ಶಾಸಕ ಹರೀಶ್ ಪೂಂಜಾಗೆ 'ಬೆದರಿಕೆ' ಪ್ರಕರಣ: ಸಮಗ್ರ ತನಿಖೆಗೆ ಸಂಸದ ನಳಿನ್ ಆಗ್ರಹ

ನಳಿನ್ ಕುಮಾರ್ ಕಟೀಲ್
ಮಂಗಳೂರು: ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ತಡೆದು ಬೆದರಿಕೆ ಒಡ್ಡಿದ ಆರೋಪಿ ರಿಯಾಝ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದರೊಂದಿಗೆ ಪ್ರಕರಣದ ಹಿಂದೆ ಯಾರ್ಯಾರಿದ್ದಾರೆ ಎಂಬ ಸತ್ಯ ಹೊರಬೇಕು. ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬಾರದು. ಕೇರಳದಿಂದ ಬಂದು ಇಲ್ಲಿ ವಿದ್ವಂಸಕ ಕೃತ್ಯ ನಡೆಸುವ ಪಿಎಫ್ಐ ಸೇರಿದಂತೆ ದೇಶ ವಿರೋಧಿ ಸಂಘಟನೆಗಳ ದುಷ್ಕೃತ್ಯಗಳ ಮಾಹಿತಿ ರಾಷ್ಟ್ರೀಯ ತನಿಖಾ ದಳದ ಮೂಲಕ ಹೊರಬಂದಿತ್ತು. ಶಾಸಕರ ಬೆದರಿಕೆ ಪ್ರಕರಣದಲ್ಲೂ ಅವರ ಕೈವಾಡವಿರುವ ಸಾಧ್ಯತೆಯಿದೆ. ತನಿಖೆಯಿಂದ ಸತ್ಯಾಂಶ ಹೊರಬರಲಿದೆ ಎಂದರು.
ಶಾಸಕರೊಬ್ಬರಿಗೆ ಬೆದರಿಕೆ ಒಡ್ಡಿರುವುದನ್ನು ಲಘುವಾಗಿ ಪರಿಗಣಿಸಬಾರದು. ಆರಂಭದಲ್ಲಿಯೇ ಇದರ ಹಿಂದಿನ ದುಷ್ಟ ಶಕ್ತಿಗಳನ್ನು ಮಟ್ಟಹಾಕಬೇಕಿದೆ ಎಂದು ನಳಿನ್ ಕುಮಾರ್ ಹೇಳಿದರು.