ಟೋಲ್ ಸ್ಥಗಿತಗೊಳ್ಳುವವರೆಗೂ ವಿರಾಮವಿಲ್ಲ : ಮುನೀರ್ ಕಾಟಿಪಳ್ಳ

ಮಂಗಳೂರು, ಅ.18: ಸುರತ್ಕಲ್ ಅಕ್ರಮ ಟೋಲ್ಗೇಟ್ ವಿರುದ್ಧದ ಹೋರಾಟ ಮತ್ತಷ್ಟು ತೀವ್ರತೆಯಿಂದ ನಾಳೆಯೂ ಮುಂದುವರಿಯಲಿದೆ. ಟೋಲ್ ಸ್ಥಗಿತಗೊಳ್ಳುವವರೆಗೂ ವಿರಾಮ ಇಲ್ಲ. ವಿರಮಿಸಲು ಬಿಡುವುದಿಲ್ಲ ಎಂದು ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಇಂದು ಪೊಲೀಸರು ಪ್ರತಿಭಟನಾಕಾರರನ್ನು ನಿಶ್ಯರ್ಥವಾಗಿ ಬಿಡುಗಡೆಗೊಳಿಸಿದ್ದಾರೆ. ಜಾಮೀನು ಕೇಳದೆ ಇರುವುದರಿಂದ ಅದನ್ನು ತಿರಸ್ಕರಿಸಿ ಜೈಲಿಗೆ ಹೋಗುವ ನಮ್ಮ ನಿರ್ಧಾರ ತಪ್ಪಿತು. (ಜಾಮೀನು ಕೇಳಿದ್ದರೆ ಖಂಡಿತಾ ಜೈಲು ಸೇರುವುದನ್ನು ಆಯ್ದುಕೊಳ್ಳುತ್ತಿದ್ದೆವು) ಪೊಲೀಸ್ ವಶದಲ್ಲಿಯೇ ಹೋರಾಟ ಸಮಿತಿ ಸಭೆ ನಡೆಸಲಾಯಿತು. ಇಂದು ಖಂಡಿತವಾಗಿಯೂ ಬಿಜೆಪಿ ಮತ್ತದರ ಸರ್ವಶಕ್ತಿ ನಮ್ಮ ಜನಗಳ ಇಚ್ಚಾಶಕ್ತಿಯ ಹೋರಾಟದ ಎದುರು ಸೋತಿದೆ. ಬಿಜೆಪಿ ಸರಕಾರದ ಪೊಲೀಸರ ಎಲ್ಲಾ ಬೆದರಿಕೆ, ದೌರ್ಜನ್ಯ, ಸರ್ಪಗಾವಲು, ಬಲಪ್ರಯೋಗಗಳನ್ನು ಹಿಮ್ಮೆಟ್ಟಿಸಿ ನಾವಿಂದು ಟೋಲ್ ಗೇಟ್ ತಲುಪಿದ್ದೇವೆ. ಒಂದಿಷ್ಟು ಗಂಟೆಗಳ ಕಾಲ ಟೋಲ್ ಸಂಗ್ರಹ ಸ್ಥಗಿತಗೊಳಿಸಿದ್ದೇವೆ. ಆ ಮೂಲಕ ಬಿಜೆಪಿ ಶಾಸಕರ ಸರ್ವಾಧಿಕಾರಕ್ಕೆ ಸವಾಲು ಒಡ್ಡಿದ್ದೇವೆ. ಇದು ತುಳುನಾಡು ಒಗ್ಗಟ್ಟಿನಿಂದ ನಿಂತ ಫಲ. ಈ ಗೆಲುವು ಸರ್ವರಿಗೂ ಸಲ್ಲುತ್ತದೆ. ಮತ್ತೆ ನಾಳೆ ಹೋರಾಟ ಸಮಿತಿ ಸಭೆ ಸೇರಲಿದೆ ಎಂದು ಅವರು ಹೇಳಿದ್ದಾರೆ.







