ಪೆರಂಪಳ್ಳಿ: ವೈಜ್ಞಾನಿಕ ಕೃಷಿ ಮಾಹಿತಿ, ತರಬೇತಿ

ಉಡುಪಿ, ಅ.8: ಜಿಲ್ಲಾ ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿ ಮತ್ತು ಕೃಷಿ ಇಲಾಖೆ ಉಡುಪಿ ಆಯೋಜಿಸಿದ ವೈಜ್ಞಾನಿಕ ಕೃಷಿ ತರಬೇತಿಯ ಉದ್ಘಾಟನೆ ಮತ್ತು ಕೃಷಿ ಮಾಹಿತಿ ಕಾರ್ಯಕ್ರಮ ಕೃಷಿಕ ಪೆಡ್ರಿಕ್ ಡಿಸೋಜ ಪೆರಂಪಳ್ಳಿ ಇವರ ಮನೆಯಂಗಳದಲ್ಲಿ ನಡೆಯಿತು.
ಹಿರಿಯ ಕೃಷಿಕ ಮತ್ತು ನಿವೃತ್ತ ಸಹಾಯಕ ನಿರ್ದೇಶಕ ಹರಿಕೃಷ್ಣ ಶಿವತ್ತಾಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಹಿಂದಿನಿಂದಲೂ ನಾವು ನಮಗೆ ತಿಳಿದಂತೆ ಕೃಷಿ ಮಾಡುತ್ತಿದ್ದೆವು. ಈ ಕ್ರಮದಲ್ಲಿ ದುಡಿಮೆ ಹೆಚ್ಚು ಲಾಭ ಕಡಿಮೆ. ಇಂದಿನ ದಿನಗಳಲ್ಲಿ ವೈಜ್ಞಾನಿಕ ಕೃಷಿ ಮಾಡಿದರೆ ಮತ್ತು ಕೃಷಿಯಿಂದ ಲಾಭವಾಗುವುದು ಮತ್ತು ಕೃಷಿ ಉಳಿಯಬಹುದು ಎಂದರು.
ವೈಜ್ಞಾನಿಕ ಕೃಷಿಯ ಬಗ್ಗೆ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ ರಾಮಕೃಷ್ಣ ಶರ್ಮ ಮತ್ತು ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಸಮಗ್ರ ಮಾಹಿತಿ ನೀಡಿದರು, ಕೃಷಿ ಅಧಿಕಾರಿ ಶೇಖರ್ ಇಲಾಖೆಯಿಂದ ಕೃಷಿ ಕರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಸಹ ಸಂಶೋಧಕರಾದ ಸ್ವಾತಿ ಕೃಷಿಯ ಬಗ್ಗೆ ಮಾಹಿತಿ ನೀಡಿದರು.
ಉಡುಪಿ ಜಿಲ್ಲಾ ಕೃಷಿಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಬಲ್ಲಾಳ್, ಫ್ರೆಡ್ರಿಕ್ ಡಿಸೋಜಾ, ಹಿರಿಯ ಕೃಷಿಕ ಅಂತಪ್ಪ ಪೂಜಾರಿ, ಸುಧಾಕರ್ ಕೋಟ್ಯಾನ್, ರಾಘವೇಂದ್ರ ಭಟ್ ತಾಂಗೋಡು, ಅಮಿತಾ ಕೋಡಿಕಲ್, ಪೆಡ್ರಿಕ್ ಗೋಮ್ಸ್ ಮತ್ತು ಕೃಷಿ ಅಧಿಕಾರಿಗಳಾದ ಸಂಜನಾ ಶೆಟ್ಟಿ, ವಿದ್ಯಾ ಹಾಜರಿದ್ದರು.
ಕೃಷಿಕ ಸಂಘ ಪೆರಂಪಳ್ಳಿ ವಲಯದ ಅಧ್ಯಕ್ಷ ರವೀಂದ್ರ ಪೂಜಾರಿ ಸ್ವಾಗತಿಸಿ, ಶಂಕರ ಸುವರ್ಣ ವಂದಿಸಿದರು. ಸುಬ್ರಹ್ಮಣ್ಯ ಶ್ರೀಯಾನ್ ನಿರೂಪಿಸಿದರು.







