ಉತ್ತರಾಖಂಡ: ಹಿಮಕುಸಿತಕ್ಕೆ 10 ಪರ್ವತಾರೋಹಿಗಳು ಬಲಿ, 11 ಮಂದಿಗಾಗಿ ಶೋಧ
Photo: ndtv.com
ಹೊಸದಿಲ್ಲಿ: ಉತ್ತರಾಖಂಡದಲ್ಲಿ(Uttarakhand) ಇಂದು ಸಂಭವಿಸಿದ ಭಾರೀ ಹಿಮಕುಸಿತದಲ್ಲಿ(Avalanche) ತರಬೇತಿ ಪಡೆಯುತ್ತಿದ್ದ 10 ಪರ್ವತಾರೋಹಿಗಳು ಮೃತಪಟ್ಟಿದ್ದಾರೆ. ಎಂಟು ಮಂದಿಯನ್ನು ರಕ್ಷಿಸಲಾಗಿದ್ದು ಇನ್ನೂ 11 ಮಂದಿಗಾಗಿ ರಕ್ಷಣಾ ಕಾರ್ಯಕರ್ತರು ಶೋಧಿಸುತ್ತಿದ್ದಾರೆ. ಪರ್ವತಾರೋಹಿಗಳೆಲ್ಲರೂ ಉತ್ತರಕಾಶಿಯ ನೆಹರೂ ಮೌಂಟೆನೀಯರಿಂಗ್ ಇನ್ಸ್ಟಿಟ್ಯೂಟ್ನವರಾಗಿದ್ದರು.
ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ವಾಯು ಪಡೆಯ ಹೆಲಿಕಾಪ್ಟರ್ ಗಳನ್ನು ಬಳಸಲಾಗುತ್ತಿದೆ ಎಂದು ಉತ್ತರಾಖಂಡ ಪೊಲೀಸ್ ಮುಖ್ಯಸ್ಥ ಅಶೋಕ್ ಕುಮಾರ್ ಹೇಳಿದ್ದಾರೆ.
ಸುಮಾರು 16,000 ಅಡಿ ಎತ್ತರದಲ್ಲಿ ಈ ಹಿಮಕುಸಿತ ಇಂದು ಬೆಳಿಗ್ಗೆ 9 ಗಂಟೆಗೆ ಸಂಭವಿಸಿತು. ರಕ್ಷಿಸಲ್ಪಟ್ಟ ಪರ್ವತಾರೋಹಿಗಳನ್ನು 13000 ಅಡಿ ಎತ್ತರದಲ್ಲಿರುವ ಹತ್ತಿರದ ಹೆಲಿಪ್ಯಾಡ್ಗೆ ಕರೆದೊಯ್ದು ಅಲ್ಲಿಂದ ಡೆಹ್ರಾಡೂನ್ನ ಆಸ್ಪತ್ರೆಗೆ ಸಾಗಿಸಲಾಗುವುದು ಎಂದು ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಕಚೇರಿಯಿಂದ ಮಾಹಿತಿ ದೊರಕಿದೆ.
ಇದನ್ನೂ ಓದಿ: 'ಆದಿ ಪುರುಷ್' ನಿರ್ದೇಶಕರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಮಧ್ಯಪ್ರದೇಶ ಸಚಿವ