ಅಬೂಬಕರ್ ಸೇರಿ 11 ಹುತಾತ್ಮ ಪೊಲೀಸರಿಗೆ ಅ.21ರಂದು ಮುಖ್ಯಮಂತ್ರಿ ಬೊಮ್ಮಾಯಿ ಗೌರವಾರ್ಪಣೆ
ಬೆಂಗಳೂರು, ಅ.19: ಪ್ರಸ್ತುತ ವಾರ್ಷಿಕ ಸಾಲಿನಲ್ಲಿ ಮಂಗಳೂರಿನ ಹೆಡ್ ಕಾನ್ಸ್ ಟೇಬಲ್ ಅಬೂಬಕ್ಕರ್ ಸೇರಿದಂತೆ 11 ಮಂದಿ ಪೊಲೀಸರು ಹುತಾತ್ಮರಾಗಿದ್ದು, ಪೊಲೀಸ್ ಸಂಸ್ಮರಣಾ ದಿನಾಚರಣೆ ಅಂಗವಾಗಿ ನಾಳೆ(ಅ.21) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೌರವಾರ್ಪಣೆ ಮಾಡಲಿದ್ದಾರೆ.
ಇಲ್ಲಿನ ಮೈಸೂರು ರಸ್ತೆಯ ಸಿಎಆರ್ ಕೇಂದ್ರ ಸ್ಥಾನದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿರುವ ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಮಡಿದ ಪೊಲೀಸರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೌರವಾರ್ಪಣೆ ಮಾಡಲಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅಧ್ಯಕ್ಷತೆವಹಿಸಲಿದ್ದಾರೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದ ಎಲ್ಲೆಡೆ 264 ವಿವಿಧ ದರ್ಜೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯ ನಿರ್ವಹಣೆಯ ಅವಧಿಯಲ್ಲಿ ಮೃತಪಟ್ಟಿದ್ದು, ರಾಜ್ಯದಲ್ಲಿ ಒಟ್ಟು 11 ಪೊಲೀಸರು ಹುತಾತ್ಮರಾಗಿದ್ದಾರೆ.
ಬೆಂಗಳೂರಿನ ಪೂರ್ವ ವಿಭಾಗದ ಪಿಎಸ್ಸೈ ಅವಿನಾಶ್, ಹಾಸನದ ಎಎಸ್ಸೈ ಮಂಜುನಾಥ್, ಚಾಮರಾಜನಗರ ಜಿಲ್ಲೆಯ ಎಎಸ್ಸೈ ಸದಾಶಿವ ಬಿ., ಹೆಡ್ಕಾನ್ಸ್ ಟೆಬಲ್ ಎಸ್.ಪ್ರಸಾದ್, ಚಿತ್ರದುರ್ಗ ಜಿಲ್ಲೆಯ ಹೆಡ್ಕಾನ್ಸ್ ಟೆಬಲ್ ಜಿ.ಎಂ.ಮಾಲತೇಶ್.
ಮಂಗಳೂರಿನ ಹೆಡ್ಕಾನ್ಸ್ ಟೆಬಲ್ ಅಬೂಬಕರ್, ರಾಯಚೂರಿನ ಹೆಡ್ಕಾನ್ಸ್ ಟೆಬಲ್ ಬಸವರಾಜ್, ಬೆಂಗಳೂರು ಪೂರ್ವ ವಿಭಾಗದ ಹೆಡ್ಕಾನ್ಸ್ ಟೆಬಲ್ ಅನಿಲ್ ಮುಲಿಕ್, ಹುಬ್ಬಳಿ ನಗರದ ಹೆಡ್ಕಾನ್ಸ್ ಟೆಬಲ್ ಎನ್.ಭೂಷಣ್ಣನವರ್, ಧಾರವಾಡದ ಪಂಡಿತ್ ಕಾಸರ್ ಅವರು ಕಾರ್ಯ ನಿರ್ವಹಣೆಯಲ್ಲಿಯೇ ಹುತಾತ್ಮರಾಗಿದ್ದಾರೆ.