ಟ್ವೆಂಟಿ-20 ವಿಶ್ವಕಪ್ ನಿಂದ ದೀಪಕ್ ಚಹಾರ್ ಔಟ್
ಮುಹಮ್ಮದ್ ಶಮಿ, ಸಿರಾಜ್, ಶಾರ್ದೂಲ್ ಆಸ್ಟ್ರೇಲಿಯಕ್ಕೆ ಪಯಣ

Photo:twitter
ಹೊಸದಿಲ್ಲಿ: ಬೆನ್ನುನೋವಿನ ಕಾರಣಕ್ಕೆ ದೀಪಕ್ ಚಹಾರ್ Deepak Chahar ಮುಂಬರುವ ಟ್ವೆಂಟಿ-20 ವಿಶ್ವಕಪ್ನಿಂದ ಹೊರಗುಳಿದಿದ್ದಾರೆ.
ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೀಸಲು ಆಟಗಾರರಲ್ಲಿ ಒಬ್ಬರಾಗಿದ್ದ ಚಹಾರ್ ಮುಖ್ಯ ತಂಡವನ್ನು ಸೇರುವ ನಿರೀಕ್ಷೆ ಇತ್ತು. ಆದರೆ ಅವರನ್ನು ಕಾಡುತ್ತಿರುವ ಬೆನ್ನುನೋವು ಗುಣಮುಖವಾಗಲು ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ.
ವೇಗಿಗಳಾದ ಮುಹಮ್ಮದ್ ಶಮಿ, ಮುಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಅಕ್ಟೋಬರ್ 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ತಂಡದ ಮೊದಲ ಪಂದ್ಯಕ್ಕೆ ಮುಂಚಿತವಾಗಿ ಆಸ್ಟ್ರೇಲಿಯಾದಲ್ಲಿ ಭಾರತ ಕ್ರಿಕೆಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
"ದೀಪಕ್ ಫಿಟ್ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳಲಿದ್ದಾರೆ. ಅವರ ಬೆನ್ನಿನ ಸಮಸ್ಯೆ ಮತ್ತೆ ಉಲ್ಬಣಗೊಂಡಿದೆ. ಅವರ ಪಾದದ ಗಾಯವು ಸರಿಯಾಗಿದೆ ಹಾಗೂ ಅಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದ್ದರಿಂದ ಬಿಸಿಸಿಐ ಮೂವರು ವೇಗಿಗಳಾದ ಮುಹಮ್ಮದ್ ಶಮಿ, ಮುಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಅವರನ್ನು ಕಳುಹಿಸಿಕೊಡಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ಚಹಾರ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ T20 ಸರಣಿಯಲ್ಲಿ ಸ್ಪರ್ಧಿಸಿದ್ದರು. ಆದರೆ ಬೆನ್ನಿನ ಸಮಸ್ಯೆಯನ್ನು ಹೆಚ್ಚಿಸಿಕೊಂಡರು. ಈ ಸಮಸ್ಯೆಯ ಕಾರಣಕ್ಕೆ ಏಕದಿನ ಸರಣಿಯನ್ನು ಬಿಟ್ಟುಬಿಡಬೇಕಾಯಿತು. ಅವರು ಪುನಶ್ಚೇತನಕ್ಕಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (NCA) ಸೇರಿಕೊಂಡಿದ್ದಾರೆ.







