ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಬಿಜೆಪಿಯ ಕಣ್ಣೊರೆಸುವ ತಂತ್ರ ಅಷ್ಟೇ: ಸಿದ್ದರಾಮಯ್ಯ
ಬೆಂಗಳೂರು, ಅ. 25: ‘ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹಾಗೂ ಕಾಂಗ್ರೆಸ್ ಪಕ್ಷ ಶಾಸಕರು ಸತತ ಒತ್ತಡದ ಕಾರಣಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲಾಗಿದೆಯೇ ಹೊರತು, ಬಿಜೆಪಿಯ ಕಳಕಳಿಯಿಂದ ಮೀಸಲಾತಿ ಪ್ರಮಾಣ ಹೆಚ್ಚಳವಾಗಿಲ್ಲ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳವಾರ ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸರಕಾರ ಸುಗ್ರೀವಾಜ್ಞೆ ಹೊರಡಿಸಿದ್ದು, ಇದು ಬಿಜೆಪಿಯವರ ಕಣ್ಣೊರೆಸುವ ತಂತ್ರವಷ್ಟೇ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ರಚನೆ ಮಾಡಿದ್ದು ನಮ್ಮ ಸರಕಾರ' ಎಂದು ಸ್ಪಷ್ಟಪಡಿಸಿದರು.
‘ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಸಮಿತಿ ವರದಿ ನೀಡಿ ಎರಡು ವರ್ಷ ಮೂರು ತಿಂಗಳ ಬಳಿಕ ಸರಕಾರ ಮೀಸಲಾತಿ ಹೆಚ್ಚಳಕ್ಕೆ ತೀರ್ಮಾನ ಮಾಡಿದೆ. ಇವರಿಗೆ ನಿಜಕ್ಕೂ ಮೀಸಲಾತಿ ನೀಡಬೇಕೆಂಬ ಇಚ್ಛೆ ಇದ್ದಿದ್ದರೆ ವರದಿ ಬಂದ ಕೂಡಲೇ ಏಕೆ ಮಾಡಲಿಲ್ಲ. ಶ್ರೀರಾಮುಲು ಅವರು ರಕ್ತದಲ್ಲಿ ಬರೆದುಕೊಡುವ ವಾಗ್ದಾನ ನೀಡಿದ್ದರು' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
‘ಎಸ್ಸಿ-ಎಸ್ಟಿ ಮೀಸಲಾತಿ ‘ಸುಗ್ರೀವಾಜ್ಞೆ'ಬಿಜೆಪಿಯವರ ಕಣ್ಣೊರೆಸುವ ತಂತ್ರ. ಚುನಾವಣೆ ರಾಜಕೀಯದ ಕಾರಣಕ್ಕಾಗಿ ನಾವುವರದಿ ಜಾರಿಗೆ ಒತ್ತಾಯಮಾಡಿದ್ದೆವು. ಸದನದಲ್ಲಿ ನಮ್ಮ ಪಕ್ಷದ ಶಾಸಕರುನಿರಂತರವಾಗಿ ಹೋರಾಟ ಮತ್ತು ಒತ್ತಾಯವನ್ನು ಮಾಡಿದ್ದರು. ಇದೀಗಸುಗ್ರೀವಾಜ್ಞೆಹೊರಡಿಸಿದ್ದು, ಇದರ ಬದಲು ವಿಶೇಷ ಅಧಿವೇಶನ ಕರೆಯಬೇಕಿತ್ತು' ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
‘ವಿಧಾನ ಮಂಡಲ ಅಧಿವೇಶನ ಕರೆದು ವಿಧೇಯಕ ಪಾಸ್ ಮಾಡಬೇಕಿತ್ತು. ಕೇಂದ್ರದಲ್ಲಿ ಇವರದ್ದೇ ಸರಕಾರ ಇದ್ದು, ಸಂವಿಧಾನದ ಶೆಡ್ಯೂಲ್ 9ಗೆ ಸೇರಿಸಬೇಕು. ಆದರೆ, ಬಿಜೆಪಿಯವರು ಬಹಳ ಹಿಂದಿನಿಂದಲೂ ಮೀಸಲಾತಿ ಪರವಾಗಿ ಇಲ್ಲ. ಅವರು ಸದಾ ಮೀಸಲಾತಿ ವಿರುದ್ದ ಕೆಲಸ ಮಾಡಿದ್ದಾರೆ. ಹೀಗಾಗಿ ಅವರು ನಮ್ಮ ಪಕ್ಷದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ' ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
‘ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಪದಗ್ರಹಣ ಸಮಾರಂಭ ದಿಲ್ಲಿಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ಆಗಮಿಸಿದ್ದೇನೆ. ಪಕ್ಷದ ಮುಂದಿನ ರಾಜಕೀಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಅಲ್ಲದೆ, ಭಾರತ್ ಜೋಡೋ ಯಾತ್ರೆ ಬಳಿಕ ರಾಜ್ಯದಲ್ಲಿ ಬಸ್ ಯಾತ್ರೆ ನಡೆಸುವ ಕುರಿತು ಸಮಾಲೋಚನೆ ನಡೆಸುವ ನಿರೀಕ್ಷೆ ಇದೆ' ಎಂದು ಅವರು ತಿಳಿಸಿದರು.