'ಕೆರೆ ನುಂಗಿದ ಸಾಮ್ರಾಟ್..!': ಸಚಿವ ಆರ್.ಅಶೋಕ್ಗೂ ತಟ್ಟಿದ ‘ಪೋಸ್ಟರ್' ಬಿಸಿ
![ಕೆರೆ ನುಂಗಿದ ಸಾಮ್ರಾಟ್..!: ಸಚಿವ ಆರ್.ಅಶೋಕ್ಗೂ ತಟ್ಟಿದ ‘ಪೋಸ್ಟರ್ ಬಿಸಿ ಕೆರೆ ನುಂಗಿದ ಸಾಮ್ರಾಟ್..!: ಸಚಿವ ಆರ್.ಅಶೋಕ್ಗೂ ತಟ್ಟಿದ ‘ಪೋಸ್ಟರ್ ಬಿಸಿ](https://www.varthabharati.in/sites/default/files/images/articles/2022/09/25/350808-1664118203.jpg)
ಆರ್.ಅಶೋಕ್
ಬೆಂಗಳೂರು, ಸೆ.25: ‘ರಾಜ್ಯ ಬಿಜೆಪಿ ಸರಕಾರ ಭ್ರಷ್ಟಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪೇಸಿಎಂ ಕ್ಯೂಆರ್ ಕೂಡ್ ಅಭಿಯಾನ ನಡೆಸುತ್ತಿರುವ ನಡುವೆ ಕಂದಾಯ ಸಚಿವ ಆರ್.ಅಶೋಕ್ ಅವರ ಅಕ್ರಮಗಳ ಆರೋಪ ಕುರಿತು ಉಲ್ಲೇಖಿಸಿ ಪೋಸ್ಟರ್ ಅಂಟಿಸಲಾಗಿದೆ.
ಶನಿವಾರ ತಡರಾತ್ರಿ ಅಶೋಕ್ ಅವರು ಪ್ರತಿನಿಧಿಸುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಕೆರೆಗಳನ್ನು ನುಂಗಿದ ಸಾಮ್ರಾಟ ಅಶೋಕ್ ಎಂದು ಉಲ್ಲೇಖಿಸಿ ಪೋಸ್ಟರ್ ಗಳನ್ನು ಅಂಟಿಸಲಾಗಿದೆ.
ಅಶೋಕ್ ಅವರ ಮೇಲಿನ ಅಕ್ರಮ ಆರೋಪಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವುದನ್ನು ಉಲ್ಲೇಖಿಸಿ ಪದ್ಮನಾಭನಗರ ಉದ್ಯಾನ, ಅಂಗಡಿ, ಮುಂಗಟ್ಟು, ಬಸ್ ನಿಲ್ದಾಣ ಸೇರಿದಂತೆ ಜನದಟ್ಟಣೆ ಪ್ರದೇಶಗಳಲ್ಲಿ ಪೋಸ್ಟರ್ ಗಳು ರಾರಾಜಿಸುತ್ತಿವೆ.
ನೂರಾರು ಪೋಸ್ಟರ್ಗಳನ್ನು ಅಂಟಿಸಲಾಗಿದ್ದು, ರವಿವಾರ ಸಾರ್ವಜನಿಕರನ್ನು ನಿಂತು ಓದುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನೂ, ಕಾಂಗ್ರೆಸ್ ಕಾರ್ಯಕರ್ತರು ಈ ಪೋಸ್ಟರ್ಗಳನ್ನು ಅಂಟಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನೂ, ಈ ಭಿತ್ತಿಪತ್ರದ ಚಿತ್ರಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದ್ದಾರೆ. ಅಂಟಿಸಿದ್ದ ಭಿತ್ತಿಪತ್ರಗಳನ್ನು ಕೆಲವೆಡೆ ಕಿತ್ತು ಹಾಕಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು, ಪೇಸಿಎಂ ಅಭಿಯಾನ ಅಂಗವಾಗಿ ಪೋಸ್ಟರ್ ಗಳನ್ನು ಯುವಜನರು ಹಾಗೂ ವಿದ್ಯಾರ್ಥಿಗಳು ಹೆಚ್ಚಾಗಿ ಓಡಾಡುವ ಪ್ರಯಾಣಿಕರ ತಂಗುದಾಣ, ಹಾಗೂ ಇತರ ಸ್ಥಳಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿದ್ದೇವೆ. 40 ಪಸೆರ್ಂಟ್ ಕಮಿಷನ್ ಸರಕಾರದ ವಿರುದ್ಧ ಜಾಗೃತಿ ಮೂಡಿಸುವ ಅಭಿಯಾನವಿದು.ಆದರೆ, ಅಶೋಕ್ ವಿರುದ್ಧದ ಭಿತ್ತಿಪತ್ರಗಳ ಕುರಿತು ಮಾಹಿತಿ ಇಲ್ಲ ಎಂದರು.
ಈ ಕುರಿತು ಟ್ವಿಟ್ ಮೂಲಕ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಪರೀಕ್ಷೆಯಲ್ಲಿ ಉತ್ತೀರ್ಣ ಆಗಬೇಕೆಂದರೆ, 35ರಷ್ಟು ಅಂಕ ಪಡೆಯಬೇಕು. ಬಿಜೆಪಿ ಸರಕಾರದಲ್ಲಿ ಕಾಮಗಾರಿ ಹಣ ಪಡೆಯಬೇಕೆಂದರೆ, ಶೇ.40ರಷ್ಟು ಕಮಿಷನ್ ನೀಡಲೇಬೇಕು ಎಂದು ಟೀಕಿಸಿದ್ದಾರೆ.
ಬಿಜೆಪಿ ಸರಕಾರ ಭ್ರಷ್ಟಾಚಾರವನ್ನು ಜನರ ಮುಂದಿಡಲು ಕಾಂಗ್ರೆಸ್ ಪೇಸಿಎಂ ಪೋಸ್ಟರ್ ಅಭಿಯಾನವನ್ನು ಪ್ರಾರಂಭಿಸಿದೆ. ದೇಶಾದ್ಯಂತ ಈ ಪೋಸ್ಟರ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಕೆಸರೆರೆಚಾಟಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ರೈತ ಸಂಘದಿಂದ 'Payfarmer' ಅಭಿಯಾನ