ಬಿಲ್ಲವ ಸಮಾಜ ಸೇವಾ ಸಂಘ ಮಹಿಳಾ ಘಟಕದ ವಾರ್ಷಿಕೋತ್ಸವ
ಕುಂದಾಪುರ, ಸೆ.27: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರದ ಬಿಲ್ಲವ ಮಹಿಳಾ ಘಟಕದ 20ನೇ ವಾರ್ಷಿಕೋತ್ಸವ ಕಾರ್ಯಕ್ರಮವು ರವಿವಾರ ಕುಂದಾಪುರ ಶ್ರೀನಾರಾ ಯಣ ಗುರು ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮುಂಬಯಿ ಬಿಲ್ಲವ ಛೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಯ ಅಧ್ಯಕ್ಷ ಎನ್.ಟಿ ಪೂಜಾರಿ ಮಾತನಾಡಿ, ಸಮಾಜದ ಒಳಿತಿಗಾಗಿ ಮಾಡುವ ಸಂಘಟನೆಯಲ್ಲಿ ಯಾವುದೇ ರಾಜಕೀಯ ಇರಬಾರದು. ರಾಜಕೀಯ ರಹಿತವಾಗಿ ಕೆಲಸ ಮಾಡುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪ ಬೇಕು. ಮಾತ್ರವಲ್ಲದೆ ಸಂಘಟನೆ ನಿಂತ ನೀರಾಗದೆ ಸದಾ ಚಲನೆಯಲ್ಲಿದ್ದು ಸಕ್ರೀಯವಾಗಬೇಕು ಎಂದರು.
ಮಹಿಳೆಯರು ಸಬಲರಾದರೆ ಸಂಘ-ಸಂಸ್ಥೆ ಹಾಗೂ ದೇಶ ಉನ್ನತ ಸ್ಥಾನದತ್ತ ಹೋಗುತ್ತದೆ. ಇಂದು ದೇಶದ ವಿವಿದೆಡೆ ಎಲ್ಲಾ ಸ್ಥರಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಯುವತಿಯರು ಗಣನೀಯ ಸಾಧನೆ ಮಾಡುತ್ತಿರುವುದು ಈ ಮಣ್ಣಿನ ವೈಶಿಷ್ಟ್ಯತೆ ಹಾಗೂ ತಂದೆತಾಯಿ ಕಲಿಸಿದ ಸಂಸ್ಕಾರದಿಂದ ಸಾಧ್ಯವಿದೆ ಎಂದರು.
ಕುಂದಾಪುರದ ಬಿಲ್ಲವ ಮಹಿಳಾ ಘಟಕಾಧ್ಯಕ್ಷೆ ಸುಮನ ಬಿದ್ಕಲಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಉದ್ಯಮಿ ಯಶೋಧ ಎನ್. ಪೂಜಾರಿ, ಸಾಮಾಜಿಕ ಕಾರ್ಯಕರ್ತೆ ವೈಶಾಲಿ ಕೋಟ್ಯಾನ್, ಉಡುಪಿ ನೇತ್ರಜ್ಯೋತಿ ಕಾಲೇಜಿನ ಉಪನ್ಯಾಸಕಿ ಮಂಜುಳಾ ತೆಕ್ಕಟ್ಟೆ, ಕುಂದಾ ಪುರ ಬಿಲ್ಲವ ಮಹಿಳಾ ಘಟಕದ ಸ್ಥಾಪಕಾಧ್ಯಕ್ಷೆ ಗುಣರತ್ನಾ, ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಅಜಿತ್ ಪೂಜಾರಿ ರಂಗನಹಿತ್ಲು ಉಪಸ್ಥಿತರಿದ್ದರು.
ಬಿಲ್ಲವ ಮಹಿಳಾ ಘಟಕದ ಕೋಶಾಧಿಕಾರಿ ಗಿರಿಜಾ ಮಾಣಿಗೋಪಾಲ್ ಸ್ವಾಗತಿಸಿದರು. ಗುಲಾಬಿ ಪೂಜಾರಿ ವರದಿ ವಾಚಿಸಿದರು. ಭಾಸ್ಕರ ವಿಠಲವಾಡಿ ಕಾರ್ಯಕ್ರಮ ನಿರೂಪಿಸಿದರು. ಸುನೇತ್ರಾ ಸತೀಶ್ ಕೋಟ್ಯಾನ್ ವಂದಿಸಿದರು.