650 ಹೊಸ ಬಸ್ಗಳ ಖರೀದಿಗೆ ಟೆಂಡರ್: ಸಾರಿಗೆ ಸಚಿವ ಶ್ರೀರಾಮುಲು
''ಖಾಲಿ ಇರುವ 2,814 ಚಾಲಕರ ಹುದ್ದೆಗಳ ಶೀಘ್ರ ನೇಮಕ''

ಬೆಂಗಳೂರು, ಸೆ. 21: ‘ಸಾರಿಗೆ ಇಲಾಖೆಯಿಂದ 650 ಹೊಸ ಬಸ್ ಖರೀದಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಹೊಸ ಬಸ್ ಬಂದ ಕೂಡಲೇ ಅಗತ್ಯ ಇರುವ ಕಡೆಗಳಲ್ಲಿ ವಾಹನಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು' ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಇಂದಿಲ್ಲಿ ಭರವಸೆ ನೀಡಿದ್ದಾರೆ.
ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಈಶ್ವರ್ ಖಂಡ್ರೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಸಾಮಾನ್ಯ ಬಸ್ಗಳನ್ನು 9 ಲಕ್ಷ ಕಿ.ಮೀ ಹಾಗೂ ಕರೋನ ಹವಾನಿಯಂತ್ರಿತ ಸ್ಲೀಪರ್ ಬಸ್ಸುಗಳನ್ನು 11ಲಕ್ಷ ಕಿ.ಮೀ ಕ್ರಮಿಸಿದ ಬಳಿಕ ಸ್ಥಗಿತಗೊಳಿಸಿ ನಿಷ್ಕ್ರಿಯೆಗೊಳಿಸಲಾಗುತ್ತಿದೆ. 2022ರ ಜುಲೈ 31ಕ್ಕೆ 44,663 ವಾಹನಗಳಿದ್ದು, ಆ ಪೈಕಿ 1,797 ವಾಹನಗಳು ನಿಗದಿತ 9ಲಕ್ಷ ಕಿ.ಮೀ.ಗೂ ಅಧಿಕ ಕಿ.ಮೀ ಕ್ರಮಿಸಿದ್ದು, ಅವುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದರು.
ಹಳ್ಳಿಗಳಿಗೆ ಬಸ್ ಬಿಡಿ: ‘ಕೋವಿಡ್ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಕ್ಕೆ ಸಂಚರಿಸುತ್ತಿದ್ದ ಬಸ್ ಮಾರ್ಗಗಳನ್ನು ಸ್ಥಗಿತಗೊಳಿಸಿದ್ದು, ರಾಜ್ಯದ ವಿವಿಧ ಗ್ರಾಮಗಳಿಂದ ಜಿಲ್ಲೆ, ತಾಲೂಕು ಕೇಂದ್ರಗಳಿಗೆ ಸಾರಿಗೆ ಬಸ್ಗಳೇ ಇಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದ ಶಾಲಾ-ಕಾಲೇಜುಗಳಿಗೆ ಮಕ್ಕಳ ತೊಂದರೆಯಾಗುತ್ತಿದ್ದು, ಕೂಡಲೇ ಬಸ್ಗಳನ್ನು ಆರಂಭಿಸಬೇಕು' ಎಂದು ಈಶ್ವರ್ ಖಂಡ್ರೆ, ತುಕಾರಾಮ್, ನರಸಿಂಹನಾಯಕ್ ಸೇರಿ ಇನ್ನಿತರರು ಆಗ್ರಹಿಸಿದರು. ಈ ಕುರಿತು ಪರಿಶೀಲಿಸಿ ಮಕ್ಕಳಿಗೆ ತೊಂದರೆ ಆಗದಂತೆ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶ್ರೀರಾಮುಲು ಭರವಸೆ ನೀಡಿದರು.
ಚಾಲಕರ ನೇಮಕ: ‘ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ 2,814 ಚಾಲಕರ ಹುದ್ದೆಗಳನ್ನು ಶೀಘ್ರದಲ್ಲೇ ನೇಮಕ ಮಾಡಿಕೊಳ್ಳಲಾಗುವುದು. ಚಾಲಕರು ಹಾಗೂ ಇದರ ಜೊತೆಗೆ ಹೆಚ್ಚುವರಿಯಾಗಿ ಚಾಲಕ ಕಂ ನಿರ್ವಾಹಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಎಲ್ಲೆಲ್ಲಿ ಅಗತ್ಯವಿದೆಯೋ ಅಂತಹ ಕಡೆ ಇವರನ್ನು ನಿಯೋಜನೆ ಮಾಡಿಕೊಳ್ಳಲಾಗುವುದು' ಎಂದು ಶ್ರೀರಾಮುಲು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.







