ನಿಝಾಮುದ್ದೀನ್ ಎಕ್ಸ್ ಪ್ರೆಸ್ ರೈಲಿಗೆ ಸವಾಯಿ ಗಂಧರ್ವ ಹೆಸರಿಡುವಂತೆ ಪ್ರಹ್ಲಾದ್ ಜೋಶಿ ಮನವಿ
![ನಿಝಾಮುದ್ದೀನ್ ಎಕ್ಸ್ ಪ್ರೆಸ್ ರೈಲಿಗೆ ಸವಾಯಿ ಗಂಧರ್ವ ಹೆಸರಿಡುವಂತೆ ಪ್ರಹ್ಲಾದ್ ಜೋಶಿ ಮನವಿ ನಿಝಾಮುದ್ದೀನ್ ಎಕ್ಸ್ ಪ್ರೆಸ್ ರೈಲಿಗೆ ಸವಾಯಿ ಗಂಧರ್ವ ಹೆಸರಿಡುವಂತೆ ಪ್ರಹ್ಲಾದ್ ಜೋಶಿ ಮನವಿ](https://www.varthabharati.in/sites/default/files/images/articles/2022/10/11/352668-1665511448.jpg)
ಹುಬ್ಬಳ್ಳಿ: ಹುಬ್ಬಳ್ಳಿ ನಿಜಾಮುದ್ದೀನ್ ಎಕ್ಸಪ್ರೆಸ್ ರೈಲಿನ ಹೆಸರು ಬದಲಾವಣೆ ಮಾಡಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದ್ದಾರೆ. ನಿಜಾಮುದ್ದೀನ್ ಬದಲು ಖ್ಯಾತ ಸಂಗೀತಗಾರ ಸವಾಯಿ ಗಂಧರ್ವ ಅವರ ಹೆಸರಿಡುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಪ್ರಹ್ಲಾದ್ ಜೋಶಿ ಮನವಿ ಮಾಡಿದ್ದಾರೆ.
ಹುಬ್ಬಳ್ಳಿಯಿಂದ ದೆಹಲಿಗೆ ಸಂಚರಿಸುವ ನಿಝಾಮುದ್ದೀನ್ ಲಿಂಕ್ ರೈಲಿಗೆ ಸವಾಯಿ ಗಂಧರ್ವರ ಹೆಸರಿಡುವುದು ಸೂಕ್ತ. ಭೀಮ್ ಸೇನ್ ಜೋಶಿ, ಗಂಗೂಬಾಯಿ ಹಾನಗಲ್ ಅವರಂತಹ ಖ್ಯಾತ ಸಂಗೀತಗಾರರನ್ನು ತಯಾರು ಮಾಡಿದ ಹಿರಿಮೆ ಸವಾಯಿ ಗಂಧರ್ವ ಅವರದ್ದು. ಕಿರಾಣಾ ಘರಾಣ ಸಂಗೀತ ಪರಂಪರ ಹುಟ್ಟುಹಾಕುವ ಮೂಲಕ ಕರ್ನಾಟಕ, ಧಾರವಾಡ ಜಿಲ್ಲೆಗೆ ರಾಷ್ಟ್ರಮಟ್ಟದಲ್ಲಿ ಹೆಸರು ತಂದುಕೊಟ್ಟವರು ಸವಾಯಿ ಗಂಧರ್ವರು. ಅವರ ಗೌರವಾರ್ಥ ನಿಝಾಮುದ್ದೀನ್ ರೈಲಿಗೆ ಸವಾಯೀ ಗಂಧರ್ವ ಅವರ ಹೆಸರಿಡಬೇಕೆಂದು ಪ್ರಹ್ಲಾದ್ ಜೋಶಿ ಮನವಿ ಮಾಡಿದರು.
ಜೋಶಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್, ಪಂಡಿತ್ ಸವಾಯಿ ಗಂಧರ್ವ ಅವರ ಹಿರಿಮೆ ಬಗ್ಗೆ ಕೇಳಿದ್ದೇನೆ. ಅವರ ಹೆಸರಿಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.