ಹರೇಕಳ: ಪ್ರಯಾಣಿಕರ ತಂಗುದಾಣ ಉದ್ಘಾಟನೆ
ಕೊಣಾಜೆ: ಉಳ್ಳಾಲ ತಾಲೂಕಿನ ಹರೇಕಳ ಗ್ರಾಮ ವ್ಯಾಪ್ತಿಯ ಉಲ್ಲಾಸ್ ನಗರ ಬಾವಲಿಗುರಿಯಲ್ಲಿ ಯು.ಟಿ. ಫರೀದ್ ಫೌಂಡೇಶನ್ ವತಿಯಿಂದ ನಿರ್ಮಿಸಲಾದ ಎರಡು ಕೊಠಡಿಗಳ ವಾಣಿಜ್ಯ ಕಟ್ಟಡ ಹಾಗೂ ಪ್ರಯಾಣಿಕರ ತಂಗುದಾಣ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ವಿಧಾನ ಸಭೆಯ ಪ್ರತಿಪಕ್ಷ ಉಪ ನಾಯಕ, ಶಾಸಕ ಯು.ಟಿ. ಖಾದರ್ ಅವರು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಕುಗ್ರಾಮವಾಗಿದ್ದ ಹರೇಕಳ ಗ್ರಾಮದ ಅಭಿವೃದ್ಧಿಗೆ ಯಾವುದೇ ಆದಾಯ ವರಮಾನ ಇರಲಿಲ್ಲ. ಅಭಿವೃದ್ಧಿ ಕುಂಠಿತವಾಗಿತ್ತು. ಆದರೆ ಈಗ ಈ ಭಾಗದಲ್ಲಿ ಹರೇಕಳದಿಂದ ಅಡ್ಯಾರ್ ಸಂಪರ್ಕಿಸುವ ಬೃಹತ್ ಸೇತುವೆ ನಿರ್ಮಾಣದ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೂ ನಗರಕ್ಕೆ ಶೀಘ್ರಗತಿಯಲ್ಲಿ ತಲುಪಲು ಸೇತುವೆ ಪೂರಕವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಹರೇಕಳ ಪಂಚಾಯತ್ ಅಧ್ಯಕ್ಷ ಬದ್ರುದ್ದೀನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಹರೇಕಳ ಹಾಜಬ್ಬ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮುಸ್ತಫಾ ಹರೇಕಳ, ಪಿಡಿಒ ಯಶವಂತ ಬೆಳ್ಚಾಡ, ಉಪಾಧ್ಯಕ್ಷೆ ಕಲ್ಯಾಣ, ಮಾಜಿ ಅಧ್ಯಕ್ಷ ಎಚ್. ಶಾಲಿ, ಬಶೀರ್, ಗುಲಾಬಿ, ಅನಿತಾ ಡಿಸೋಜ, ಅಬ್ದುಲ್ ಸತ್ತಾರ್, ಅಬೂಬಕ್ಕರ್ ಸಿದ್ದಿಕ್, ಅಬ್ದುಲ್ ಮಜೀದ್, ಮುಖಂಡರಾದ ಬಶೀರ್ ಉಂಬುದ, ಝಕಾರಿಯಾ ಮಲಾರ್, ಸುರೇಂದ್ರ ಕಾಂಬ್ಳಿ ಅಡ್ಯಾರ್, ಅಬ್ದುಲ್ ರಶೀದ್ ಬೆಳ್ಮ ಉಪಸ್ಥಿತರಿದ್ದರು.