ಕಡಬದ ಯುವಕರ ತಂಡದಿಂದ ಮಂಗಳೂರಿನ ಯುವಕನ ಹನಿಟ್ರ್ಯಾಪ್?: ಓರ್ವ ಆರೋಪಿ ಪೊಲೀಸ್ ಬಲೆಗೆ

ಕಡಬ, ಅ.5: ಮಂಗಳೂರು ಮೂಲದ ಯುವಕನೋರ್ವ ಕಡಬದ ಯುವಕರ ತಂಡವೊಂದರಿಂದ ಹನಿಟ್ರ್ಯಾಪ್ (Honeytrap)ಗೆ ಒಳಗಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಬುಧವಾರ ರಾತ್ರಿ ಕಡಬದಲ್ಲಿ ನಡೆದಿರುವುದು ವರದಿಯಾಗಿದೆ.
ಯುವತಿಯ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದ ಕಡಬದ ತಂಡವೊಂದು ಮಂಗಳೂರಿನ ಯುವಕನನ್ನು ಬುಟ್ಟಿಗೆ ಬೀಳಿಸಿ ಮಂಗಳವಾರ ತಡರಾತ್ರಿ ಕಡಬಕ್ಕೆ ಕರೆಸಿದ್ದಾರೆ ಎನ್ನಲಾಗಿದೆ. ಬಳಿಕ ಕೆರ್ಮಾಯಿ ಕೋರಿಯಾರ್ ಭಾಗಕ್ಕೆ ಆತನನ್ನು ಕರೆದೊಯ್ದು ಹಲ್ಲೆ ನಡೆಸಿದ್ದಲ್ಲದೆ, ಹಣ ನೀಡದಿದ್ದರೆ ಹುಡುಗಿಯ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿರುವುದಾಗಿ ತಿಳಿದುಬಂದಿದೆ. ಹಲ್ಲೆಗೊಳಗಾದ ಯುವಕ ತನ್ನ ಸ್ನೇಹಿತನ ಮೂಲಕ ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಸಂತ್ರಸ್ತನ ಮೂಲಕವೇ ಹಣ ನೀಡುವುದಾಗಿ ಆಮಿಷವೊಡ್ಡಿ ಆರೋಪಿಗಳನ್ನು ಕರೆಸಿದ್ದಾರೆ. ಆದರೆ ಪೊಲೀಸರ ಇರುವಿಕೆಯ ಮಾಹಿತಿ ತಿಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಮರ್ಧಾಳದ ಓರ್ವ ಯುವಕ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.
ಆದರೆ ಈ ಬಗ್ಗೆ ಪೊಲೀಸರಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.