ಕಣಚೂರು ಆಸ್ಪತ್ರೆ, ಸಂಶೋಧನಾ ಕೇಂದ್ರದಲ್ಲಿ ಕಾರ್ಯಾಗಾರ

ಉಳ್ಳಾಲ: ವಿದ್ಯಾರ್ಥಿಗಳು ಶಿಕ್ಷಣ ಜೊತೆಗೆ ಕಾನೂನಿನ ಪಾಲನೆ ಮಾಡಬೇಕು. ಯಾರು ಕಾನೂನನ್ನು ಗೌರವಿಸುತ್ತಾರೋ ಅವರನ್ನು ಕಾನೂನು ಕೂಡ ಗೌರವಿಸುತ್ತದೆ. ಶಿಕ್ಷಣ ಸಂಸ್ಥೆ ಗಳಲ್ಲಿ ಬದಲಾವಣೆ, ನಿಯಮಗಳು ಇರುತ್ತವೆ. ಅದನ್ನು ಪಾಲಿಸಿಕೊಂಡು ಶಿಕ್ಷಣ ಪಡೆಯಬೇಕಾಗಿದೆ. ಯಾವುದೇ ಪ್ರಕರಣ ಠಾಣೆಯಲ್ಲಿ ದಾಖಲಾದರೆ ಪಾಸ್ ಪೋರ್ಟ್ ಸಿಗುವುದಿಲ್ಲ. ಅಗತ್ಯ ಸೇವೆಗಳಿಗೆ ಅಡ್ಡಿಯಾಗುತ್ತದೆ. ಇದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಉಳ್ಳಾಲ ಠಾಣೆಯ ಉಪ ನಿರೀಕ್ಷಕ ಶಿವ ಕುಮಾರ್ ಹೇಳಿದರು.
ಅವರು ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಇದರ ಆಶ್ರಯದಲ್ಲಿ ಕಣಚೂರು ಕ್ಯಾಂಪಸ್ ನಲ್ಲಿ ಓರಿಯನ್ಟೇಶನ್ ಡೇ ಹಾಗೂ ಕೋರ್ಸ್ ಬದಲಾವಣೆ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಣಚೂರು ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಮೋನಿ ಸಲ್ದಾನ ವಿವಿಧ ಕೋರ್ಸ್ ಗಳಲ್ಲಿ ಆಗಿರುವ ಬದಲಾವಣೆ ಹಾಗೂ ಅದರ ನಿಬಂಧನೆಗಳನ್ನು ವಿವರಿಸಿದರು.
ಚಯರ್ ಮ್ಯಾನ್ ಕಣಚೂರು ಮೋನು ಮಾತನಾಡಿ, ಶಿಕ್ಷಣ ಪಡೆಯುವ ಸಮಯದಲ್ಲಿ ಶಿಕ್ಷಣಕ್ಕೆ ಒತ್ತು ನೀಡಬೇಕು. ಉಳಿದ ಚಟುವಟಿಕೆ ದೂರ ಮಾಡಬೇಕು. ರ್ಯಾಗಿಂಗ್, ಆಲ್ಕೋಹಾಲ್, ಗಾಂಜಾ ಇವುಗಳಿಂದ ಮುಕ್ತವಾಗಿ ಶಿಕ್ಷಣ ಕಡೆ ಗಮನ ಹರಿಸುವಂತೆ ಸಲಹೆ ನೀಡಿದರು.
ಕಣಚೂರು ಹೆಲ್ತ್ ಸೈನ್ಸ್ ಕಾಲೇಜು ಪ್ರಿನ್ಸಿಪಾಲ್ ಡಾ. ಶಮೀಮ, ಮತ್ತಿತರರು ಉಪಸ್ಥಿತರಿದ್ದರು. ಶೆರಿನ್ ಕಾರ್ಯಕ್ರಮ ನಿರೂಪಿಸಿದರು, ಡೀನ್ ಡಾ.ಮುಹಮ್ಮದ್ ಸುಹೈಲ್ ಸ್ವಾಗತಿಸಿದರು. ಕಣಚೂರು ಹೆಲ್ತ್ ಸೈನ್ಸ್ ಕಾಲೇಜು ಪ್ರಿನ್ಸಿಪಾಲ್ ಡಾ. ಶಮೀಮ ವಂದಿಸಿದರು.