ಲೈಂಗಿಕ ಕಿರುಕುಳ ಪ್ರಕರಣ ಲೇಖಕ ಸಿವಿಕ್ ಚಂದ್ರನ್ ಪೊಲೀಸರಿಗೆ ಶರಣು
![ಲೈಂಗಿಕ ಕಿರುಕುಳ ಪ್ರಕರಣ ಲೇಖಕ ಸಿವಿಕ್ ಚಂದ್ರನ್ ಪೊಲೀಸರಿಗೆ ಶರಣು ಲೈಂಗಿಕ ಕಿರುಕುಳ ಪ್ರಕರಣ ಲೇಖಕ ಸಿವಿಕ್ ಚಂದ್ರನ್ ಪೊಲೀಸರಿಗೆ ಶರಣು](https://www.varthabharati.in/sites/default/files/images/articles/2022/10/25/354149-1666707791.jpg)
Photo: Thachan.makan/Wikimedia Commons,
ತಿರುವನಂತಪುರ, ಅ. 25: ಲೈಂಗಿಕ ಕಿರುಕುಳದ ಎರಡು ಪ್ರಕರಣಗಳನ್ನು ಎದುರಿಸುತ್ತಿರುವ ಲೇಖಕ 74 ವರ್ಷದ ಸಿವಿಕ್ ಚಂದ್ರನ್ ಮಂಗಳವಾರ ಪೊಲೀಸರ ಮುಂದೆ ಶರಣಾಗತರಾಗಿದ್ದಾರೆ. ಕೇರಳ ಉಚ್ಚ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿದ ಒಂದು ವಾರದ ಬಳಿಕ ಅವರು ಶರಣಾಗತರಾಗಿದ್ದಾರೆ.
ತನಿಖಾಧಿಕಾರಿಯಾಗಿರುವ ವಡಗರ ಉಪ ಪೊಲೀಸ್ ಅಧೀಕ್ಷಕರ ಮುಂದೆ ಶರಣಾಗತರಾದ ಬಳಿಕ ಮಂಗಳವಾರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಸಿವಿಕ್ ಚಂದ್ರನ್ ಅವರಿಗೆ ಆಗಸ್ಟ್ನಲ್ಲಿ ಜಾಮೀನು ಮಂಜೂರು ಮಾಡುವಾಗ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಧೀಶ ಎಸ್. ಕೃಷ್ಣ ಕುಮಾರ್ ಅವರು ದೂರುದಾರೆಯ ಜಾತಿ ಹಾಗೂ ಬಟ್ಟೆಗಳಿಗೆ ಸಂಬಂಧಿಸಿ ವ್ಯಕ್ತಪಡಿಸಿದ ಅಭಿಪ್ರಾಯ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಸಾಮಾಜಿಕ ಹೋರಾಟಗಾರರು, ಮಾನವ ಹಕ್ಕು ಹೋರಾಟಗಾರರು ಹಾಗೂ ನಾಗರಿಕ ಸಮಾಜ ಕೃಷ್ಣ ಕುಮಾರ್ ಅವರ ಅಭಿಪ್ರಾಯವನ್ನು ಖಂಡಿಸಿತ್ತು. ಈ ಹಿನ್ನೆಲೆಯಲ್ಲಿ ಕೃಷ್ಣ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ವಿರುದ್ಧ ಮನವಿ ಸಲ್ಲಿಸಿದ ಕೃಷ್ಣ ಕುಮಾರ್, ಈ ಕ್ರಮ ನ್ಯಾಯಾಧೀಶರ ನೈತಿಕತೆಯ ಮೇಲೆ ಪರಿಣಾಮ ಬೀರಬಹುದು ಎಂದು ಪ್ರತಿಪಾದಿಸಿದ್ದರು. ಆದರೆ, ಈ ಮನವಿಯನ್ನು ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠ ತಿರಸ್ಕರಿಸಿತ್ತು. ಆದರೆ, ದ್ವಿಸದಸ್ಯ ಪೀಠ ವರ್ಗಾವಣೆಗೆ ತಡೆಯಾಜ್ಞೆ ನೀಡಿತ್ತು.