ಪರೇಶ್ ಮೇಸ್ತಾ ಪ್ರಕರಣ: 'ಬಿಜೆಪಿಯವರು ಕ್ಷಮೆಯಾಚಿಸಬೇಕು' ಎಂಬ ಸಿದ್ದರಾಮಯ್ಯ ಟ್ವೀಟ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ಬೆಂಗಳೂರು: ಬಿಜೆಪಿಯವರು ಮಾನ-ಮರ್ಯಾದೆ ಇದ್ದರೆ ಪರೇಶ್ ಮೇಸ್ತಾ ಪ್ರಕರಣ ಕುರಿತು ನಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು ಎಂಬ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನರು ನೆಮ್ಮದಿಯಿಂದ ದಸರಾ ಆಚರಣೆ ಮಾಡಲಿ’ - ಇವತ್ತು, ನಾಳೆ ದಸರಾ ಸಂಭ್ರಮ ಇದೆ. ‘ಈ ಎಲ್ಲಾ ವಿಚಾರಕ್ಕೂ 6ನೇ ತಾರೀಖು ಉತ್ತರಿಸ್ತೇನೆ’ ಎಂದು ಹೇಳಿದ್ದಾರೆ.
''ಹೊನ್ನಾವರದ ಪರೇಶ್ ಮೇಸ್ತನದ್ದು ಹತ್ಯೆ ಅಲ್ಲ, ಆಕಸ್ಮಿಕ ಸಾವು ಎಂಬ ಸಿಬಿಐನ ವಿಚಾರಣಾ ವರದಿ ರಾಜ್ಯ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ. ಬಿಜೆಪಿಗೆ ಮಾನ-ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು. ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ ಮೇಸ್ತನಂತಹ ಅಮಾಯಕ ಯುವಕರ ರಕ್ತ ಇದೆ. ಬಿಜಪಿ ನಾಯಕರೇ, ನೀವು ಅನುಭವಿಸುತ್ತಿರುವ ಅಧಿಕಾರದ ಕುರ್ಚಿಗೆ ಮೇಸ್ತಾನಂತಹ ಯುವಕರ ರಕ್ತದ ಕಲೆ ಅಂಟಿಕೊಂಡಿದೆ'' ಎಂದು ಸಿದ್ದರಾಮಯ್ಯ ಸೋಮವಾರ ಟ್ವೀಟ್ ಮಾಡಿದ್ದರು.





