ಗುಂಡ್ಲುಪೇಟೆ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಫೈನಾನ್ಸ್ ಸಂಸ್ಥೆಯ ವಿರುದ್ಧ ಆಕ್ರೋಶ, ರೈತರಿಂದ ಪ್ರತಿಭಟನೆ
![ಗುಂಡ್ಲುಪೇಟೆ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಗುಂಡ್ಲುಪೇಟೆ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ](https://www.varthabharati.in/sites/default/files/images/articles/2022/10/18/353404-1666099861.jpg)
ಕೃಷ್ಣಯ್ಯ - ಆತ್ಮಹತ್ಯೆ ಮಾಡಿಕೊಂಡಿರುವ ರೈತ
ಚಾಮರಾಜನಗರ : ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ನೇನೇಕಟ್ಟೆ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ನೇನೇಕಟ್ಟೆ ಗ್ರಾಮದ ಕೃಷ್ಣಯ್ಯ (60) ಮೃತ ರೈತ ಎಂದು ತಿಳಿದು ಬಂದಿದೆ.
ಮೃತ ಕೃಷ್ಣಯ್ಯ 2020 ರಲ್ಲಿ ಖಾಸಗಿ ಫೈನಾನ್ಸ್ ವೊಂದರಿಂದ 7 ಲಕ್ಷ ರೂಪಾಯಿ ಸಾಲಕ್ಕೆ 70 ಸಾವಿರ ರೂಪಾಯಿ ಡೌನ್ ಪೇಮೆಂಟ್ ಮಾಡಿ ಸಾಲ ಪಡೆದು ಟ್ರ್ಯಾಕ್ಟರ್ ಖರಿಸಿದ್ದರೆನ್ನಲಾಗಿದೆ. ಕೋವಿಡ್ ಕಾರಣ ಸಕಾಲದಲ್ಲಿ ಸಾಲದ ಕಂತು ಮರು ಪಾವತಿಯಾಗದ ಹಿನ್ನಲೆಯಲ್ಲಿ ಫೈನಾನ್ಸ್ ನವರು ಟ್ರ್ಯಾಕ್ಟರ್ ನನ್ನು ವಶಪಡಿಸಿಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ.
ಬಳಿಕ ಫೈನಾನ್ಸ್ ನವರ ಕಿರುಕುಳ ತಾಳಲಾರದೆ ಮನನೊಂದ ರೈತ ಆತ್ಮಹತ್ಯೆ ಗೆ ಯತ್ನಿಸಿದ್ದರೆನ್ನಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ್ದ ಕೃಷ್ಣಯ್ಯನವರನ್ನು ಚಾಮರಾಜನಗರ ಮೆಡಿಕಲ್ ಕಾಲೇಜಿನ ಬೋದನಾ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ.
ಪ್ರತಿಭಟನೆ: ಘಟನೆ ಖಂಡಿಸಿ, ಜಿಲ್ಲಾ ರೈತ ಸಂಘಟನೆಗಳು ಮೆಡಿಕಲ್ ಕಾಲೇಜು ಬೋದನಾ ಆಸ್ಪತ್ರೆಯ ಮುಂಭಾಗದಲ್ಲಿ ಖಾಸಗಿ ಫೈನಾನ್ಸ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.