ಬೆಂಗಳೂರು | ದಲಿತರ ಭೂ ಕಬಳಿಕೆ ಆರೋಪ: ರವಿಶಂಕರ್ ಗುರೂಜಿ ಆಶ್ರಮ ಮುಂದೆ ಪ್ರತಿಭಟನೆ, ಆಕ್ರೋಶ
ಬೆಂಗಳೂರು, ಸೆ.29: ದಲಿತ ಸಮುದಾಯದ ವೃದ್ಧ ಮಹಿಳೆಯ ಭೂಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ಆರ್ಟ್ ಆಫ್ ಲೀವಿಂಗ್ ರವಿಶಂಕರ್ ಗುರೂಜಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ, ಆಕ್ರೋಶ ಹೊರ ಹಾಕಲಾಯಿತು.
ಗುರುವಾರ ಸಮತಾ ಸೈನಿಕ ದಳ ನೇತೃತ್ವದಲ್ಲಿ ಕನಕಪುರ ರಸ್ತೆಯ ಉದಿಪಾಳ್ಯ ಆಶ್ರಮದ ಮುಂದೆ ಜಮಾಯಿಸಿದ ಹೋರಾಟಗಾರರು, ಅಧಿಕಾರ, ದೌರ್ಜನ್ಯದ ಮೂಲಕ ದಲಿತರ ಭೂಮಿಯನ್ನು ಕಬಳಿಕೆ ಮಾಡಿದ್ದು, ಈ ಸಂಬಂಧ ರವಿಶಂಕರ್ ಗುರೂಜಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್ಎಸ್ಡಿ ರಾಷ್ಟ್ರೀಯ ಅಧ್ಯಕ್ಷ ಎಂ.ವೆಂಕಟಸ್ವಾಮಿ ಸ್ವಾಮಿ, ರವಿಶಂಕರ್ ಗುರೂಜಿ ಅವರಿಗೆ ದಲಿತರು, ಶೋಷಿತರ ಪರವಾಗಿ ಕಾಳಜಿ ಇಲ್ಲ. ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಇದನ್ನು ವಿರೋಧಿಸಿ ನ್ಯಾಯ ಸಿಗುವ ತನಕ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ರವಿಶಂಕರ್ ಆಶ್ರಮದಿಂದ ಲಕ್ಷ್ಮೀಪುರದ ದಿವಂಗತ ಹನುಮಯ್ಯನ ಹೊಣೆಯ 70 ವರ್ಷ ವಯೋವೃದ್ಧ ದಲಿತ ಮಹಿಳೆ ರಂಗಮ್ಮನಿಗೆ ಸೇರಿರುವ ಸರ್ವೇ ನಂ 132/62ರ 2 ಎಕರೆ ಜಮೀನನ್ನು ಬೇನಾಮಿ ಹೆಸರುಗಳ ನಕಲಿ ದಾಖಲೆ ಸೃಷ್ಠಿಸಿ ಆಶ್ರಮ ಕಬಳಿಸಿದ್ದು, ಈ ಭೂಮಿಯನ್ನು ಕೂಡಲೇ ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರು.