ದುರ್ಗಾ ದೌಡ್ನಲ್ಲಿ ತಲವಾರು ಪ್ರದರ್ಶನ, ದ್ವೇಷ ಭಾಷಣ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಉಡುಪಿ ಎಸ್ಪಿಗೆ ಮನವಿ
ಉಡುಪಿ, ಅ.5: ಉಡುಪಿ ನಗರದಲ್ಲಿ ನಡೆದ ದುರ್ಗಾ ದೌಡ್ ಮೆರವಣಿಗೆಯಲ್ಲಿ ತಲವಾರು ಪ್ರದರ್ಶನ ಮತ್ತು ಪ್ರಚೋದನಕಾರಿ ಭಾಷಣದ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಉಡುಪಿಯ ದಲಿತ ಧಮನಿತ ಹೋರಾಟ ಸಮಿತಿ, ಸಹಬಾಳ್ವೆ, ಜಿಲ್ಲಾ ಮುಸ್ಲಿಮ್ ಒಕ್ಕೂಟ, ಎಪಿಸಿಆರ್ ಸಂಘಟನೆಗಳು ಬುಧವಾರ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚ್ಚೀಂದ್ರ ಹಾಕೇ ಅವರಿಗೆ ಮನವಿ ಸಲ್ಲಿಸಿದ್ದವು.
ಅ.2ರಂದು ದುರ್ಗಾ ದೌಡ್ ಮೆರವಣಿಗೆಯಲ್ಲಿ ಅಕ್ರಮವಾಗಿ ತಲವಾರು ಪ್ರದರ್ಶಿಸಿ ಪ್ರಚೋದಿಸಲಾಗಿತ್ತು. ಅದೇ ರೀತಿ ಸಾರ್ವಜನಿಕ ಸಭೆಯಲ್ಲಿ ಶ್ರೀಕಾಂತ್ ಶೆಟ್ಟಿ ಮತ್ತು ಕಾಜಲ್ ಹಿಂದುಸ್ತಾನಿ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಉಡುಪಿಯ ಶಾಂತಿಯುತ ವಾತಾವರಣ ಕೆಡಿಸಲು ಯತ್ನಿಸಿದ್ದಾರೆ. ಶಿಕ್ಷಾರ್ಹ ಅಪರಾಧಕ್ಕಾಗಿ ಇವರ ವಿರುದ್ಧ ಕೂಡಲೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ನಿಯೋಗ ಮನವಿಯಲ್ಲಿ ಆಗ್ರಹಿಸಿದೆ.
ನಿಯೋಗದಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ದಲಿತ ದಮನಿತ ಹೋರಾಟ ಸಮಿತಿಯ ಪ್ರಮುಖರಾದ ಶ್ಯಾಮರಾಜ್ ಬಿರ್ತಿ, ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ, ಎಪಿಸಿಆರ್ ಜಿಲ್ಲಾ ಸಂಚಾಲಕ ಹುಸೇನ್ ಕೋಡಿಬೆಂಗ್ರೆ, ಸುನ್ನಿ ಸಂಯುಕ್ತ ಜಮಾಅತಿನ ಜಿಲ್ಲಾಧ್ಯಕ್ಷ ಅಬೂಬಕ್ಕರ್ ನೇಜಾರ್, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಹಿರಿಯ ಚಿಂತಕ ಪ್ರೊ.ಫಣಿರಾಜ್, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ಮುಸ್ಲಿಮ್ ಒಕ್ಕೂಟದ ಉಪಾಧ್ಯಕ್ಷ ಇದ್ರಿಸ್ ಹೂಡೆ, ನಗರಸಭೆ ಸದಸ್ಯ ರಮೇಶ್ ಕಾಂಚನ್, ಸಾಲಿಡಾರಿಟಿಯ ಅಫ್ವಾನ್ ಹೂಡೆ, ಚಾರ್ಲ್ಸ್ ಆ್ಯಂಬ್ಲರ್, ಮಂಜುನಾಥ್ ಬಾಳ್ಕುದ್ರು ಮೊದಲಾದವರು ಉಪಸ್ಥಿತರಿದ್ದರು.