ಆಯುರ್ವೇದ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆ ಅಗತ್ಯ: ಕೃಷ್ಣಾಪುರ ಶ್ರೀ

ಉಡುಪಿ, ಅ.9: ಆಯುರ್ವೇದ ಇಡೀ ಜಗತ್ತಿನ ಭಾರತ ನೀಡಿದ ಒಂದು ದೊಡ್ಡ ಕೊಡುಗೆ. ಆರೋಗ್ಯಕ್ಕೆ ಸಂಬಂಧಿಸಿ ಸಾಕಷ್ಟು ವಿಚಾರಗಳು ಆಧುನಿಕ ವಿಜ್ಞಾನ ಇನ್ನು ತಿಳಿದುಕೊಂಡಿಲ್ಲ. ಆದುದರಿಂದ ಈ ಕುರಿತು ಆಯುರ್ವೇದ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಪರ್ಯಾಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಎಸ್ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲ, ಗ್ರೀನ್ ರೆಮಿಡೀಸ್ ಉಡುಪಿ, ಸೆಲ್ಕೊ ಸೋಲಾರ್ ಲೈಟ್ಸ್ ಪ್ರೈವೇಟ್ ಲಿಮಿಡೆಟ್ ಇವುಗಳ ಸಹಯೋಗದೊಂದಿಗೆ ರವಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಡಾ.ಗಿರಿಧರ ಕಜೆ ಬರೆದ ಶಿಶು ಲಾಲನೆ- ಗರ್ಭಿಣಿ ಪಾಲನೆ ‘ಜನನಿ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಆಧುನಿಕ ವಿಜ್ಞಾನದಲ್ಲಿ ಎಲ್ಲ ಕಾಯಿಲೆಗಳಿಗೂ ಔಷಧಗಳಿವೆ. ಆದರೆ ಆ ಔಷಧಗಳಿಂದ ಸಾಕಷ್ಟು ಅಡ್ಡ ಪರಿಣಾಮಗಳು ಕೂಡ ಇವೆ. ಆದರೆ ಆಯು ರ್ವೇದದಲ್ಲಿ ಅಂತಹ ಯಾವುದೇ ಅಡ್ಡ ಪರಿಣಾಮ ಇಲ್ಲ. ಆದುದರಿಂದ ಇದನ್ನು ಹೆಚ್ಚು ವಿಸ್ತಾರಗೊಳಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಆಯುರ್ವೇದ ವೈದ್ಯ, ನಿವೃತ್ತ ಪ್ರಾಧ್ಯಾಪಕ ಡಾ.ಮುರಳೀಧರ ಶರ್ಮ, ಎಸ್ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಮಮತಾ ಕೆ.ವಿ., ಮುನಿಯಾಲು ಕಾಲೇಜಿನ ಉಪಪ್ರಾಂಶುಪಾಲ ಡಾ.ಹರಿಪ್ರಸಾದ್ ಭಟ್, ಕರ್ಣಾಟಕ ಬ್ಯಾಂಕಿನ ಎಜಿಎಂ ರಾಜಗೋಪಾಲ್ ಬಿ., ಸೆಲ್ಕೊ ಸಿಇಓ ಮೋಹನ್ ಭಾಸ್ಕರ ಹೆಗಡೆ ಉಪಸ್ಥಿತರಿದ್ದರು.
ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣು ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃತಿಕಾರ ಡಾ.ಗಿರಿಧರ ಕಜೆ ಆಶಯ ನುಡಿದರು. ಶಶಿಧರ್ ಕಜೆ ಸ್ವಾಗತಿಸಿದರು.







