ಗೃಹಬಂಧನದಿಂದ ತಪ್ಪಿಸಿಕೊಂಡ ರಶ್ಯ ಪತ್ರಕರ್ತೆ
![ಗೃಹಬಂಧನದಿಂದ ತಪ್ಪಿಸಿಕೊಂಡ ರಶ್ಯ ಪತ್ರಕರ್ತೆ ಗೃಹಬಂಧನದಿಂದ ತಪ್ಪಿಸಿಕೊಂಡ ರಶ್ಯ ಪತ್ರಕರ್ತೆ](https://www.varthabharati.in/sites/default/files/images/articles/2022/10/5/351936-1664989486.jpg)
ಮಾಸ್ಕೊ, ಅ.5: ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ವಿರೋಧಿಸಿ ಟಿವಿ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರ ಮಾಡಿದ್ದರಿಂದ ಆಡಳಿತದ ಕೆಂಗಣ್ಣಿಗೆ ಗುರಿಯಾಗಿ ಗೃಹಬಂಧನಕ್ಕೆ ಒಳಗಾಗಿದ್ದ ರಶ್ಯದ ಟಿವಿ ಪತ್ರಕರ್ತೆ ಮರಿಯಾನಾ ಒವ್ಸಿಯಾನಿಕೋವಾ, ತಾನು ಗೃಹ ಬಂಧನದಿಂದ ತಪ್ಪಿಸಿಕೊಂಡು ಅಜ್ಞಾತ ಸ್ಥಳದಲ್ಲಿ ಇರುವುದಾಗಿ ಮಾಹಿತಿ ನೀಡಿದ್ದಾರೆ. ಸುಳ್ಳು ಸುದ್ಧಿ ಪ್ರಸಾರ ಮಾಡಿದ ಆರೋಪದಲ್ಲಿ ಆಗಸ್ಟ್ನಲ್ಲಿ ಬಂಧನಕ್ಕೆ ಒಳಗಾಗಿದ್ದ ಮರಿಯಾನಾಗೆ ಅಕ್ಟೋಬರ್ 9ರವರೆಗೆ ಗೃಹಬಂಧನ ವಿಧಿಸಲಾಗಿತ್ತು.
‘ನಾನು ಸಂಪೂರ್ಣ ನಿರಪರಾಧಿ ಎಂದು ಪರಿಗಣಿಸುತ್ತಿದ್ದು ಆಡಳಿತವು ತನ್ನದೇ ಆದ ಕಾನೂನನ್ನು ಪಾಲಿಸಲು ನಿರಾಕರಿಸುತ್ತಿರುವುದರಿಂದ ನನ್ನ ಮೇಲೆ ವಿಧಿಸಿರುವ ನಿರ್ಬಂಧವನ್ನು ಪಾಲಿಸಲು ನಾನು ನಿರಾಕರಿಸುತ್ತೇನೆ’ ಎಂದು ಮರಿಯಾನಾ ಸಾಮಾಜಿಕ ವೇದಿಕೆ ಟೆಲಿಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ವಿರೋಧಿಸಿ ಜುಲೈಯಲ್ಲಿ ಪ್ರಸಾರವಾದ ಕಾರ್ಯಕ್ರಮವನ್ನು ಮರಿಯಾನಾ ನಿರೂಪಿಸಿದ್ದರು. ಇದರಲ್ಲಿ ಅವರು ಅಧ್ಯಕ್ಷ ಪುಟಿನ್ರನ್ನು ಕೊಲೆಗಾರ, ರಶ್ಯದ ಯೋಧರನ್ನು ಫ್ಯಾಸಿಸ್ಟ್ಗಳು ಎಂದು ಕರೆಯುವ ಪೋಸ್ಟರ್ ಅನ್ನು ಹಿಡಿದುಕೊಂಡಿದ್ದರು. ರಶ್ಯದ ಸಶಸ್ತ್ರ ಪಡೆಗಳ ವಿರುದ್ಧ ಸುಳ್ಳು ಸುದ್ಧಿ ಪ್ರಸಾರ ಮಾಡಿದ ಆರೋಪದಲ್ಲಿ ಅವರಿಗೆ 2 ತಿಂಗಳ ಗೃಹಬಂಧನ ವಿಧಿಸಿ ಪ್ರಕರಣ ದಾಖಲಿಸಲಾಗಿತ್ತು.
ಆರೋಪ ಸಾಬೀತಾದರೆ ಅವರಿಗೆ 10 ವರ್ಷದವರೆಗೆ ಜೈಲುಶಿಕ್ಷೆ ವಿಧಿಸಬಹುದಾಗಿದೆ. ಆದರೆ ಮರಿಯಾನ ತನ್ನ 11 ವರ್ಷದ ಪುತ್ರಿಯೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದು ಅವರು ಎಲ್ಲಿದ್ದಾರೆ ಎಂಬ ಮಾಹಿತಿಯಿಲ್ಲ ಎಂದು ‘ರಶ್ಯ ಟುಡೆ’ ಶನಿವಾರ ವರದಿ ಮಾಡಿದೆ. ರಶ್ಯದ ಆಂತರಿಕ ಇಲಾಖೆ ಸೋಮವಾರ ಆನ್ ಲೈನ್ ನಲ್ಲಿ ಪ್ರಕಟಿಸಿದ ‘ನ್ಯಾಯ ವಿಚಾರಣೆಯಿಂದ ತಪ್ಪಿಸಿಕೊಂಡವರ’ ಪಟ್ಟಿಯಲ್ಲಿ ಮರಿಯಾನಾಳ ಫೋಟೋ ಸಹಿತ ಹೆಸರನ್ನು ಸೇರಿಸಲಾಗಿದೆ.
ರಕ್ಷಣಾ ಬಜೆಟ್ ಹೆಚ್ಚಳ ಈ ಮಧ್ಯೆ, ಮುಂದಿನ ಆರ್ಥಿಕ ವರ್ಷದಲ್ಲಿ ರಕ್ಷಣಾ ವಲಯಕ್ಕೆ 19 ಶತಕೋಟಿ ಡಾಲರ್ ನಷ್ಟು ಅನುದಾನ ನೀಡುವ ಪ್ರಸ್ತಾವನೆಯನ್ನು ತೈವಾನ್ ಸಂಪುಟ ಸಂಸತ್ತಿನ ಅನುಮೋದನೆಗಾಗಿ ಮಂಡಿಸಿದೆ. ತುರ್ತು ಯುದ್ಧ ಸನ್ನದ್ಧತೆಯನ್ನು ಪೂರೈಸಲು , ಮದ್ದುಗುಂಡುಗಳು, ಶಸ್ತ್ರಾಸ್ತ್ರಗಳಿಗೆ ಹೆಚ್ಚಿನ ವೆಚ್ಚ ಮಾಡಲು ಆದ್ಯತೆ ನೀಡುವ ಉದ್ದೇಶವಿದೆ. ಚೀನಾದ ಸೇನೆಯಿಂದ ಬೆದರಿಕೆ ಹೆಚ್ಚಿರುವುದರಿಂದ ಯುದ್ಧಸನ್ನದ್ಧತೆಯನ್ನೂ ಹೆಚ್ಚಿಸುವ ಮತ್ತು ಹೈ-ಅಲರ್ಟ್ ಆಗಿರುವ ಅಗತ್ಯವಿದೆ ಎಂದು ತೈವಾನ್ನ ರಕ್ಷಣಾ ಇಲಾಖೆ ಹೇಳಿದೆ.
ಜಗತ್ತು ಉಕ್ರೇನ್ನ ಯುದ್ಧದಿಂದ ವಿಚಲಿತವಾಗಿರುವಾಗ ಚೀನಾವು ತನ್ನ ಶಸ್ತ್ರಾಸ್ತ್ರ ಪಡೆಗಳನ್ನು ಸುಧಾರಿಸುತ್ತಿದೆ ಮತ್ತು ಈ ಮೂಲಕ ತೈವಾನ್ ಮೇಲಿನ ಒತ್ತಡವನ್ನು ಹೆಚ್ಚಿಸುತ್ತಿದೆ ಎಂದು ಇಲಾಖೆಯ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.