ಕಾರವಾರ: 3 ಕಡೆ ತುರ್ತು ಭೂ ಸ್ಪರ್ಶಕ್ಕೆ ಯತ್ನಿಸಿದ ಹೆಲಿಕಾಪ್ಟರ್; ಆತಂಕಕ್ಕೊಳಗಾದ ಸ್ಥಳೀಯರು
ಕಾರವಾರ: ಭಾರತೀಯ ಕೋಸ್ಟ್ ಗಾರ್ಡ್ನ ಹೆಲಿಕಾಪ್ಟರ್ ಒಂದು ನಗರದ ಮೂರು ಕಡೆ ತುರ್ತು ಭೂಸ್ಪರ್ಶಕ್ಕೆ ಯತ್ನಿಸಿದ್ದು ಸ್ಥಳೀಯರು ಆತಂಕಕ್ಕೆ ಒಳಗಾದ ಘಟನೆ ನಡೆದಿದೆ.
ಕಾರವಾರ ನಗರದ ಮಾಲಾದೇವಿ ಮೈದಾನ, ಜಿಲ್ಲಾಧಿಕಾರಿ ಕಚೇರಿ ಎದುರಿಗಿನ ಫ್ಲೈ ಓವರ್ ಮೇಲೆ ಹಾಗೂ ಟ್ಯಾಗೋರ್ ಕಡಲ ತೀರದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ನ ಅಡ್ವಾನ್ಸ್ ಲೈಟ್ ಹೆಲಿಕಾಪ್ಟರ್ ಇಳಿಯಲು ಪ್ರಯತ್ನಿಸಿ ಪುನಃ ತೆರಳಿದೆ.
ಹೆಲಿಕಾಪ್ಟರ್ ತೀರಾ ಕೆಳಮಟ್ಟಕ್ಕೆ ಬಂದಿದ್ದನ್ನು ಕಂಡು ಸ್ಥಳೀಯರು ಒಮ್ಮೆ ಆತಂಕಕ್ಕೊಳಗಾಗಿದ್ದರು. ಏನು ನಡೆಯುತ್ತಿದೆ ಎನ್ನುವುದು ತಿಳಿಯದೇ ಗಾಬರಿಯಾದರು. ರಸ್ತೆ, ಕಡಲ ತೀರದಲ್ಲಿ ನಿಂತವರೆಲ್ಲ ಮೊಬೈಲ್ನಲ್ಲಿ ಫೋಟೋ, ವಿಡಿಯೋ ಮಾಡಿಕೊಂಡರು.
ಈ ಬಗ್ಗೆ ಕೋಸ್ಟ್ ಗಾರ್ಡ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಇದೊಂದು ಟ್ರೈಯಲ್ ಅಷ್ಟೇ. ತುರ್ತು ಸಂದರ್ಭ ಹೆಲಿಕಾಪ್ಟರ್ ಅನ್ನು ಎಲ್ಲೆಲ್ಲಿ ಸುರಕ್ಷಿತವಾಗಿ ಇಳಿಸಬಹುದು ಎಂಬ ಬಗ್ಗೆ ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿದ್ದೇವೆ. ಅಂಕೋಲಾದ ಹಟ್ಟಿಕೇರಿ, ಕಾರವಾರ ನಗರ ಭಾಗದಲ್ಲಿ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.