ಕೆಎಸ್ಸಾರ್ಟಿಸಿ-ಲಾರಿ ನಡುವೆ ಅಪಘಾತ: ದಂಪತಿ ಮೃತ್ಯು
ಬೆಂಗಳೂರು, ಅ.3: ಕೆಎಸ್ಸಾರ್ಟಿಸಿ ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ದಂಪತಿ ಸಾವನ್ನಪ್ಪಿದ್ದು, 20 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹೊಸಕೋಟೆಯ ಮೈಲಾಪುರ ಗೇಟ್ ಬಳಿ ನಡೆದಿದೆ.
ಚಿತ್ತೂರು ಮೂಲದ ಬಾಲಮುರುಗನ್(45) ಹಾಗೂ ಸೆಲ್ವಿ (36)ಮೃತ ದಂಪತಿಯಾಗಿದ್ದು,ಇವರ ನಾಲ್ಕು ವರ್ಷದ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ರಸ್ತೆ ಬದಿಯಲ್ಲಿ ನಿಲ್ಲಿಸಿದ ಲಾರಿಗೆ ಕೆಎಸ್ಸಾರ್ಟಿಸಿಬಸ್ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿರುವ 20 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ನಾಲ್ವರು ಸ್ಥಿತಿ ಗಂಭೀರವಾಗಿದೆ.
ಆಂಧ್ರ ಪ್ರದೇಶದ ಬಲಿಜಖಂಡ್ರಿಗದಿಂದ ರವಿವಾರ ರಾತ್ರಿ 9:30ಕ್ಕೆ ಬೆಂಗಳೂರಿಗೆ ಬರುತ್ತಿದ್ದ ಬಸ್ ತಡ ರಾತ್ರಿ ಸಮಯಕ್ಕೆ ರಾಷ್ಟ್ರೀಯ ಹೆದ್ದಾರಿ ಹೊಸಕೋಟೆ ಸಮೀಪದ ಮೈಲಾಪುರ ಗೇಟ್ ಬಳಿ ಕಲ್ಲು ತುಂಬಿದ ಲಾರಿಗೆ ಢಿಕ್ಕಿ ಹೊಡೆದಿದೆ.
ಅಪಘಾತ ಸಂಭವಿಸಿದ ತಕ್ಷಣ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಲವು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.