ಜಗ್ಗಿ ವಾಸುದೇವ್ ರ 'ಮಣ್ಣು ಉಳಿಸಿ' ಆಂದೋಲನಕ್ಕೆ 100 ಕೋಟಿ ರೂ. ಬಿಡುಗಡೆ ಮಾಡಿದ ರಾಜ್ಯ ಸರಕಾರ
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
![ಜಗ್ಗಿ ವಾಸುದೇವ್ ರ ಮಣ್ಣು ಉಳಿಸಿ ಆಂದೋಲನಕ್ಕೆ 100 ಕೋಟಿ ರೂ. ಬಿಡುಗಡೆ ಮಾಡಿದ ರಾಜ್ಯ ಸರಕಾರ ಜಗ್ಗಿ ವಾಸುದೇವ್ ರ ಮಣ್ಣು ಉಳಿಸಿ ಆಂದೋಲನಕ್ಕೆ 100 ಕೋಟಿ ರೂ. ಬಿಡುಗಡೆ ಮಾಡಿದ ರಾಜ್ಯ ಸರಕಾರ](https://www.varthabharati.in/sites/default/files/images/articles/2022/10/10/352480-1665413101.jpg)
Photo credit: Twitter/@BSBommai
ಬೆಂಗಳೂರು: ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಅವರ 'ಮಣ್ಣು ಉಳಿಸಿ' (Save Soil) ಆಂದೋಲನಕ್ಕೆ ರಾಜ್ಯ ಸರ್ಕಾರ 100 ಕೋಟಿ ರೂ. ಬಿಡುಗಡೆ ಮಾಡಿದ್ದು, ಅಗತ್ಯ ಬಿದ್ದರೆ ಇನ್ನೂ ಹೆಚ್ಚು ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆಂದು deccanherald.com ವರದಿ ಮಾಡಿದೆ. ರಾಜ್ಯದ ಬೊಕ್ಕಸದಿಂದ ವಾಸುದೇವ್ ರ ಆಂದೋಲನಕ್ಕೆ ಕೋಟ್ಯಾಂತರ ಹಣವನ್ನು ಬಿಡುಗಡೆ ಮಾಡಿರುವ ಸಿಎಂ ಅವರ ನಿರ್ಧಾರ ಚರ್ಚೆಗೆ ಕಾರಣವಾಗಿದೆ.
ಕನ್ನಡದ ಕೆಲಸಕ್ಕಾಗಿ ಹಣ ಬಿಡುಗಡೆ ಮಾಡಲು ಹಿಂದೆ ಮುಂದೆ ನೋಡುತ್ತಿರುವ ಸರ್ಕಾರ ಜಗ್ಗಿ ವಾಸುದೇವ್ ಆಂದೋಲನಕ್ಕೆ ಕೋಟ್ಯಾಂತರ ಬಿಡುಗಡೆ ಮಾಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಅವಲಗುರ್ಕಿ ಬಳಿ ಈಶಾ ಯೋಗ ಕೇಂದ್ರ ನಿರ್ಮಿಸಿರುವ ನಾಗ ಮಂಟಪದ ಉದ್ಘಾಟನಾ ಸಮಾರಂಭದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಗ್ಗಿ ವಾಸುದೇವ್ ಅವರು ಆರಂಭಿಸಿದ ‘ಮಣ್ಣು ಉಳಿಸಿ’ ಜಾಗತಿಕ ಆಂದೋಲನಕ್ಕೆ ಸರಕಾರ 100 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಹೆಚ್ಚಿನ ಅನುದಾನ ನೀಡಲು ಸರಕಾರ ಸಿದ್ಧವಿದೆ ಎಂದು ಭರವಸೆ ನೀಡಿದ್ದರು.
"ಮಣ್ಣನ್ನು ಉಳಿಸುವುದು ಮನುಕುಲವನ್ನು ಉಳಿಸಿದಂತೆ ಎಂದು ಸದ್ಗುರು ಅವರಿಗೆ ತಿಳಿದಿದೆ, ಅದರಿಂದಾಗಿಯೇ ಈ ಅಭಿಯಾನ ಆರಂಭಿಸಿದ್ದಾರೆ. ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿದ್ದಾರೆ. ರೈತ ಸಮುದಾಯಕ್ಕೆ ಅವರು ನಡೆಸುವ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು,''ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆಂದು deccanherald.com ವರದಿ ಮಾಡಿದೆ.
ಸರಕಾರ ಜಗ್ಗಿ ವಾಸುದೇವ್ ಅವರ ಆಂದೋಲನಕ್ಕೆ ಕೋಟ್ಯಂತರ ರೂ. ಹಣ ಬಿಡುಗಡೆ ಮಾಡಿರುವುದನ್ನು ಹಲವು ನೆಟ್ಟಿಗರು ಪ್ರಶ್ನಿಸಿದ್ದು, ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಹಣ ನೀಡದೆ ಜಗ್ಗಿ ಆಂದೋಲನಕ್ಕೆ ಅನುದಾನ ನೀಡಿರುವುದನ್ನೂ ಪ್ರಶ್ನಿಸಿದ್ದಾರೆ.
"ಈ ಹೊಲಸು ಸರ್ಕಾರಕ್ಕೆ ಸಾಹಿತ್ಯ ಸಮ್ಮೇಳನಕ್ಕೆ ಕೊಡಲು ದುಡ್ಡಿಲ್ಲ 2 ವರ್ಷ ಆದರೂ ಸಮ್ಮೇಳನ ಇಲ್ಲ, ಆದರೆ ಈ Business Man Jaggi ಗೆ ಕೊಡೊಕೆ 100 ಕೋಟಿ ರೂಪಾಯಿ ಇದೆ, ಯಾರಪ್ಪ ಮನೆ ದುಡ್ಡು ಅಂತ ಈ ರೀತಿಯಾಗಿ ಹಂಚತಾ ಇದಾನೆ? ಯಾರು ಕೇಳೊರು ಇಲ್ಲ ಅಂತ ಮಾಡ್ತಿದಾನಾ ಹೆಂಗೆ? ಕಾಡನ್ನ ನಾಶ ಮಾಡಿ ದೇವರ ಹೆಸರಲ್ಲಿ Business ತೆರದಿರುವ ಈ ವ್ಯಕ್ತಿಯನ್ನ ನಾಡಿನಿಂದ ದೂರ ಇಡೊದು ಒಳ್ಳೆಯದು!!" ಎಂದು ಶಿವಾನಂದ ಗುಂಡಾನವರ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಗ್ಲೋಬಲ್ ಗುರುಗಳಿಗೆ ಐದು ನದಿ ಹುಟ್ಟುವ, ಬೆಟ್ಟಗಳ ಸುತ್ತಣದ ಜಾಗ ಸಿಕ್ಕ ಸ್ಪೀಡು,75 ವರ್ಷ ಸ್ವಾತಂತ್ರ್ಯ ಆದ್ರೂ ಅಂಗನವಾಡಿಗೆ ಚಿಕ್ಕಬಳ್ಳಾಪುರದಲ್ಲಿ ಇಲ್ಲ. ಇನ್ನೂ ಜನರ ತೆರಿಗೆ ಕಾಸು, ಈಗಾಗಲೇ ನೂರು ಕೋಟಿ ಕೊಟ್ಟು. ಇನ್ನು ಕೂಡುವೆವೂ ಅಂತಾರಲ...Mocekry on Public." ಎಂದು ಸಚಿನ್ ಗೌಡ ಎಂಬವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಕ್ಷಾಂತರ ಅನುಯಾಯಿಗಳಿರುವ ವಾಸುದೇವ್ ಅವರ ವಿರುದ್ಧ ಹಲವಾರು ಆರೋಪಗಳಿವೆ. ಚಿಕ್ಕಬಳ್ಳಾಪುರದ ಭೂಮಿಯನ್ನು ವಾಸುದೇವ್ ಅವರ ಈಶ ಫೌಂಡೇಶನ್ ಗೆ ನೀಡುವುದರ ಕುರಿತೂ ಈ ಹಿಂದೆ ಅಪಸ್ವರಗಳು ಎದ್ದಿದ್ದವು. ಇತ್ತೀಚೆಗೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನ (ಕೆಎನ್ಪಿ) ವ್ಯಾಪ್ತಿಯಲ್ಲಿ ಮುಸ್ಸಂಜೆಯ ನಂತರ ಜೀಪ್ ಸಫಾರಿ ಮಾಡಿ ವನ್ಯಜೀವಿ ಸಂರಕ್ಷಣಾ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಜಗ್ಗಿ ವಾಸುದೇವ್ ವಿರುದ್ಧ ಪೊಲೀಸರಿಗೆ ದೂರು ಸಹ ನೀಡಲಾಗಿತ್ತು.
ಈಶ ಫೌಂಡೇಶನ್ ವತಿಯಿಂದ ಚಿಕ್ಕಬಳ್ಳಾಪುರದ ಈಶ ಯೋಗ ಕೇಂದ್ರದಲ್ಲಿ ನಿರ್ಮಿಸಿರುವ "ನಾಗ ಮಂಟಪ" ವನ್ನು ಉದ್ಘಾಟಿಸಿದೆನು.
— Basavaraj S Bommai (@BSBommai) October 8, 2022
ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ವಾಸುದೇವ್, ಆರೋಗ್ಯ ಸಚಿವ @mla_sudhakar ಉಪಸ್ಥಿತರಿದ್ದರು.@SadhguruJV @ishafoundation pic.twitter.com/WPggizXsHs
ಕನ್ನಡ ಸಾಹಿತ್ಯ ಸಮ್ಮೇಳನ ಮಾಡೋಕೆ ಸರ್ಕಾರದ ಹತ್ರ ಹಣವಿಲ್ಲ ಇವನಿಗೆ ಕೊಡೋಕೆ ಹಣ ಇದೆ pic.twitter.com/BEwFGmyle2
— ಕನ್ನಡ ಮನಸುಗಳು ಕರ್ನಾಟಕ (@kannadamanasuga) October 9, 2022