‘ಕುಡ್ಲದ ಪಿಲಿ ಪರ್ಬ’ ಹುಲಿವೇಷ ಸ್ಪರ್ಧಾಕೂಟ

ಮಂಗಳೂರು, ಅ.2: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ, ನಗರದ ನೆಹರೂ ಮೈದಾನದ ಫುಟ್ಬಾಲ್ ಗ್ರೌಂಡ್ನಲ್ಲಿ ಇಂದು ತುಳುನಾಡಿನ ಸಾಂಪ್ರದಾಯಿಕ ಕಲೆ ಹುಲಿವೇಷ ಸ್ಪರ್ಧಾಕೂಟ ‘ಕುಡ್ಲದ ಪಿಲಿ ಪರ್ಬ- 2022’ ಆಯೋಜಿಸಲಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾರ್ಗದರ್ಶನ ಹಾಗೂ ಶಾಸಕ ಡಿ.ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಡೆದ ಪಿಲಿ ಪರ್ಬ ಹುಲಿ ಕುಣಿತದ ವಿಶೇಷತೆಯ ಪ್ರದರ್ಶನದ ವೇದಿಕೆಯಾಗಿ ಕಂಡು ಬಂತು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಕುಡ್ಲದ ಪಿಲಿ ಪರ್ಬಕ್ಕೆ ಚಾಲನೆ ನೀಡಿದರು. ತುಳುನಾಡಿನ ಕಲೆಯಾದ ಹುಲಿ ವೇಷ ಸ್ಪರ್ಧೆ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಧ್ವನಿ- ಬೆಳಕಿನ ವ್ಯವಸ್ಥೆಯೊಂದಿಗೆ ನಡೆದ ಹುಲಿ ಕುಣಿತದಲ್ಲಿ ಸ್ಪರ್ಧಿಗಳು ಆಕರ್ಷಕ ಪ್ರದರ್ಶನ ನೀಡಿದರು. ಬೆಳಗ್ಗಿನಿಂದ ಸಂಜೆವರೆಗೆ ನಡೆದ ಸ್ಪರ್ಧಾ ಕೂಟದಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಸಾಂಪ್ರದಾಯಿಕ ಕುಣಿತಗಳ ಮೂಲಕ ಹುಲಿವೇಷಧಾರಿಗಳು ನೋಡುಗರನ್ನು ಆಕರ್ಷಿಸಿದರು. ಹುಲಿ ಕುಣಿತ ಸ್ಪರ್ಧೆಯ ನಡುವೆ ಚಿಕ್ಕ ಮಕ್ಕಳಿಗೂ ವೇದಿಕೆಯಲ್ಲಿ ಕುಣಿತಕ್ಕೆ ಅವಕಾಶ ನೀಡಲಾಯಿತು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಪಿಲಿಪರ್ಬ ಆಯೋಜನೆಗೆ ನಿರೀಕ್ಷೆ ಮೀರಿ ಸ್ಪಂದನೆ ವ್ಯಕ್ತವಾಗಿದೆ. ಭಾಗವಹಿಸಿದ ಹುಲಿವೇಷ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಸಾಂಸ್ಕೃತಿಕ ಕಲೆ ಸಾಂಪ್ರದಾಯಿಕ ಶೈಲಿಯಲ್ಲಿ ನಡೆಯಬೇಕೆಂಬ ಆಸೆ ಇತ್ತು. ಅದಕ್ಕಾಗಿ ಸಕಲ ಸಿದ್ಧತೆ ಮಾಡಲಾಗಿತ್ತು. ತುಳುನಾಡಿನ ಪ್ರತಿಯೊಂದು ಕಲೆಯನ್ನು ಉಳಿಸಿ ಬೆಳೆಸುವತ್ತ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಮಾಜಿ ಮೇಯರ್ಗಳಾದ ಪ್ರೇಮಾನಂದ ಶೆಟ್ಟಿ, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಪಾಂಡೇಶ್ವರ, ಪ್ರಮುಖರಾದ ಗಿರಿಧರ ಶೆಟ್ಟಿ, ಉದಯ ಬಳ್ಳಾಲ್ಬಾಗ್, ಸಂತೋಷ್ ಕುಮಾರ್ ರೈ ಬೋಳಿಯಾರ್, ಕಸ್ತೂರಿ ಪಂಜ, ಭಾಸ್ಕರಚಂದ್ರ ಶೆಟ್ಟಿ, ರೂಪಾ ಡಿ.ಬಂಗೇರ, ಕಿಶೋರ್ ಕುಮಾರ್, ಶಕಿಲಾ ಕಾವಾ, ಜಗದೀಶ್ ಶೆಟ್ಟಿ, ಸುನಿಲ್ ಆಚಾರ್ ಮತ್ತಿತರರು ಇದ್ದರು.







