ವೃತ್ತಿ ದುರ್ನಡತೆ ಪ್ರಕರಣ: ವಕೀಲ ಕೆ.ಬಿ.ನಾಯಕ್ ಅಮಾನತು ಮಾಡಿದ ಬಿಸಿಐ ಆದೇಶಕ್ಕೆ ಹೈಕೋರ್ಟ್ ತಡೆ
![ವೃತ್ತಿ ದುರ್ನಡತೆ ಪ್ರಕರಣ: ವಕೀಲ ಕೆ.ಬಿ.ನಾಯಕ್ ಅಮಾನತು ಮಾಡಿದ ಬಿಸಿಐ ಆದೇಶಕ್ಕೆ ಹೈಕೋರ್ಟ್ ತಡೆ ವೃತ್ತಿ ದುರ್ನಡತೆ ಪ್ರಕರಣ: ವಕೀಲ ಕೆ.ಬಿ.ನಾಯಕ್ ಅಮಾನತು ಮಾಡಿದ ಬಿಸಿಐ ಆದೇಶಕ್ಕೆ ಹೈಕೋರ್ಟ್ ತಡೆ](https://www.varthabharati.in/sites/default/files/images/articles/2022/10/24/354103-1666625848.jpg)
ಬೆಂಗಳೂರು, ಅ.24: ಕರ್ನಾಟಕ ರಾಜ್ಯ ವಕೀಲರ ಪರಿಷತ್(ಕೆಎಸ್ಬಿಸಿ) ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಬಿ.ನಾಯಕ್ ಅವರು ಪರಿಶೀಲನಾ ಅರ್ಜಿ ಇತ್ಯರ್ಥ ಆಗುವವರೆಗೆ ಯಾವುದೇ ನ್ಯಾಯಾಲಯದಲ್ಲಿ ವಕೀಲಿಕೆ ಮಾಡದಂತೆ ಅಮಾನತು ಮಾಡಿ ಭಾರತೀಯ ವಕೀಲರ ಪರಿಷತ್(ಬಿಸಿಐ) ಇತ್ತೀಚೆಗೆ ಮಾಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಬಿಸಿಐ ಆದೇಶ ಪ್ರಶ್ನಿಸಿ ಕೆ.ಬಿ.ನಾಯಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. ಯಾವುದೇ ಕೋರ್ಟ್ನಲ್ಲಿ ವಕೀಲಿಕೆ ಮಾಡುವಂತಿಲ್ಲ ಎಂಬ ಆದೇಶವನ್ನು ಮೇಲ್ನೋಟಕ್ಕೆ ಬಿಸಿಐ ಮಾಡಬಾರದಿತ್ತು. ಈ ಆದೇಶವು ವಕೀಲರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಲಿದ್ದು, ಅವರ ಹೆಸರಿಗೆ ಕಳಂಕ ತರಲಿದೆ ಎಂದು ನ್ಯಾಯಪೀಠವು ತಿಳಿಸಿದೆ.
ಮರುಪರಿಶೀಲನಾ ಅರ್ಜಿ ಇತ್ಯರ್ಥವಾಗುವವರೆಗೆ ಯಾವುದೇ ನ್ಯಾಯಾಲಯದಲ್ಲಿ ವಕೀಲಿಕೆ ಮಾಡಬಾರದು ಎಂದು ಆದೇಶಿಸಿರುವುದರಿಂದ ಅವರ ಜೀವನೋಪಾಯಕ್ಕೆ ಧಕ್ಕೆ ಉಂಟಾಗಲಿದೆ. ಅರ್ಜಿದಾರರನ್ನು ಆಲಿಸದೇ ಅಂಥ ಕಠಿಣ ಆದೇಶವನ್ನು ಮಾಡಬಾರದಿತ್ತು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.