ಕ್ಷುಲ್ಲಕ ವಿವಾದ: ಸ್ನೇಹಿತನ ನಾಲ್ಕರ ಹರೆಯದ ಮಗನನ್ನು ಹತ್ಯೆಗೈದ ಯುವಕ
![ಕ್ಷುಲ್ಲಕ ವಿವಾದ: ಸ್ನೇಹಿತನ ನಾಲ್ಕರ ಹರೆಯದ ಮಗನನ್ನು ಹತ್ಯೆಗೈದ ಯುವಕ ಕ್ಷುಲ್ಲಕ ವಿವಾದ: ಸ್ನೇಹಿತನ ನಾಲ್ಕರ ಹರೆಯದ ಮಗನನ್ನು ಹತ್ಯೆಗೈದ ಯುವಕ](https://www.varthabharati.in/sites/default/files/images/articles/2022/10/24/354111-1666629684.jpeg)
ಆಗ್ರಾ(ಉ.ಪ್ರ.),ಅ.24: ಕ್ಷುಲ್ಲಕ (trivial)ವಿವಾದದ ಹಿನ್ನೆಲೆಯಲ್ಲಿ ತನ್ನ ಸ್ನೇಹಿತನ ನಾಲ್ಕರ ಹರೆಯದ ಮಗನನ್ನು ಅಪಹರಿಸಿ ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕನ ತಂದೆಯ ಜೊತೆಗೆ ತನಗೆ ಕೆಲವು ಸಣ್ಣಪುಟ್ಟ ವಿವಾದಗಳಿದ್ದವು. ಹಿಂದೆ ಏರ್ಪಡಿಸಲಾಗಿದ್ದ ‘ಭಂಡಾರಾ’('Bhandara')ದಲ್ಲಿ ಸಂಘಟಕರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು ಎಂದು ಆರೋಪಿ ಬಂಟಿ (Bunty)(23) ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ಶನಿವಾರ ರಾತ್ರಿ ಘಟನೆ ನಡೆದಿತ್ತು. ಮನೆಯ ಹೊರಗೆ ಆಟವಾಡಿಕೊಂಡಿದ್ದ ಮಗುವನ್ನು ಬಂಟಿ ಅಪಹರಿಸಿದ್ದ. ಆತ ಮಗುವಿನ ತಂದೆಯ ಸ್ನೇಹಿತನೂ ಹೌದು. ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಆರೋಪಿ ಮಗುವನ್ನು ಕೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿ ಸುಕನ್ಯಾ ಶರ್ಮಾ ತಿಳಿಸಿದರು.
ಬಾಲಕ ನಾಪತ್ತೆಯಾದ ಬಳಿಕ ಕುಟುಂಬದವರು ಆತನ ಹುಡುಕಾಟದಲ್ಲಿ ತೊಡಗಿದ್ದು, ಆರೋಪಿ ಕೂಡ ಅವರೊಂದಿಗಿದ್ದ. ಬಾಲಕ ಎಲ್ಲಿದ್ದಾನೆ ಎನ್ನುವುದನ್ನು ಓರ್ವ ಬಾಬಾ ತನಗೆ ತಿಳಿಸಿದ್ದಾನೆ ಎಂದು ಹೇಳಿದ್ದ ಆರೋಪಿ ಅವರನ್ನು ಬಾಲಕ ಶವವು ಬಿದ್ದುಕೊಂಡಿದ್ದ ಸ್ಥಳಕ್ಕೆ ಕರೆದೊಯ್ದಿದ್ದ ಎಂದು ಶರ್ಮಾ ತಿಳಿಸಿದರು.
ತಾನು ಆಗ್ರಾದ ನಿವಾಸಿಯೋರ್ವನಿಂದ ನಾಡ ಪಿಸ್ತೂಲು ಮತ್ತು ಗುಂಡುಗಳನ್ನು ಖರೀದಿಸಿದ್ದನ್ನು ಬಂಟಿ ಒಪ್ಪಿಕೊಂಡಿದ್ದಾನೆ. ಬಾಲಕನನ್ನು ಅಪಹರಿಸಿದ್ದ ಆರೋಪಿ ಬಳಿಕ ಆತನ ಎದೆಗೆ ಗುಂಡಿಟ್ಟು ಕೊಂದಿದ್ದಾನೆ ಎಂದರು. ಆರೋಪಿ ಬಂಟಿ ಮತ್ತು ಬಾಲಕನ ತಂದೆ ಸಿಹಿತಿಂಡಿಗಳ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.