ರಾಜ್ ಠಾಕ್ರೆ ಪಕ್ಷದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸಿಎಂ, ಡಿಸಿಎಂ!
![ರಾಜ್ ಠಾಕ್ರೆ ಪಕ್ಷದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸಿಎಂ, ಡಿಸಿಎಂ! ರಾಜ್ ಠಾಕ್ರೆ ಪಕ್ಷದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸಿಎಂ, ಡಿಸಿಎಂ!](https://www.varthabharati.in/sites/default/files/images/articles/2022/10/22/353843-1666406834.jpg)
(Pratik Chorge/HT Photo)
ಮುಂಬೈ: ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಶುಕ್ರವಾರ ಸಂಜೆ ಶಿವಾಜಿ ಪಾರ್ಕ್ನಲ್ಲಿ ಆಯೋಜಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪಾಲ್ಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ರಾಜಕೀಯ ಪಕ್ಷಗಳ ಮರು ಹೊಂದಾಣಿಕೆ ಬಗೆಗಿನ ಊಹಾಪೋಹಗಳು ಆರಂಭವಾಗಿವೆ ಎಂದು hindustantimes.com ವರದಿ ಮಾಡಿದೆ.
ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರವನ್ನು ಕಳೆದ ಜೂನ್ನಲ್ಲಿ ಪತನಗೊಳಿಸಿ, ಶಿಂಧೆ- ಫಡ್ನವೀಸ್ ಸರ್ಕಾರ ರಚನೆಯಾದ ಬಳಿಕ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ವಿರುದ್ಧದ ಮೂವರು ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು.
ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಮತ್ತು ಠಾಕ್ರೆ ನೇತೃತ್ವದ ಶಿವಸೇನೆಯ ಪ್ರಮುಖ ಬಲ ಎನಿಸಿದ ಮುಂಬೈ ಸ್ಥಳೀಯ ಸಂಸ್ಥೆಯ ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನದ ಹಿನ್ನೆಲೆಯಲ್ಲಿ ಈ ಸಮಾರಂಭ ವಿಶೇಷ ಮಹತ್ವ ಪಡೆದಿದೆ. 2023ರ ಆರಂಭದಲ್ಲಿ ಬಿಎಂಸಿ ಚುನಾವಣೆ ನಡೆಯಲಿದೆ.
ಮಹಾರಾಷ್ಟ್ರದ ಜನತೆಯ ಹಿತಾಸಕ್ತಿ ಕಾಪಾಡುವವರನ್ನು ಬಿಜೆಪಿ ವಿಭಜಿಸಿದೆ ಎಂದು ಠಾಕ್ರೆ ಬಣ ಬಿಜೆಪಿ ವಿರುದ್ಧ ಆರೋಪ ಮಾಡಿದೆ. ಅಂಧೇರಿ ಚುನಾವಣೆಯಲ್ಲಿ ಮರಾಠಾ ಮತಗಳನ್ನು ಧ್ರುವೀಕರಿಸಲು ಶಿವಸೇನೆ ಮುಂದಾಗಿದ್ದು, ಅದು ಅವರ ಪರ ಒಲವು ವ್ಯಕ್ತವಾಗಲು ಕಾರಣವಾಗಿದೆ ಎನ್ನಲಾಗಿದೆ. ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ ಜತೆ ಪ್ರತ್ಯಕ್ಷ ಅಥವಾ ಪರೋಕ್ಷ ಒಪ್ಪಂದ ಮಾಡಿಕೊಳ್ಳುವುದರಿಂದ ಮರಾಠಿಗರದಲ್ಲಿ ಬಿಜೆಪಿಯ ಬಲವರ್ಧನೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಬಗ್ಗೆ hindustantimes.com ವರದಿ ಮಾಡಿದೆ.