ಡಿ.12ರಂದು 25 ಲಕ್ಷ ಜನರಿಂದ ವಿಧಾನಸೌಧ ಮುತ್ತಿಗೆ: ಬಸವಜಯ ಮೃತ್ಯುಂಜಯ ಶ್ರೀ
ಹುಕ್ಕೇರಿಯಲ್ಲಿ ಪಂಚಮಸಾಲಿ ಬೃಹತ್ ಸಮಾವೇಶ

ಬೆಳಗಾವಿ, ಅ.21: ಪಂಚಮಸಾಲಿ ಸಮಾಜದ ಹೋರಾಟ ಅಂತಿಮ ಘಟ್ಟ ತಲುಪಿದ್ದು, 2 ಎ ಮೀಸಲಾತಿ ನೀಡುವಲ್ಲಿ ಸರಕಾರ ವಿಳಂಬ ನೀತಿ ತೋರುತ್ತಿರುವುದನ್ನು ಖಂಡಿಸಿ 2022ರ ಡಿ.12ರಂದು 25 ಲಕ್ಷ ಜನರಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಪಂಚಮಸಾಲಿ ಸಮುದಾಯದ ಕೂಡಲಸಂಗಮ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಶುಕ್ರವಾರ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಆಯೋಜಿಸಿದ್ದ ಪಂಚಮಸಾಲಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದ 2ಎ ಮೀಸಲಾತಿ ಹೋರಾಟ ಕೆಲವೇ ದಿನಗಳಲ್ಲಿ ತಾರ್ಕಿಕ ಅಂತ್ಯ ಕಾಣಲಿದೆ. ಸರಕಾರದ ವಿಳಂಬ ನೀತಿ ಖಂಡಿಸಿ ಪಂಚಮಸಾಲಿ ಸಮುದಾಯದಿಂದ ಸಮಾವೇಶ ನಡೆಯುತ್ತಿದೆ ಎಂದು ಹೇಳಿದರು.
ಶೇ.82ರಷ್ಟು ಬಹುಸಂಖ್ಯಾತ ಪಂಚಮಸಾಲಿ ಸಮಾಜದವರು ಅಧಿಕಾರದಿಂದ ವಂಚಿತರಾಗಿದ್ದಾರೆ. ಪಂಚಮಸಾಲಿ ಹೃದಯವಂತ ಸಮಾಜ, ನಾನು ಪೀಠಾಧ್ಯಕ್ಷನಾದ ಬಳಿಕ ಎಂದೆಂದಿಗೂ ಯಾರೂ ಏನನ್ನೂ ಕೇಳಿಲ್ಲ. ಮೀಸಲಾತಿ ಸಿಗೋವರೆಗೂ ಏನೂ ಬೇಡ, ಹೋರಾಟಕ್ಕೆ ಬನ್ನಿ ಎಂದು ಕರೆ ಕೊಟ್ಟಿದ್ದೇನೆ ಎಂದು ತಿಳಿಸಿದರು.
ಮೀಸಲಾತಿಗೆ ಸಂಬಂಧಿಸಿದಂತೆ ಈಗಾಗಲೇ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡಿದ್ದೇವೆ. ಈಗ ಮೀಸಲಾತಿ ಹೋರಾಟ ವಿಳಂಬ ಆಗುತ್ತಿದೆ. ಎಸ್ಸಿ, ಎಸ್ಟಿ ಸಮಾಜಕ್ಕೆ ಮೀಸಲಾತಿ ಕೊಟ್ಟಂತೆ ನಮಗೂ ಮೀಸಲಾತಿ ಕೊಡಬೇಕು. ಚುನಾವಣೆ ಬರುವ ಮುಂಚೆ ಮೀಸಲಾತಿ ಘೋಷಣೆ ಮಾಡಬೇಕು. ಸಿಎಂಗೆ ಕಳಕಳಿ ಇದ್ದರೆ ಮೀಸಲಾತಿಯನ್ನು ಕೂಡಲೇ ಘೋಷಿಸಲಿ ಎಂದು ಶ್ರೀಗಳು ಸವಾಲು ಹಾಕಿದರು.







