ಟೋಲ್ವಿರುದ್ಧ ಹೋರಾಟದ ಪ್ರತಿಭಾ ಕುಳಾಯಿಯನ್ನು ಅಶ್ಲೀಲವಾಗಿಟ್ರೋಲ್ ಮಾಡುತ್ತಿರುವ ಶ್ಯಾಮ ಸುದರ್ಶನ್ ಭಟ್,ಬೆಂಬಲಿಗರು

ಮಂಗಳೂರು: ಸುರತ್ಕಲ್ ಟೋಲ್ ವಿರುದ್ಧ ಹೋರಾಟದ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರತಿಭಾ ಕುಳಾಯಿ ಅವರ ವೀಡಿಯೊ, ಫೋಟೊಗಳನ್ನು ತೆಗೆದು ಅವುಗಳಿಗೆ ಅಶ್ಲೀಲವಾದ ಕಾಮೆಂಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ನಿಂದಿಸಲಾಗುತ್ತಿದೆ.
ಶ್ಯಾಮ ಸುದರ್ಶನ್ ಭಟ್ ಹೊಸಮೂಲೆ ಎಂಬಾತ ಮತ್ತು ಆತನ ಬೆಂಬಲಿಗರು ಪ್ರತಿಭಾ ಕುಳಾಯಿ ವಿರುದ್ಧ ಫೇಸ್ ಬುಕ್ ನಲ್ಲಿ ಅಶ್ಲೀಲವಾಗಿ ನಿಂದಿಸಿದ್ದಾರೆ. ಪ್ರತಿಭಾ ಕುಳಾಯಿ ಅವರ ಫೋಟೊ ಒಂದಕ್ಕೆ "ಮಲಗಿ ಮಾಡಿ ಒಳ್ಳೆ ಅಭ್ಯಾಸ ಉಂಟು ಮಾರೆ" ಎಂದು ಶ್ಯಾಮ ಸುದರ್ಶನ್ ಭಟ್ ಹೊಸಮೂಲೆ ನಿಂದಿಸಿದ್ದು, ಇದಕ್ಕೆ ಹಲವು ಮಂದಿ ಬೆಂಬಲವಾಗಿ ಹಲವು ರೀತಿಯ ನಿಂದನೆಗಳನ್ನು ಕಾಮೆಂಟ್ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಭಾ ಕುಳಾಯಿ ಅವರು "ಟೋಲ್ ವಿರುದ್ಧದ ಹೋರಾಟದ ಸಂದರ್ಭದ ವೀಡಿಯೊ, ಫೋಟೊ ಮೂಲಕ ಟ್ರೋಲ್ ಮಾಡಿ ಹೋರಾಟದಿಂದ ಹಿಂದೆ ಸರಿಸಲಾಗದು. ಇಂತಹ ಟ್ರೋಲ್ಗಳಿಗೆ ಹೆದರುವವಳಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲೂ ಮಾತನಾಡಿದ ಅವರು, ಪ್ರತಿಭಟನೆಯ ಸಂದರ್ಭ ನನ್ನ ಫೋಟೊ, ವೀಡಿಯೊ ಜತೆ ಅಶ್ಲೀಲ ಪದಗಳ ಮೂಲಕ ನನ್ನನ್ನು ಟ್ರೋಲ್ ಮಾಡುತ್ತಿರುವವರ ವಿರುದ್ಧ ದೂರು ನೀಡಲಿದ್ದೇನೆ ಎಂದಿದ್ದಾರೆ.
ಪ್ರತಿಭಟನೆಯ ತಳ್ಳಾಟದಲ್ಲಿ ನನ್ನ ಸೀರೆ ಸೆರಗು ಜಾರಿತ್ತು. ನನ್ನನ್ನು ಬಂಧಿಸಲು ಮುಂದಾದಾಗ ಸೀರೆಗೆ ಕೈ ಹಾಕಬೇಡಿ ಎಂದು ಬೊಬ್ಬೆ ಹಾಕಿದ್ದೇನೆ. ಇದು ಮಾಧ್ಯಮ ಮಿತ್ರರ ಸಮ್ಮಖದಲ್ಲಿ ನಡೆದಿದ್ದು, ವೀಡಿಯೊ ಸಾಕ್ಷಿ ಇದೆ. ಹೆಣ್ಣಿನ ಅಸಹಾಯಕ ಪರಿಸ್ಥಿತಿಯ ವೀಡಿಯೊವನ್ನು ಎಡಿಟ್ ಮಾಡಿ ಅದಕ್ಕೆ ಸಿನೆಮಾ ಟೈಟಲ್ ಕೊಡುವುದು ಅಸಹ್ಯ ಕಮೆಂಟ್ಸ್ ಪೋಸ್ಟ್ ಮಾಡುವುದು ಬಿಜೆಪಿ ನಾಯಕರ ನೈತಿಕತೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಮಹಿಳೆಯ ಬಗ್ಗೆ ಈ ರೀತಿ ಅತ್ಯಂತ ಕೆಟ್ಟದಾಗಿ ಟ್ರೋಲ್ ಮಾಡಿದವರು ಮಾನಸಿಕ ಅಸ್ವಸ್ಥರಾಗಿರಬಹುದೆಂಬ ಅನುಮಾನವಿದೆ. ಬಿಜೆಪಿಯಲ್ಲಿ ಗುರುತಿಸಿಕೊಂಡವರಿಂದಲೇ ಇಂತಹ ಕೃತ್ಯ ನಡೆದಿದ್ದು, ಧರ್ಮ ಸಂಸ್ಕೃತಿ ಎಂದೆಲ್ಲಾ ಹೇಳುವವರು ಹೆಣ್ಣು ಮಕ್ಕಳ ಬಗ್ಗೆ ಅವರ ಪೋಸ್ಟ್ಗಳು ಅವರ ಸಂಸ್ಕೃತಿಯನ್ನು ಬಿಂಬಿಸಿದೆ. ಅವರನ್ನೆಲ್ಲಾ ಕಾನೂನಾತ್ಮಕವಾಗಿ ಹೇಗೆ ಎದುರಿಸಬೇಕೆಂದು ನನಗೆ ತಿಳಿದಿದೆ ಎಂದಿದ್ದಾರೆ.
ಜನಪರ ಹೋರಾಟ ಮಾಡಿದ ನನ್ನನ್ನು ಕುಗ್ಗಿಸುವ ಈ ತಂತ್ರ ನಡೆಯದು. ನಾನು ಯಾರಿಂದಲೂ ಲಂಚ ಪಡೆದಿಲ್ಲ. ಶಾಸಕರು ಹಾಗೂ ಸಂಸದರ ವಸೂಲಿ ಕೇಂದ್ರವಾಗಿರುವ ಟೋಲ್ ವಿರುದ್ಧ ಹೋರಾಟ ಮಾಡಿದ್ದೇನೆ. ನನ್ನ ಹೋರಾಟದ ವೀಡಿಯೊ ಫೋಟೊ ಬಳಸಿ ಕಾಂತಾರ 2 ಎಂದು ಪೋಸ್ಟ್ ಮಾಡಲಾಗಿದೆ. ಕಾಂತಾರ 2 ಮಾತ್ರವಲ್ಲ, 3,4 ಕೂಡಾ ಏನೆಂದು ತೋರಿಸುವೆ. ಜತೆಗೆ ನಾಗವಲ್ಲಿ ಎಂದು ಪೋಸ್ಟ್ ಮಾಡಲಾಗಿದೆ. ಈ ಹಿಂದೆಯೂ ನನ್ನನ್ನು ಛೇಡಿಸಿದವರಿಗೆ ನೈಜ ನಾಗವಲ್ಲಿಯ ರೂಪ ತೋರಿಸಿದ್ದೇನೆ. ಅದನ್ನು ಮುಂದೆಯೂ ಮಾಡಲು ಹಿಂಜರಿಯಲಾರೆ ಎಂದು ಪ್ರತಿಭಾ ಕುಳಾಯಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್, “ಟೋಲ್ ಗೇಟ್ ವಿರೋಧಿ ಹೋರಾಟದ ಜನ ಬೆಂಬಲ ಕಂಡು ಬಿಜೆಪಿ ಪರಿವಾರ ಎಷ್ಟು ಕ್ರುದ್ಧ ಆಗಿದೆ ಎಂದರೆ, ಹೋರಾಟದಲ್ಲಿ ಭಾಗಿಯಾಗಿರುವ ತುಳುವ ಹೆಣ್ಣು ಮಕ್ಕಳ ಕುರಿತು “ಸಭ್ಯ” ಮುಖವಾಡಗಳೂ ವಿಕಾರವಾಗಿ ಅರಚಾಡತೊಡಗಿವೆ. ಸಮಾಜ ಇದನ್ನೆಲ್ಲ ಗಮನಿಸುತ್ತಿದೆ. ಇದು ಇಡೀ ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನ. ಸಮಿತಿ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಗಂಭೀರವಾಗಿ ಪರಿಗಣಿಸುತ್ತದೆ. ಪ್ರತಿಭಾ ಕುಳಾಯಿ ಜೊತೆ ನಿಲ್ಲುತ್ತದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ತಿಳಿಸಿದೆ.
ಈ ಅವಹೇಳನಕಾರಿ ಪೋಸ್ಟ್ ಕುರಿತು ಸಾಮಾಜಿಕ ತಾಣ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹಾ ಕೀಳು ಮಟ್ಟದ ಹೇಳಿಕೆಯ ಕುರಿತು ಶ್ಯಾಮ ಸುದರ್ಶನ್ ಭಟ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.







