ರಾಜ್ಯಪಾಲರ ಅಂತಿಮ ಆದೇಶದವರೆಗೆ ಕುಲಪತಿಗಳು ಹುದ್ದೆಯಲ್ಲಿ ಮುಂದುವರಿಯಬಹುದು: ಹೈಕೋರ್ಟ್

Photo: PTI
ತಿರುವನಂತಪುರ, ಅ. 25: ರಾಜ್ಯಪಾಲರ ಅಂತಿಮ ಆದೇಶದ ವರೆಗೆ 9 ವಿಶ್ವವಿದ್ಯಾನಿಲಯಗಳ ಕುಲಪತಿಗಳು ತಮ್ಮ ಹುದ್ದೆಯಲ್ಲಿ ಮುಂದುವರಿಯಬಹುದು ಎಂದು ಕೇರಳ ಉಚ್ಚ ನ್ಯಾಯಾಲಯ ಸೋಮವಾರ ಅಭಿಪ್ರಾಯಿಸಿದೆ.
ಕೇರಳದ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ರವಿವಾರ ರಾಜ್ಯದ 9 ವಿಶ್ವವಿದ್ಯಾನಿಲಯಗಳ ಕುಲಪತಿಗಳು ರಾಜೀನಾಮೆ ನೀಡುವಂತೆ ನಿರ್ದೇಶನ ನೀಡಿದ್ದರು.
ಮಂಗಳವಾರ ಬೆಳಗ್ಗೆ 11 ಗಂಟೆಯ ಒಳಗೆ ರಾಜೀನಾಮೆ ನೀಡುವಂತೆ 9 ವಿಶ್ವವಿದ್ಯಾನಿಲಯಗಳ ಕುಲಪತಿಗಳಿಗೆ ರಾಜ್ಯಪಾಲರು ಅಕ್ಟೋಬರ್ 23ರಂದು ನೀಡಿದ ಆದೇಶಕ್ಕೆ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರ ಏಕ ಸದಸ್ಯ ಪೀಠ ಆಕ್ಷೇಪ ವ್ಯಕ್ತಪಡಿಸಿತು. ಯಾರನ್ನೂ ರಾಜೀನಾಮೆ ನೀಡುವಂತೆ ಕೇಳುವ ಬಗ್ಗೆ ತೀರ್ಪು ನೀಡುವ ಅಗತ್ಯ ಇಲ್ಲ ಎಂದು ಅದು ಅಭಿಪ್ರಾಯಿಸಿತು.
ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಲು ಯಾವುದೇ ಅರ್ಹತೆ ಇಲ್ಲ ಎಂದು ಅದು ತಿಳಿಸಿತು ಹಾಗೂ ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಪತಿ ಎಂ.ಎಸ್. ರಾಜಶ್ರೀ ಅವರನ್ನು ಪದಚ್ಯುತಗೊಳಿಸಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿಗೆ ಎಲ್ಲ ನ್ಯಾಯಾಲಯಗಳು ಬದ್ಧವಾಗಿದೆ ಎಂದು ನೆನಪಿಸಿತು.





