ಭಾರತದ ಕೆಮ್ಮಿನ ಸಿರಪ್ಗಳ ಕುರಿತು ಗಾಂಬಿಯಾ ಪೊಲೀಸರ ತನಿಖೆ ಆರಂಭ
ಹೊಸದಿಲ್ಲಿ,ಅ.10: ಹರ್ಯಾಣದ ಮೇಡನ್ ಫಾರ್ಮಾಸ್ಯೂಟಿಕಲ್ಸ್(Maiden Pharmaceuticals) ತಯಾರಿಸಿದ್ದ ಕೆಮ್ಮಿನ ಸಿರಪ್ಗಳೊಂದಿಗೆ(Cough syrup) ತಳುಕು ಹಾಕಿಕೊಂಡಿರುವ ಡಝನ್ಗಟ್ಟಲೆ ಮಕ್ಕಳ ಸಾವುಗಳ(Death of children) ಕುರಿತು ಗಾಂಬಿಯಾದ ಪೊಲೀಸರು(police) ತನಿಖೆಯನ್ನು ಆರಂಭಿಸಿದ್ದಾರೆ.
ಗಾಂಬಿಯಾ ಪೊಲೀಸರು 66 ಮಕ್ಕಳ ಸಾವುಗಳಿಗೂ ಮೇಡನ್ ಫಾರ್ಮಾಸ್ಯೂಟಿಕಲ್ಸ್ನ ಉತ್ಪನ್ನಗಳಾದ ಪ್ರೊಮೆಥಝೈನ್ ಓರಲ್ ಸೊಲ್ಯೂಷನ್ (Promethazine Oral Solution), ಕೊಫೆಕ್ಸ್ಮಾಲಿನ್ ಬೇಬಿ ಕಾಫ್ ಸಿರಪ್( Cofexmaline Baby Coffee Syrup) ,ಮ್ಯಾಕಾಫ್ ಬೇಬಿ ಕಾಫ್ ಸಿರಪ್ (Macoff Baby Coffee Syrup), ಮತ್ತು ಮ್ಯಾಗ್ರಿಪ್ ಎನ್ ಕೋಲ್ಡ್ ಸಿರಪ್ಗಳಿಗೂ( Magrip n Cold Syrup) ಸಂಬಂಧವನ್ನು ಕಲ್ಪಿಸಿದ್ದಾರೆ. ಹೆಚ್ಚಿನ ಸಾವುಗಳು ತೀವ್ರ ಮೂತ್ರಪಿಂಡ ವೈಫಲ್ಯದಿಂದ ಸಂಭವಿಸಿದ್ದವು.
ಗಾಂಬಿಯಾದ ಔಷಧಿ ನಿಯಂತ್ರಣ ಸಂಸ್ಥೆಯ ಅಧಿಕಾರಿಗಳು ಮತ್ತು ಔಷಧಿಗಳ ಆಮದುದಾರರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಗಾಂಬಿಯಾದ ಅಧ್ಯಕ್ಷ ಅಡಾಮಾ ಬ್ಯಾರೊ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತ ಆಮದುದಾರರ ಪರವಾನಿಗೆಯನ್ನು ರದ್ದುಗೊಳಿಸಲು ಶನಿವಾರ ಆರೋಗ್ಯಾಧಿಕಾರಿಗಳಿಗೆ ಅಧಿಕಾರವನ್ನು ನೀಡಿದ್ದಾರೆ. ಸಾವುಗಳ ಹಿಂದಿನ ಕಾರಣಗಳನ್ನು ಕಂಡುಕೊಳ್ಳಲು ಸರಕಾರವು ಎಲ್ಲ ಪ್ರಯತ್ನಗಳನ್ನೂ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಸರಕಾರದ ತೀವ್ರ ಕಳವಳವನ್ನು ಭಾರತೀಯ ರಾಯಭಾರಿ ಕಚೇರಿಗೆ ತಿಳಿಸುವಂತೆ ವಿದೇಶಾಂಗ ಸಚಿವಾಲಯಕ್ಕೆ ಸೂಚಿಸಲಾಗಿದೆ ಎಂದು ಅಧ್ಯಕ್ಷರ ಕಚೇರಿಯು ತಿಳಿಸಿದೆ.
ಸಾವುಗಳ ಬಳಿಕ ಭಾರತೀಯ ಔಷಧಿ ರಫ್ತು ಉತ್ತೇಜನ ಮಂಡಳಿಯು ಮೇಡನ್ ಫಾರ್ಮಾಸ್ಯೂಟಿಕಲ್ಸ್ನ ಸದಸ್ಯತ್ವವನ್ನು ಅಮಾನತುಗೊಳಿಸಿದೆ. ಈ ಅಮಾನತು ಮಾರುಕಟ್ಟೆ ಪ್ರವೇಶ ಉಪಕ್ರಮದಿಂದ ಮೇಡನ್ನ್ನು ಹೊರಗಿರಿಸುತ್ತದೆ. ಈ ಉಪಕ್ರಮದಡಿ ತಮ್ಮ ಉತ್ಪನ್ನಗಳನ್ನು ವಿದೇಶಗಳ ಔಷಧಿ ಅಥವಾ ಆರೋಗ್ಯ ನಿಯಂತ್ರಕರಲ್ಲಿ ನೋಂದಾಯಿಸುವ ಕಂಪನಿಗಳಿಗೆ 2 ಲ.ರೂ.ವರೆಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಕೇಂದ್ರ ಆರೋಗ್ಯ ಸಚಿವಾಲಯವೂ ಈ ಕುರಿತು ತನಿಖೆಯನ್ನು ನಡೆಸುತ್ತಿದ್ದು,ಗಾಂಬಿಯಾಕ್ಕೆ ನೆರವು ಒದಗಿಸುತ್ತಿದೆ. ಔಷಧಿಗಳನ್ನು ರಫ್ತು ಉದ್ದೇಶಗಳಿಗಾಗಿ ಮಾತ್ರ ತಯಾರಿಸಲಾಗಿತ್ತು ಎನ್ನುವುದನ್ನು ಕೇಂದ್ರೀಯ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆಯು ನಡೆಸಿರುವ ವಿಚಾರಣೆಯು ತೋರಿಸಿದೆ. ಔಷಧಿಗಳ ಸ್ಯಾಂಪಲ್ಗಳನ್ನು ಪರೀಕ್ಷೆಗಾಗಿ ಚಂಡಿಗಡದಲ್ಲಿರುವ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ಸಚಿವಾಲಯವು ತಿಳಿಸಿದೆ.
ಸಾವುಗಳ ಬಗ್ಗೆ ಕೇಳಿ ತನಗೆ ಆಘಾತ ಮತ್ತು ದುಃಖವುಂಟಾಗಿದೆ ಎಂದು ಮೇಡನ್ ಫಾರ್ಮಾಸ್ಯೂಟಿಕಲ್ಸ್ ಶನಿವಾರ ಹೇಳಿತ್ತು.
‘ಮೂರು ದಶಕಗಳಿಗೂ ಹೆಚ್ಚಿನ ಸಮಯದಿಂದ ನಾವು ಔಷಧಿ ಕ್ಷೇತ್ರದಲ್ಲಿದ್ದೇವೆ ಮತ್ತು ಭಾರತೀಯ ಔಷಧಿಗಳ ಮಹಾ ನಿಯಂತ್ರಕರು,ಹರ್ಯಾಣ ರಾಜ್ಯ ಔಷಧಿ ನಿಯಂತ್ರಕರು ಸೇರಿದಂತೆ ಆರೋಗ್ಯಾಧಿಕಾರಿಗಳ ಶಿಷ್ಟಾಚಾರಗಳನ್ನು ಶ್ರದ್ಧೆಯಿಂದ ಅನುಸರಿಸುತ್ತಿದ್ದೇವೆ ’ಎಂದು ಕಂಪನಿಯ ನಿರ್ದೇಶಕ ವಿವೇಕ ಗೋಯಲ್ ಹೇಳಿದ್ದನ್ನು ಸುದ್ದಿಸಂಸ್ಥೆಯು ವರದಿ ಮಾಡಿತ್ತು.
ಇದನ್ನೂ ಓದಿ : ಡಾಲರ್ನೆದುರು 82.34ರ ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ