ವಡೋದರ: ದೀಪಾವಳಿ ಆಚರಣೆಯ ವೇಳೆ ಪಟಾಕಿ ವಿಚಾರದಲ್ಲಿ ಕೋಮುಗಲಭೆ !

Screenshot/Twitter via Dilip Singh Kshatriya.
ವಡೋದರ: ಮಂಗಳವಾರ ದೀಪಾವಳಿ ಹಬ್ಬ ಆಚರಣೆ ವೇಳೆ ಪಟಾಕಿ ಸಿಡಿಸುವ ವಿಚಾರದಲ್ಲಿ ಉಂಟಾದ ಕಲಹವೊಂದು ವಡೋದರಾ ನಗರದಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯದ ಮಂದಿಯ ನಡುವೆ ಘರ್ಷಣೆಗೆ ಕಾರಣವಾಗಿದೆ.
ನಗರದ ಪಾನಿಗೇಟ್ ಸಮೀಪ ಮಧ್ಯರಾತ್ರಿ ಸುಮಾರು 12.45 ಕ್ಕೆ ಈ ಘಟನೆ ನಡೆದಿದೆ. ಎರಡು ಸಮುದಾಯಗಳ ನಡುವೆ ಒಂದು ತಪ್ಪು ತಿಳುವಳಿಕೆಯಿಂದ ಘಟನೆ ನಡೆದಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ವಡೋದರಾ ಪೊಲೀಸ್ ಆಯುಕ್ತರಾದ ಶಂಶೇರ್ ಸಿಂಗ್ ಹೇಳಿದ್ದಾರೆ. ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳುಂಟಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ರಾಕೆಟ್ ಪಟಾಕಿ ಒಂದು ಮೋಟಾರ್ ಬೈಕ್ಗೆ ತಾಗಿದ ನಂತರ ಈ ಘಟನೆ ನಡೆಯಿತು. ಪಟಾಕಿ ತಾಗಿದ ವಾಹನಕ್ಕೆ ಬೆಂಕಿ ತಗಲಿ ಹಾನಿಯಾಗಿದೆ. ಕಲ್ಲು ತೂರಾಟ ಕೂಡ ನಡೆದಿದೆ.
ಘಟನೆ ಸಂಬಂಧ 20 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅವರಲ್ಲಿ ಒಬ್ಬಾತ ಸ್ಥಳೀಯ ಮನೆಯೊಂದರ ಮೂರನೇ ಮಹಡಿಯಿಂದ ಪೊಲೀಸರತ್ತ ಪೆಟ್ರೋಲ್ ಬಾಂಬ್ ಎಸೆದವನು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭ ಪೊಲೀಸರು ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡ ವೀಡಿಯೋವೊಂದನ್ನೂ ಮಾಧ್ಯಮವೊಂದು ಪೋಸ್ಟ್ ಮಾಡಿದೆ.
ಈ ತಿಂಗಳು ವಡೋದರಾದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ಸಂಭವಿಸಿರುವುದು ಇದು ಎರಡನೇ ಬಾರಿಯಾಗಿದೆ. ಅಕ್ಟೋಬರ್ 3 ರಂದು ಧಾರ್ಮಿಕ ಧ್ವಜಗಳನ್ನು ಹಾರಿಸುವ ಕುರಿತು ಸಾವ್ಲಿ ಪ್ರದೇಶದಲ್ಲಿ ಹಿಂಸೆ ನಡೆದಿತ್ತು.







