ಅಡಿಕೆಗೆ ಎಲೆಚುಕ್ಕೆ ರೋಗ: ಅಧ್ಯಯನಕ್ಕೆ ಸಮಿತಿ ರಚನೆ

ಉಡುಪಿ, ಅ.19: ಕರ್ನಾಟಕದ ಮಲೆನಾಡು ಹಾಗೂ ಇತರ ಭಾಗಗಳಲ್ಲಿ ಅಡಿಕೆ ಬೆಳೆಗೆ ಕಾಣಿಸಿಕೊಂಡಿರುವ ಎಲೆಚುಕ್ಕೆ ರೋಗದ ವೈಜ್ಞಾನಿಕ ಅಧ್ಯಯನಕ್ಕೆ ತಜ್ಞರ ಸಮಿತಿಯೊಂದನ್ನು ಕೇಂದ್ರದ ಕೃಷಿ, ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮಾರ್ ರಚಿಸಲು ನಿರ್ದೇಶನ ನೀಡಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಹೊಸದಿಲ್ಲಿಯಲ್ಲಿ ಕೃಷಿ ಸಚಿವರನ್ನು ಭೇಟಿ ಮಾಡಿ ಈ ಕುರಿತು ಮಾಡಿದ ಮನ ವಿಯ ಹಿನ್ನೆಲೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿದೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.
ತಜ್ಞರ ಸಮಿತಿಯು ಎಲೆಚುಕ್ಕೆ ರೋಗದ ಅಧ್ಯಯನ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮಗಳನ್ನು ತೆಗೆದು ಕೊಳ್ಳಲಿದೆ. ಹಾಗೂ ರೋಗದ ತಡೆಗೆ ಕಾರ್ಯತಂತ್ರಗಳನ್ನು ಅಭಿವೃದ್ಧಿ ಪಡಿಸಲಿದೆ. ಸಮಸ್ಯೆಯ ಶೀಘ್ರ ಪರಿಹಾ ರಕ್ಕೆ ತೆಗೆದುಕೊಂಡ ತ್ವರಿತ ಪ್ರತಿಕ್ರಿಯೆಗಾಗಿ ಮಲೆನಾಡಿನ ರೈತರ ಪರವಾಗಿ ಕೇಂದ್ರ ಸಚಿವರಿಗೆ ಕೃತಜ್ಞತೆ ಗಳನ್ನು ಸಲ್ಲಿಸುವುದಾಗಿ ಸಂಸದರ ಪ್ರಕಟಣೆ ತಿಳಿಸಿದೆ.
ತಜ್ಞರ ಸಮಿತಿಯು ಕಾಸರಗೋಡು ಐಸಿಎಆರ-ಸಿಪಿಸಿಆರ್ಐನ ನಿರ್ದೇಶಕ ಡಾ.ಅನಿತಾ ಕರುಣ, ಕಲ್ಲಿಕೋಟೆ ಡಿಎಎಸ್ಡಿ ನಿರ್ದೇಶಕ ಡಾ.ಹೋಮಿ ಚೆರಿಯನ್, ಸಂಸ್ಥೆಯ ಉಪನಿರ್ದೇಶಕ ಡಾ.ಫೆಮಿನಾ, ಕಾಸರಗೋಡು ಐಸಿಎಆರ್ನ ಬೆಳೆ ಉತ್ಪಾದನಾ ವಿಭಾಗದ ಮುಖ್ಯಸ್ಥ ಡಾ.ರವಿ ಭಟ್, ಶಿವಮೊಗ್ಗ ಕೆಎಸ್ಎನ್ಯುಎಎಚ್ಎಸ್ನ ಸಂಶೋಧನಾ ನಿರ್ದೇಶಕ ಡಾ.ಎಂ.ವಾಲಿ, ದಕ್ಷಿಣ ಕನ್ನಡದ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಡಾ.ಎಚ್.ಆರ್.ನಾಕ್ ಹಾಗೂ ಕಾಸರಗೋಡು ಐಸಿಎಆರ್ನ ಬೆಳೆ ರಕ್ಷಣಾ ವಿಭಾಗದ ಹಂಗಾಮಿ ಮುಖ್ಯಸ್ಥ ಡಾ.ವಿನಾಯಕ ಹೆಗ್ಡೆ ಅವರನ್ನು ಒಳಗೊಂಡಿದೆ.







