ಕರಾವಳಿಯ ರೈತರು ಇನ್ನಷ್ಟು ಆಧುನೀಕರಣಗೊಳ್ಳಬೇಕು: ಶಾಸಕ ರಘುಪತಿ ಭಟ್
ಬ್ರಹ್ಮಾವರ ಕೆವಿಕೆಯಲ್ಲಿ ಕೃಷಿ ಮಹೋತ್ಸವ ಉದ್ಘಾಟನೆ

ಬ್ರಹ್ಮಾವರ, ಅ.22: ವಿವಿಧ ಕಾರಣಗಳಿಗಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಇದರಿಂದ ಹೆಚ್ಚಿನ ಮಂದಿ ಕೃಷಿಯಿಂದ ತೋಟಗಾರಿಕಾ ಬೆಳೆಗಳಿಗೆ ಪರಿವರ್ತನೆ ಗೊಳ್ಳುತಿದ್ದಾರೆ. ಕೃಷಿಯಲ್ಲಿ ಭವಿಷ್ಯಕ್ಕಾಗಿ ರೈತರು ಯಾಂತ್ರೀಕರಣಕ್ಕೆ ಹೆಚ್ಚಿನ ಒಲವು ತೋರಬೇಕು ಹಾಗೂ ಅದನ್ನು ಇನ್ನಷ್ಟು ಆಧುನೀಕರಣಗೊಳಿಸಬೇಕು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ, ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿನ್, ಜಿಲ್ಲಾ ಕೃಷಿಕ ಸಮಾಜ ಉಡುಪಿ ಮತ್ತು ದಕ್ಷಿಣ ಕನ್ನಡ, ಜಿಲ್ಲಾ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ, ಮುಖ್ಯಮಂತ್ರಿಗಳ ನೈಸರ್ಗಿಕ ಕೃಷಿ ಯೋಜನೆ, ವ.ಕೃ.ತೋ.ಸಂ.ಕೇಂದ್ರ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಡಿಪ್ಲೋಮಾ ಮಹಾವಿದ್ಯಾಲಯ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸ ಲಾದ ಕೃಷಿ ಮಹೋತ್ಸವವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಕರಾವಳಿಯಲ್ಲಿ ಕೃಷಿ ಕೂಲಿ ಕಾರ್ಮಿಕರ ತೀವ್ರ ಕೊರತೆ, ಕೂಲಿಯ ಹೆಚ್ಚಳ, ಕಾಡುಪ್ರಾಣಿಗಳ ಹಾವಳಿ ಯಿಂದ ರೈತರು ಅಪಾರ ನಷ್ಟ ಅನುಭಸುತ್ತಿದ್ದು, ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳು ಹಾಗೂ ನೂತನ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಾತ್ರ ಕೃಷಿಯನ್ನು ಉಳಿಸಲು ಸಾಧ್ಯವಿದೆ. ಕೃಷಿ ಭೂಮಿಯನ್ನು ಹಡಿಲು ಬೀಳದೇ ಅದನ್ನು ಪುನ:ಶ್ಚೇತನಗೊಳಿಸಬೇಕು. ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಳ್ಳುವ ಮೂಲಕ, ವ್ಯವಸ್ಥಿತವಾಗಿ ಕೃಷಿ ಮಾಡಿ, ಲಾಭಗಳಿಸುವ ಮೂಲಕ ಕೃಷಿಯನ್ನು ಉಳಿಸಿ ಬೆಳೆಸಬಹುದು ಎಂದು ಶಾಸಕ ಭಟ್ ಅಭಿಪ್ರಾಯಪಟ್ಟರು.
ಜಿಲ್ಲೆಯ ಶೇ. 50ಕ್ಕೂ ಅಧಿಕ ಕೃಷಿಭೂಮಿ ಈಗಾಗಲೇ ತೋಟಗಾರಿಕಾ ಬೆಳೆಗೆ ಪರಿವರ್ತನೆಗೊಂಡಿದ್ದು, ಪ್ರಸ್ತುತ ಇರುವ ಕೃಷಿ ಭೂಮಿಯಲ್ಲಿ ಯಾಂತ್ರೀಕರಣ ಮತ್ತು ಆಧುನಿಕತೆಯನ್ನು ಅಳವಡಿಸಿಕೊಂಡು ಪುನ:ಶ್ಚೇತನ ಗೊಳಿಸಬೇಕು. ಕಾಡುಪ್ರಾಣಿಗಳ ಹಾವಳಿ ತಡೆಗೆ ಕಾಡಿನಲ್ಲಿ ಈಗಾಗಲೇ 10 ಸಾವಿರಕ್ಕೂ ಅಧಿಕ ಹಣ್ಣಿನ ಗಿಡಗಳನ್ನು ನೆಡಲಾಗಿದ್ದು, ಅಕೇಷಿಯಾ ಮರಗಳು ಇರುವ ಜಾಗದಲ್ಲಿ ಸಹ ಹಣ್ಣಿನ ಗಿಡಗಳನ್ನು ನೆಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೃಷಿ ಕಾಲೇಜಿಗೆ ಬೇಡಿಕೆ: ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಆರಂಭಿಸುವ ಕುರಿತಂತೆ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿವಿ ಮೂಲಕ ಅಗತ್ಯ ಕ್ರಮ ಕೈಗೊಳ್ಳಬೇಕು. ಕರಾವಳಿ ಪ್ರದೇಶದಲ್ಲಿ ಕೃಷಿ ಕಾಲೇಜು ಅತ್ಯಂತ ಅಗತ್ಯವಾಗಿದ್ದು, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಈಗಾಗಲೇ ಹೆಚ್ಚಿನ ಪ್ರಮಾಣದ ಅಗತ್ಯ ಮೂಲಭೂತ ಸೌಲಭ್ಯಗಳು, ವಿಜ್ಞಾನಿಗಳು, ಸಿಬ್ಬಂದಿಗಳು ಇದ್ದು ಶೀಘ್ರದಲ್ಲಿ ಕೃಷಿ ಕಾಲೇಜು ಆರಂಭಕ್ಕೆ ಸರಕಾರದಿಂದ ಅಗತ್ಯವಿರುವ ಎಲ್ಲಾ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ಕುಲಪತಿ ಡಾ.ಆರ್.ಸಿ.ಜಗದೀಶ್, ರೈತರಿಗೆ ಅನುಕೂಲವಾಗುವಂತೆ ಹೊಸ ಸಂಶೋಧನೆ ಗಳು, ಹೊಸ ತಂತ್ರಜ್ಞಾನ ಅಳವಡಿಕೆ, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕಗಳ ಮೂಲಕ ಫಲವತ್ತತೆ ಹೆಚ್ಚಳ, ರೈತರೊಂದಿಗೆ ನಿರಂತರ ಸಂಪರ್ಕದ ಮೂಲಕ ಕೃಷಿ ವಿವಿ ರೈತರು ಮತ್ತು ಕೃಷಿಯ ಅಭಿವೃಧ್ದಿಗೆ ಕಾರ್ಯನಿರ್ವಹಿಸುತ್ತಿದ್ದು, ತಲಾ ೨ ಹೊಸ ಭತ್ತದ ತಳಿಗಳು ಮತ್ತು ಗೇರು ತಳಿಗಳನ್ನು ಪರಿಚಯಿಸಲಾಗುತ್ತಿದೆ ಎಂದರು.
ಕೃಷಿಗೆ ಈಗ ಕೃಷಿ ಕಾರ್ಮಿಕರ ತೀವ್ರ ಕೊರತೆ ಇದ್ದು, ಇದಕ್ಕಾಗಿ ಕೃಷಿಯಲ್ಲಿ ತಾಂತ್ರೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ನಾಟಿ ಯಂತ್ರ, ಕಳೆ ಕೇಳುವ ಯಂತ್ರ, ಕಟಾವು ಮತ್ತು ಸಂಸ್ಕರಣ ಯಂತ್ರಗಳನ್ನು ಇನ್ನಷ್ಟು ಆಧುನೀಕರಿಸಿ, ರೈತರಿಗೆ ಸುಲಭ ದರದಲ್ಲಿ ಸಿಗುವಂತೆ ಮಾಡಲಾಗುವುದು. ತೋಟಗಾರಿಕೆಯಲ್ಲೂ ತಾಂತ್ರೀಕರಣಕ್ಕೆ ಆದ್ಯತೆ ನೀಡಲಾಗಿದ್ದು, ಅಡಿಕೆ ಮತ್ತು ತೆಂಗು ಕೊಯ್ಯಲು ಉದ್ದದ ದೋಟಿಯನ್ನು ತಯಾರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಚಾಂತಾರು ಗ್ರಾಪಂ ಅಧ್ಯಕ್ಷೆ ಬೇಬಿ ಆರ್ ಪೂಜಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಕೆಂಪೇಗೌಡ, ಉಪನಿರ್ದೇಶಕ ಚಂದ್ರಶೇಖರ ನಾಯಕ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ, ಶಿವಮೊಗ್ಗ ಕೃಷಿ ವಿವಿಯ ಸಂಶೋಧನಾ ನಿರ್ದೇಶಕ ಡಾ.ಮೃತ್ಯಂಜಯ ಸಿ.ವಾಲಿ, ಸಹ ವಿಸ್ತರಣಾ ನಿರ್ದೇಶಕ ಡಾ.ಎಸ್.ಯು.ಪಾಟೀಲ್, ಬೆಂಗಳೂರು ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ವಿ.ವೆಂಕಟ ಸುಬ್ರಮಣಿಯನ್, ರಾಜ್ಯ ಉನ್ನತ ಸಾವಯವ ಕೃಷಿ ಸಮಿತಿ ಸದಸ್ಯ ರಾಘವೇಂದ್ರ ಉಪ್ಪೂರು, ಉಡುಪಿ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ಕುಮಾರ್ ಕೊಡ್ಗಿ, ದ.ಕನ್ನಡ ಕೃಷಿಕ ಸಮಾಜದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಧನಂಜಯ, ಕೃಷಿ ಡಿಪ್ಲೋಮಾ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ವಿ.ಸುಧೀರ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಹೊಸ ಭತ್ತದ ತಳಿಗಳು ಮತ್ತು ಗೇರು ತಳಿಗಳ ಬಿಡುಗಡೆ, ಕೃಷಿ ಸಾಧಕರಿಗೆ ಸನ್ಮಾನ, ನಾಲ್ಕು ಜೈವಿಕ ಗೊಬ್ಬರಗಳ ಬಿಡುಗಡೆ, ಕೃಷಿ ಸಖಿ ಯರಿಗೆ ಪ್ರಮಾಣ ಪತ್ರ ವಿತರಣೆ, ತಾಂತ್ರಿಕ ಕೈಪಿಡಿ ಬಿಡುಗಡೆ, ಕೃಷಿ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ನಡೆಯಿತು.
ಕೃಷಿ ಮಹೋತ್ಸವದ ಅಂಗವಾಗಿ ಹಾಕಲಾದ 100ಕ್ಕೂ ಅಧಿಕ ಸ್ಟಾಲ್ಗಳು ಅಪಾರ ಸಂಖ್ಯೆಯ ಜನರನ್ನು ಆಕರ್ಷಿಸಿತು. ಜನರು ತಂಡೋಪತಂಡವಾಗಿ ಬಂದು ಸ್ಟಾಲ್ಗಳಿಗೆ ಭೇಟಿ ನೀಡಿದರು. ವಿವಿಧ ಭತ್ತದ ಮತ್ತು ತೋಟಗಾರಿಕಾ ತಳಿಗಳು ಮತ್ತು ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.











