ಮಂತ್ರಾಲಯ ಸೇತುವೆಗೆ ಬಿಎಸ್ವೈ ಹೆಸರು: ಸಿಎಂ ಬೊಮ್ಮಾಯಿ
![ಮಂತ್ರಾಲಯ ಸೇತುವೆಗೆ ಬಿಎಸ್ವೈ ಹೆಸರು: ಸಿಎಂ ಬೊಮ್ಮಾಯಿ ಮಂತ್ರಾಲಯ ಸೇತುವೆಗೆ ಬಿಎಸ್ವೈ ಹೆಸರು: ಸಿಎಂ ಬೊಮ್ಮಾಯಿ](https://www.varthabharati.in/sites/default/files/images/articles/2022/10/11/352660-1665508321.jpg)
ರಾಯಚೂರು: 'ಬಹುದಿನಗಳ ಬೇಡಿಕೆಯಾದ ಏಮ್ಸ್ ಸಂಸ್ಥೆಯನ್ನು ರಾಯಚೂರಿಗೆ ತರಲು ಎಲ್ಲಾ ಪ್ರಯತ್ನಗಳು ನಡೆದಿದೆ. ಕೇಂದ್ರ ಆರೋಗ್ಯ ಸಚಿವರ ಬಳಿ ಈ ಕುರಿತು ಮಾತನಾಡಿದ್ದು, ಮುಂದಿನ ವಾರ ದೆಹಲಿಗೆ ಹೋಗಿ ಪುನಾಃ ಚರ್ಚಿಸಲಾಗುವುದು. ಹಾಗೆಯೇ ಮಂತ್ರಾಲಯದ ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೆಸರು ಇಡಲು ಸಧ್ಯದಲ್ಲಿಯೇ ಆದೇಶ ಹೊರಡಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳವಾರ ರಾಯಚೂರು ತಾಲೂಕಿನ ಗಿಲ್ಲೆಸಗೂರು ಗ್ರಾಮದಲ್ಲಿ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ರಾಯಚೂರು ಜಿಲ್ಲೆಗೆ ವಿಶೇಷವಾದ ಕೈಗಾರಿಕಾ ಯೋಜನೆಗಳನ್ನು ಬರುವ ತಿಂಗಳಲ್ಲಿ ಘೋಷಣೆ ಮಾಡಲಾಗುವುದು. ರಾಯಚೂರು ವಿಶ್ವವಿದ್ಯಾಲಯಕ್ಕೆ ಅನುದಾನ, ರಾಯಚೂರು ಜಿಲ್ಲೆಯ ಮಕ್ಕಳ ಪೌಷ್ಟಿಕ ಆಹಾರಕ್ಕೆ ವಿಶೇಷ ಅನುದಾನ ನೀಡಲಾಗುವುದು' ಎಂದರು.
''ನಮ್ಮ ಸರಕಾರ 28 ಸಾವಿರ ಕೋಟಿ ರೂ. ಎಸ್ಸಿಪಿ, ಟಿಎಸ್ಪಿ ಯೋಜನೆಗಳಿಗೆ ನೀಡಲಾಗಿದೆ. ಎಸ್ಸಿ, ಎಸ್ಟಿ ಬಡ ಜನರಿಗೆ ವಿದ್ಯುತ್ ಉಚಿತ, 2 ಲಕ್ಷ ಮನೆ ನಿರ್ಮಾಣಕ್ಕೆ, 100 ಯುವಕರಿಗೆ ಉದ್ಯೋಗ ಬಾಬು ಜಗಜೀವನರಾಂ ಅವರ ಹೆಸರಿನಲ್ಲಿ ಸ್ವಯಂಉದ್ಯೋಗ ಕೊಡುವ ಯೋಜನೆ, ಸೇರಿದಂತೆ 5 ವಿವಿಧ ಶೈಕ್ಷಣಿಕ ಕೇಂದ್ರಗಳಲ್ಲಿ ಮೆಗಾ ಹಾಸ್ಟೆಲ್ಗಳನ್ನು ನಿರ್ಮಿಸಲಾಗುತ್ತಿದೆ'' ಎಂದು ಅವರು ಹೇಳಿದರು.