VIDE0 -ಕೋಕಾಕೋಲಾ ಕುಡಿದಿಲ್ಲ, ಮುಂದೆಯೂ ಕುಡಿಯಲ್ಲ: ಸಿದ್ದರಾಮಯ್ಯ
ಬೆಂಗಳೂರು, ಸೆ.25: ಇಲ್ಲಿಯವರೆಗೂ ತಂಪು ಪಾನಿಯ ಕೊಕಾಕೋಲಾ ಕುಡಿದಿಲ್ಲ, ಮುಂದೆಯೂ ಕುಡಿಯುವುದಿಲ್ಲ. ಈ ಕಂಪೆನಿಯ ವಿರುದ್ಧ ನಾನು ಹೋರಾಟ ಮಾಡಿದ್ದೇ' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ರವಿವಾರ ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕೇಂದ್ರದ ಮಾಜಿ ಸಚಿವ, ದಿವಂಗತ ಜಾರ್ಜ್ ಫೆರ್ನಾಂಡಿಸ್ ಅವರ ಜೀವನ ಚರಿತ್ರೆ ಕುರಿತಾದ ‘ದಿ ಲೈಫ್ ಆ್ಯಂಡ್ ಟೈಮ್ಸ್ ಆಫ್ ಜಾರ್ಜ್ ಫೆರ್ನಾಂಡಿಸ್’ ಪುಸ್ತಕವನ್ನು ಬಿಡುಗಡೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಮೊರಾರ್ಜಿ ಪ್ರಧಾನಿಯಾಗಿದ್ದಾಗ ಜಾರ್ಜ್ ಫೆರ್ನಾಂಡಿಸ್ ಕೈಗಾರಿಕಾ ಸಚಿವರಾಗಿದ್ದರು. ಆಗಲೂ ಮೈಸೂರಿಗೆ ಬಂದಿದ್ದರು. ನಾನು ಮೈಸೂರಿನ ಸ್ನೇಹಿತರನ್ನು ಸೇರಿಸಿ ಕೊಕಾಕೋಲಾ ಕಂಪೆನಿ ವಿರುದ್ದ ಹೋರಾಟ ಮಾಡಿದ್ದೆ. ಅಂದು ಯಾರೂ ಇನ್ನು ಮುಂದೆ ಕೊಕಾಕೋಲಾ ಕುಡಿಯುವುದಿಲ್ಲವೆಂದು ಪ್ರಮಾಣ ಮಾಡಿ ಎಂದು ಪ್ರಮಾಣ ಮಾಡಿಸಿದ್ದೆ. ಅಂದಿನಿಂದ ಇಲ್ಲಿಯವರೆಗೂ ಕೊಕಾಕೋಲಾ ಕುಡಿದಿಲ್ಲ, ಮುಂದೆಯೂ ಕುಡಿಯಲ್ಲ ಎಂದು ಸಿದ್ದರಾಮಯ್ಯ ನೆನೆದರು.
ಜಾರ್ಜ್ ಅವರು ನನಗೆ 1971, 72ರಿಂದಲೂ ಪರಿಚಯ. ಅಂತಿಮ ಕಾನೂನು ಓದುವಾಗ ಒಮ್ಮೆ ಮೈಸೂರಿಗೆ ಬಂದಿದ್ದರು. ಆಗ ನಾನು ರೈತ ಸಂಘದಲ್ಲಿದ್ದೆ. ಆಗ ಜಾರ್ಜ್ ಫೆರ್ನಾಂಡಿಸ್ ಅವರ ಪರಿಚಯವಾಯಿತು. ಅಲ್ಲಿಂದ 1999ರವರಗೆ ಒಡನಾಟ ಇತ್ತು. ನಾನು ರಾಜಕೀಯವಾಗಿ ಬೆಳೆಯಲು ಕಾರಣರಾದವರಲ್ಲಿ ಜಾರ್ಜ್ ಫೆರ್ನಾಂಡಿಸ್ ಒಬ್ಬರು ಎಂದರು.