ಬೆಂಗಳೂರು | ಪಟಾಕಿ ಅವಘಡ: ನಾಲ್ವರು ಬಾಲಕರ ಕಣ್ಣು, ಮುಖಕ್ಕೆ ಗಾಯ
ಬೆಂಗಳೂರು, ಅ.24: ದೀಪಾವಳಿ ಹಬ್ಬದ ಸಂದರ್ಭ ಪಟಾಕಿ, ಸಿಡಿಮದ್ದು ಬಳಸುವಾಗ ಎಚ್ಚರ ವಹಿಸುವಂತೆ ಸರಕಾರ ಸಲಹೆ, ಸೂಚನೆಗಳನ್ನು ನೀಡುತ್ತಿದ್ದರೂ ಮಕ್ಕಳು ಗಾಯಗೊಳ್ಳುತ್ತಿರುವ ಪ್ರಸಂಗಗಳು ಪ್ರತೀ ವರ್ಷವೂ ವರದಿಯಾಗುತ್ತವೆ. ಬೆಂಗಳೂರು ನಗರದಲ್ಲಿ ರವಿವಾರದಿಂದ ಈ ವರೆಗೆ ಪಟಾಕಿ ಅವಘಡದಿಂದ ಗಾಯಗೊಂಡ ನಾಲ್ವರು ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಮಿಂಟೋ ಕಣ್ಣಿನ ಅಸ್ಪತ್ರೆಯ ಡಾ.ವಿದ್ಯಾ ತಿಳಿಸಿದ್ದಾರೆ.
ಗಾಯಾಳುಗಳ ಪೈಕಿ ಮೂವರಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಕೆಟ್ ಪಟಾಕಿ ಹಾರಿಸುವ ವೇಳೆ ಸಿಡಿದ ಪರಿಣಾಮ 10 ವರ್ಷದ ಬಾಲಕನೋರ್ವನ ಮುಖ ಪೂರ್ತಿ ಸುಟ್ಟು ಗಾಯಗಳಾಗಿವೆ. ಆತನಿಗೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಥಣಿಸಂದ್ರದ ಏಳು ವರ್ಷದ ಬಾಲಕನ ಎಡಗಣ್ಣಿಗೆ ಹಾನಿಯಾಗಿದೆ. ಫ್ರೆಝರ್ ಟೌನ್ ನ ಏಳು ವರ್ಷದ ಬಾಲಕನೊಬ್ಬನ ಬಲಗಣ್ಣಿಗೆ ಹಾನಿಯಾಗಿದೆ. ಸದ್ಯ ಈ ಬಾಲಕರ ಕಣ್ಣಿನ ದೃಷ್ಟಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ಡಾ.ವಿದ್ಯಾ ಮಾಹಿತಿ ನೀಡಿದ್ದಾರೆ.