಲು ಆರು ರಾಜಕೀಯ ಪಕ್ಷಗಳು ಸಾರಾಸಗಟಾಗಿ ನಿರಾಕರಿಸುತ್ತಿವೆ.
ಈ ಮೂರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ರಾಜಕೀಯ ಪಕ್ಷಗಳು ಸಿದ್ಧವಿಲ್ಲದಿದ್ದರೆ, ಜನರ ಕೊನೆಯ ಆಯ್ಕೆಯಾಗಿರುವ ನ್ಯಾಯಾಂಗ ಏನು ಮಾಡಬಹುದು?
ಇದರ ಬಗ್ಗೆ ವಿಶ್ಲೇಷಣೆ ಮಾಡುವುದಕ್ಕಿಂತ, ಸಂಬಂಧಿತ ವಿಷಯವೊಂದಕ್ಕೆ ಸಂಬಂಧಿಸಿ ೨೦೨೧ ಆಗಸ್ಟ್ ೧೦ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಒಂದು ಪ್ಯಾರಾವನ್ನು ಇಲ್ಲಿ ಉಲ್ಲೇಖಿಸುವುದೇ ಉತ್ತಮ:
‘‘ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿಗಳು ರಾಜಕೀಯಕ್ಕೆ ಬರುವುದನ್ನು ತಡೆಯುವುದಕ್ಕಾಗಿ ಅಗತ್ಯ ತಿದ್ದುಪಡಿಗಳನ್ನು ತರಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಾಗೂ ಸಂದರ್ಭಕ್ಕೆ ತಕ್ಕಂತೆ ವ್ಯವಹರಿಸುವಂತೆ ಈ ನ್ಯಾಯಾಲಯವು ಪದೇ ಪದೇ ದೇಶದ ಸಂಸದರು/ಶಾಸಕರಿಗೆ ಮನವಿ ಮಾಡಿದೆ. ಆದರೆ, ಅವರು ಈ ಮನವಿಗಳಿಗೆ ಕಿವುಡರಾಗಿದ್ದಾರೆ. ಗಾಢ ನಿದ್ದೆಯಿಂದ ಎಚ್ಚೆತ್ತುಕೊಳ್ಳಲು ರಾಜಕೀಯ ಪಕ್ಷಗಳು ನಿರಾಕರಿಸುತ್ತಿವೆ. ಈ ವಿಷಯದಲ್ಲಿ ಏನಾದರೂ ತುರ್ತಾಗಿ ಮಾಡುವ ಅಗತ್ಯವಿದೆ ಎಂದು ನಮಗೆ ಅನಿಸಿದರೂ, ಸಂವಿಧಾನದ ಅಧಿಕಾರ ಹಂಚಿಕೆ ಸೂತ್ರದ ಹಿನ್ನೆಲೆಯಲ್ಲಿ ನಮ್ಮ ಕೈಗಳನ್ನು ಕಟ್ಟಿ ಹಾಕಲಾಗಿದೆ. ಸರಕಾರದ ಶಾಸಕಾಂಗ ವಿಭಾಗಕ್ಕೆ ಮೀಸಲಾಗಿರಿಸಲಾಗಿರುವ ಕ್ಷೇತ್ರಕ್ಕೆ ನಾವು ಅತಿಕ್ರಮಣ ಮಾಡುವಂತಿಲ್ಲ. ನಾವು ಸಂಸದರ ಆತ್ಮಸಾಕ್ಷಿಗೆ ಮನವಿ ಮಾಡಬಹುದು ಹಾಗೂ ಅವರು ಶೀಘ್ರವಾಗಿ ಎಚ್ಚೆತ್ತುಕೊಂಡು ರಾಜಕೀಯ ಅಪರಾಧೀಕರಣವನ್ನು ಕಿತ್ತುಹಾಕಲು ದೊಡ್ಡ ಶಸ್ತ್ರಚಿಕಿತ್ಸೆಯೊಂದನ್ನು ನಡೆಸುತ್ತಾರೆ ಎಂಬುದಾಗಿ ಆಶಿಸಬಹುದಷ್ಟೆ’’.
೨೦ ವರ್ಷಗಳ ಹಿಂದೆ, ೨೦೦೨ರಲ್ಲಿ ಇದೇ ಸುಪ್ರೀಂ ಕೋರ್ಟ್ ಏನು ಹೇಳಿದೆ ಎಂದು ನೋಡೋಣ:
‘‘ಈ ನ್ಯಾಯಾಲಯದ ವಿವಿಧ ಆದೇಶಗಳ ಸಾರದ ಪ್ರಕಾರ, ಶಾಸಕಾಂಗ ಮತ್ತು ಕಾರ್ಯಾಂಗಗಳಿಗೆ ಮೀಸಲಾಗಿರುವ ಕ್ಷೇತ್ರವು ಖಾಲಿಯಾಗಿಯೇ ಉಳಿದು ಸಾರ್ವಜನಿಕ ಹಿತಾಸಕ್ತಿಗೆ ಮಾರಕವಾದರೆ, ಈ ನ್ಯಾಯಾಲಯವು ಮಧ್ಯಪ್ರವೇಶಿಸಬಹುದಾಗಿದೆ ಎನ್ನುವುದು ಸ್ಪಷ್ಟ. ಹಾಗಾಗಿ, ಸಾರ್ವಜನಿಕ ಹಿತಾಸಕ್ತಿಯ ಪರವಾಗಿ ಕೆಲಸ ಮಾಡುವಂತೆ ಕಾರ್ಯಾಂಗಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಲು ಸಂವಿಧಾನದ ೩೨, ೧೪೧ ಮತ್ತು ೧೪೨ನೇ ವಿಧಿಗಳನ್ವಯ ಈ ನ್ಯಾಯಾಲಯಕ್ಕೆ ಬೇಕಾದಷ್ಟು ಕಾರ್ಯವ್ಯಾಪ್ತಿಯಿದೆ’’.
೨೦೦೨ರಲ್ಲಿ ಸುಪ್ರೀಂ ಕೋರ್ಟ್, ಸಾರ್ವಜನಿಕ ಹಿತಾಸಕ್ತಿಯ ಪರವಾಗಿ ಕೆಲಸ ಮಾಡುವಂತೆ ಕಾರ್ಯಾಂಗಕ್ಕೆ ‘ಅಗತ್ಯ ನಿರ್ದೇಶನಗಳನ್ನು’ ನೀಡಿತು ಹಾಗೂ ‘ಗಾಢ ನಿದ್ದೆ’ಯಲ್ಲಿದ್ದವರನ್ನು ಎಬ್ಬಿಸಿತು. ೨೦೨೧ರಲ್ಲಿ, ಅದೇ ಸುಪ್ರೀಂ ಕೋರ್ಟ್ನ ‘‘ಕೈಗಳು ಕಟ್ಟಿಹಾಕಲ್ಪಟ್ಟಿವೆ’’!
ಇದಕ್ಕಿಂತ ಹೆಚ್ಚೇನು ಹೇಳಲು ಸಾಧ್ಯ?
ಕೃಪೆ: thewire.in