ರಿಕ್ಷಾ ಪ್ರಯಾಣ ದರ ಏರಿಕೆ ಅನಿವಾರ್ಯವೇ?
ದಕ್ಷಿಣಕನ್ನಡ ಜಿಲ್ಲೆಯ ರಿಕ್ಷಾ ಚಾಲಕ ಸಂಘದವರು ‘‘ಕನಿಷ್ಠ ದರ ರೂಪಾಯಿ 40 ಮಾಡಬೇಕು ಇಲ್ಲವಾದಲ್ಲಿ ಬದುಕಲು ಕಷ್ಟವಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ’’ ಎಂದು ಪ್ರಾದೇಶಿಕ ಸಾರಿಗೆ ಕಚೇರಿಗೆ ಲಿಖಿತವಾಗಿ ನೀಡಿದ್ದಾರೆ. ಇದು ವಿಷಾದನೀಯ ಸಂಗತಿ.
ಮುಂಬೈ ಹಾಗೂ ಬೆಂಗಳೂರಿನಲ್ಲಿ ಆಟೋ ರಿಕ್ಷಾ ಕನಿಷ್ಠ ದರ ಒಂದೂವರೆ ಕಿಲೋಮೀಟರ್ಗೆ ಈ ಹಿಂದೆ ರೂಪಾಯಿ 21 ಇದ್ದದ್ದು ಅದನ್ನು ಶೇ. 33 ಏರಿಸಿ 21+ 6.93 ಅಂದರೆ ರೂ. 27.93 ಮಾಡಿದ್ದು ಮೂವರು ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಮೆಟ್ರೋಪಾಲಿಟನ್ ಸಿಟಿಗಳಲ್ಲಿ 28 ರೂಪಾಯಿಗೆ ಮೂವರು ಪ್ರಯಾಣಿಕರು 1.6 ಕಿಲೋ ಮೀಟರ್ ಪ್ರಯಾಣಿಸಬಹುದಾಗಿದ್ದರೆ ಅದಕ್ಕಿಂತ ಸಣ್ಣ ನಗರವಾದ ಮಂಗಳೂರಲ್ಲಿ ಯಾಕೆ ಸಾಧ್ಯವಿಲ್ಲ?
ಇದೇ ರೀತಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆಯ ತಂತ್ರ ಉಪಯೋಗಿಸಿ ಕೇರಳದ ಆಟೊ ಸಂಘದವರು ದರ ಹೆಚ್ಚಳಕ್ಕೆ ಬಲವಾದ ಹಕ್ಕೊತ್ತಾಯ ಮಂಡಿಸಿದ್ದರು. ಆಗ ಅಲ್ಲಿನ ಜನತೆ ಬಸ್ಸು, ರೈಲು, ರಿಕ್ಷಾ ಪ್ರಯಾಣಿಕರ ಸಂಘವನ್ನು ಸ್ಥಾಪಿಸಿ ವೈಜ್ಞಾನಿಕ ಕಾರಣಗಳಿಲ್ಲದೆ ದರ ಏರಿಕೆ ಮಾಡುವ ರಿಕ್ಷಾ, ಬಸ್ಸು ಒಕ್ಕೂಟ ಹಾಗೂ ಭಾರತೀಯ ರೈಲ್ವೆಯನ್ನು ಜನರು ಪ್ರಶ್ನಿಸಲಾರಂಭಿಸಿದರು. ಪ್ರತೀ ಬಾರಿ ದರ ಏರಿಕೆಯ ಮನವಿ ಬಂದ ಕೂಡಲೇ ಆರ್ಟಿಎ (ಆರ್ಟಿಒ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ) ಬಸ್ಸು, ರೈಲು, ರಿಕ್ಷಾ ಪ್ರಯಾಣಿಕರ ಸಂಘವನ್ನು ಲಿಖಿತವಾಗಿ ಹಾಗೂ ದೂರವಾಣಿ ಮೂಲಕ ಸಂಪರ್ಕಿಸಿ, ದರ ಏರಿಕೆಯ ಜನ ಸಂಪರ್ಕ ಸಭೆಗೆ ಆಹ್ವಾನಿಸುತ್ತಾರೆ. ಸಂಘದವರು ವಿವಿಧ ಪ್ರಯಾಣಿಕರನ್ನು ಖುದ್ದಾಗಿ ಸಂಪರ್ಕಿಸಿ ಮಾಹಿತಿ ಪಡೆದು, ಸಭೆಯಲ್ಲಿ ಸಾಕ್ಷಿ ಹಾಗೂ ಅಂಕಿ ಅಂಶಗಳೊಂದಿಗೆ ತಮ್ಮ ವಾದ ಮಂಡಿಸುತ್ತಾರೆ.
ಅವರ ಸಂಘವು ಕೇರಳದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ರೀಜನಲ್ ಟ್ರಾನ್ಸ್ಪೋರ್ಟ್ ಅಥೋರಿಟಿ ಕರೆದ ಜನ ಸಂಪರ್ಕ ಸಭೆಯಲ್ಲಿ ನೀಡಿದ ಮಾಹಿತಿಯು ಅಲ್ಲಿದ್ದ ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ಸಭೆಯಲ್ಲಿ ಭಾಗವಹಿಸಿದ್ದವರನ್ನು ಬೆರಗುಗೊಳಿಸಿತ್ತು. ಸಮಾಜದ ವಿವಿಧ ಸ್ತರಗಳ ಜನರಿಂದ ಬಸ್ಸು ಚಾಲಕ /ನಿರ್ವಾಹಕ; ರಿಕ್ಷಾ /ಕಾರು/ ಚಾಲಕರು; ಬಸ್ಸು /ರಿಕ್ಷಾ /ರೈಲು/ ಟ್ಯಾಕ್ಸಿ ಪ್ರಯಾಣಿಕರು; ರಿಕ್ಷಾ /ಬಸ್ಸು/ ಕಾರು ಮಾಲಕರು ಹಾಗೂ ಅವನ್ನು ಮಾರಾಟ ಮಾಡುವ ಅಂಗಡಿಯವರು - ಹೀಗೆ ಅವರ ಆಡಿಯೊ ವೀಡಿಯೊ ಮಾಡಿ ಆರ್ಟಿಎ ಸಭೆಯಲ್ಲಿ ಅಂಕಿ ಅಂಶಗಳ ಮೂಲಕ ಸಂಘವು ಪ್ರಸಕ್ತಪಡಿಸಿತ್ತು.
1. ಒಂದು ಕಿಲೋಮೀಟರ್ ದೂರ ಸಾಗಲು ರಿಕ್ಷಾದವರಿಗೆ ತಗಲುವ ಖರ್ಚು ಕೇವಲ 50 ಪೈಸೆ.
2. ಈಗಾಗಲೇ ಕನಿಷ್ಠ ದರ ಒಂದೂವರೆ ಕಿಲೋಮೀಟರ್ಗೆ 30 ರೂಪಾಯಿ ಇದೆ. ಅಂದರೆ ಕಿಲೋಮೀಟರ್ಗೆ ಬಾಡಿಗೆ 20 ರೂಪಾಯಿ ಲಾಭ ಬರುತ್ತದೆ.
3. ಪ್ರತೀ ಆರು ಸೆಕೆಂಡುಗಳಿಗೆ ಕೇವಲ ಒಂದು ತೊಟ್ಟು ಪೆಟ್ರೋಲ್ ಮಾತ್ರ ಖರ್ಚಾಗುತ್ತದೆ. (ಸಭೆಗೆ ರಿಕ್ಷಾದ ಮೋಟರ್ ಕೆಲಸ ಮಾಡುವ ವೀಡಿಯೊ, ಚಿತ್ರವನ್ನು ತೋರಿಸಿ) ಪೆಟ್ರೋಲ್ ತೊಟ್ಟು ತೊಟ್ಟಾಗಿ ರಿಕ್ಷಾದ ಇಂಜಿನ್ ಸೇರುತ್ತದೆ. 4. ಈ ಹಿಂದೆ ಸಭೆಗಳಲ್ಲಿ ರಿಕ್ಷಾ, ಬಸ್ಸು, ರೈಲು ಪ್ರಯಾಣಿಕರು ಭಾಗವಹಿಸಿಲ್ಲ. ಆದುದರಿಂದ ಪ್ರತಿ ಬಾರಿ ದರ ಏರಿಕೆ ಏಕಪಕ್ಷೀಯವಾಗಿ ಆಗುತ್ತದೆ ಎಂಬ ವಸ್ತುನಿಷ್ಠ ವರದಿಯನ್ನು ಅಟೋಮೊಬೈಲ್ ಇಂಜಿನಿಯರ್ ಅವರ ಮೂಲಕ ಸಭೆಗೆ ಮನದಟ್ಟು ಮಾಡಲಾಗಿತ್ತು.
5. ರಿಕ್ಷಾ ಪ್ರಯಾಣ ಇನ್ನೂ ಏರಿಸಿದ್ದಲ್ಲಿ ಈಗ ರಿಕ್ಷಾಗಳಲ್ಲಿ ಪ್ರಯಾಣಿಸುವ ಶೇ. 30 ಪ್ರಯಾಣಿಕರು ಎಷ್ಟೇ ಹೆಚ್ಚಿನ ಲಗೇಜ್ ಇದ್ದರೂ, ಬಸ್ಸುಗಳಲ್ಲಿ ಪ್ರಯಾಣಿಸಿ ರಿಕ್ಷಾದವರಿಗೆ ಗಿರಾಕಿಗಳೇ ಸಿಗದ ವಿಸ್ತೃತ ವರದಿಯನ್ನು ಏಳು ಎನ್ಜಿಒಗಳು ಮಂಡಿಸಿದ್ದರು.
6. ಕಾರಣವೇ ಇಲ್ಲದೆ ದರ ಏರಿಕೆ ಮಾಡುವುದಾದರೆ ತಮ್ಮ ಪ್ರಯಾಣಿಕ ಸಂಘವು ಒಂದೇ ವರ್ಷದೊಳಗೆ ಏಳು ಸಾವಿರ ವಿದ್ಯುತ್ ರಿಕ್ಷಾ ಖರೀದಿಸಿ ಕನಿಷ್ಠ 20 ರೂಪಾಯಿಗೆ ಓಡಿಸಲು ತಯಾರಿರುವ ಬಗ್ಗೆ ಅಫಿದವಿತ್ನ್ನು ಸಭೆಯಲ್ಲಿ ನೀಡಲಾಯಿತು. ನೆನಪಿಡಿ: ವಿದ್ಯುತ್ ಚಾಲಿತ ರಿಕ್ಷಾಗಳಿಗೆ ರಿಜಿಸ್ಟ್ರೇಷನ್, ಚಾಲನಾಪತ್ರ, ವಾಯುಮಾಲಿನ್ಯ ಪ್ರಮಾಣ ಪತ್ರ, ವಿಮೆ - ಹೀಗೆ ಏನೂ ಬೇಕಾಗಿಲ್ಲ ಎಂಬ ನಿಯಮವಿದೆ ಎಂಬುದನ್ನು ಸಭೆಗೆ ತಿಳಿಸಲಾಯಿತು.
ಮಂಗಳೂರಿನಲ್ಲಿ ರಿಕ್ಷಾ ಚಾಲಕ ಮಾಲಕರಿಂದ ದಿನನಿತ್ಯ ಪ್ರಯಾಣಿಕರ ಶೋಷಣೆ ನಡೆಯುತ್ತಿದೆ. ಪ್ರಯಾಣಿಕರಲ್ಲಿ ಒಗ್ಗಟ್ಟು ಇಲ್ಲದಿದ್ದುದರಿಂದ ಈ ಶೋಷಣೆ ದಿನಗಳಂತೆ ಹೆಚ್ಚಾಗುತ್ತಿವೆ.
* ಮಂಗಳೂರಿನಲ್ಲಿ ರಿಕ್ಷಾ ಚಾಲಕರ ಎರಡು ಸಂಘಟನೆಗಳಿದ್ದು, ಎರಡೂ ಸಂಘಟನೆಗಳಿಗೆ ರಾಜಕೀಯ ಪಕ್ಷಗಳ ಮುಖಂಡರೇ ಅಧ್ಯಕ್ಷರಾಗಿದ್ದಾರೆ. ಇವರು ಸುಮಾರು 8,000 ರಿಕ್ಷಾ ಚಾಲಕರ ವೋಟು ಸಿಗಲು ಈ ದರ ಏರಿಕೆ ಮಾಡಿಸುತ್ತಾರೆಯೇ ಹೊರತು ನಿಜವಾಗಿ ಅದರ ಅಗತ್ಯವೇ ಇಲ್ಲ.
* ನಗರದ ಒಳಗೆ ಮೀಟರ್ ಹಾಕದೆ ಜಾಸ್ತಿ ಹಣ ಕೇಳುತ್ತಿದ್ದು, ಎಲ್ಲ ಪ್ರಯಾಣಿಕರಿಗೂ ಅದರ ಬಿಸಿ ತಟ್ಟಿದೆ. ಉದಾಹರಣೆಗೆ ನಾಗುರಿ ಬಸ್ ನಿಲ್ದಾಣದಿಂದ ರೆಡ್ ಬಿಲ್ಡಿಂಗ್ ಓಣಿ ತನಕ ಇರುವ ದೂರ ಅರ್ಧ ಕಿಲೋಮೀಟರ್. ಹಾಗಾಗಿ ಕನಿಷ್ಠ ತೆಗೆದುಕೊಳ್ಳಬೇಕು. ಬದಲಿಗೆ ಮೀಟರ್ ಹಾಕದೆ 60 ರೂ. ಕೊಡಿ ಎನ್ನುತ್ತಾರೆ.
* ಕಪಿತಾನಿಯೋ ಶಾಲೆಯಿಂದ ಮಂಗಳೂರು ಜಂಕ್ಷನ್ಗೆ ಇರುವ ದೂರ 0.6 ಕಿಲೋಮೀಟರ್ ಮಾತ್ರ. ರೈಲ್ವೆ ಸ್ಟೇಷನ್ ಹೆಸರು ಕೇಳಿದರೆ ಸಾಕು, ದರ ರೂ. 100ಕ್ಕಿಂತ ಜಾಸ್ತಿ ಕೇಳುತ್ತಾರೆ. ಮೀಟರ್ ಹಾಕುವುದಿಲ್ಲ. ಈ ಮೇಲಿನ ಎರಡು ಸ್ಥಳಗಳಿಂದ ಆರ್ಟಿಒ ಖುದ್ದಾಗಿ ಪ್ರಯಾಣಿಸಿ ನೋಡಲಿ.
* ದೂರ ಒಂದು ಕಿಲೋಮೀಟರ್ಗಿಂತ ಕಡಿಮೆ ಇದ್ದು ವೃದ್ಧರು ಹಾಗೂ ರೋಗಿಗಳು ನಡೆಯಲು ಅಸಾಧ್ಯವೆಂದು ರಿಕ್ಷಾದಲ್ಲಿ ಹೋದರೆ ಬಾಡಿಗೆ ದುಪ್ಪಟ್ಟು ಕೇಳುತ್ತಾರೆ.
* ಹೊರ ರಾಜ್ಯದವರು ಅಥವಾ ಮಂಗಳೂರಿನವರೇ ಮುಂಬೈಯಿಂದ ವಾಪಸು ಬರುವಾಗ ರೈಲ್ವೇ ಸ್ಟೇಷನ್ನಲ್ಲಿ, ಆಟೋದವರು ಕೇಳುವ ಹಣದ ಮೊತ್ತ ನೋಡಿದರೆ ಸಾಮಾನ್ಯ ಜನರು ಮೂರ್ಛೆ ಹೋಗುವುದು ಖಂಡಿತ.
* ರಾತ್ರಿ 11ರಿಂದ 5ರವರೆಗೆ ಒಂದೂವರೆ ಪಟ್ಟು ಬಾಡಿಗೆ ಇದ್ದರೂ, ವಾಪಸ್ ಬರುವಾಗ ಜನ ಸಿಗುವುದಿಲ್ಲ ಎಂಬ ನೆಪದಿಂದ, ಹಗಲಲ್ಲೇ ಡಬಲ್ ಚಾರ್ಜ್ ತೆಗೆದುಕೊಳ್ಳುತ್ತಾರೆ.
* ಮಂಗಳೂರು ಜಂಕ್ಷನ್ನಿಂದ ಒಂದು ಆಟೋದಲ್ಲಿ ಒಬ್ಬರನ್ನೇ ಕೂರಿಸಬೇಕೆಂಬ ನಿಯಮವಿದ್ದರೂ, ಮೂವರನ್ನು ಕೂರಿಸಿ ಪ್ರತ್ಯೇಕ ಹಣ ವಸೂಲಿಮಾಡುತ್ತಾರೆ. ಮಂಗಳೂರು ಜಂಕ್ಷನ್ನಿಂದ ಹಂಪನಕಟ್ಟೆಗೆ ಮೀಟರ್ ಹಾಕಿದರೆ ಬರುವುದು 70 ರೂಪಾಯಿ ಮಾತ್ರ. ಆದರೂ ಚಾಲಕರಿಗೆ ಕನಿಷ್ಟವೆಂದರೂ ಇದರ ನಾಲ್ಕುಪಟ್ಟು ಹಣಸಿಗುತ್ತದೆ.
* ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಹಾಗೂ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ರಿಪೇಡ್ ಆಟೋ ಕೌಂಟರ್ ಇದ್ದರೂ ಇಂತಹ ಹಗಲು ದರೋಡೆ ಪ್ರತೀದಿನ ನಡೆಯುತ್ತಲೇ ಇರುತ್ತದೆ.
* ಬಹಳ ಶ್ರೀಮಂತರು ವಿದ್ಯುತ್ ರಿಕ್ಷಾ ಖರೀದಿಸಿ, ದಿನಕ್ಕೆ 500 ರೂಪಾಯಿಗಳಂತೆ ಬಾಡಿಗೆಗೆ ನೀಡುತ್ತಾರೆ. ಮಂಗಳೂರಿನಲ್ಲಿ ಇಂತಹ 600 ವಿದ್ಯುತ್ ರಿಕ್ಷಾಗಳಿವೆ. ತಿಂಗಳಿಗೆ ರೂ. 15,000 ಬಾಡಿಗೆ ಮಾಲಕರಿಗೆ ಪಾವತಿಸಿ ತಾವು ಅದಕ್ಕಿಂತ ದುಪ್ಪಟ್ಟು ಸಂಪಾದಿಸುವಾಗ ದರ ಏರಿಕೆಯ ಮಾತೇಕೆ ?
* ಇದೀಗ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ರಿಕ್ಷಾ ದರ ಏರಿಕೆಯ ಬಗ್ಗೆ ಚರ್ಚಿಸಲು, ಅಕ್ಟೋಬರ್ 13ರ ಮಧ್ಯಾಹ್ನ 4:00ಗೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಚರ್ಚೆ ನಡೆಸಲು ಉದ್ದೇಶಿಸಲಾಗಿದ್ದು ಪ್ರಯಾಣಿಕರು, ಸಾಮಾಜಿಕ ಕಾರ್ಯಕರ್ತರು, ನಾಗರಿಕ ಹಿತ ರಕ್ಷಣೆ ಸಮಿತಿಯವರು ಖುದ್ದಾಗಿ ಹಾಜರಿದ್ದು ಎಲ್ಲರೂ ಚರ್ಚೆಯಲ್ಲಿ ಭಾಗವಹಿಸಬೇಕಾಗಿದೆ.