‘ಭಾರತ ಐಕ್ಯತಾ ಯಾತ್ರೆ’ ಆಂದೋಲನವಾಗಿ ಸಾಗಿದೆ: ಡಿ.ಕೆ.ಶಿವಕುಮಾರ್

ಬೆಂಗಳೂರು, ಅ.25: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡಿಗೆ ಜನಸಾಮಾನ್ಯರ ಕಡೆಗೆ ಆಗಿತ್ತು. ದೇಶಾದ್ಯಂತ ಜನಸಾಮಾನ್ಯರ ಬಳಿಗೆ ಹೋಗಿ ಅವರ ನೋವನ್ನು ಖುದ್ದಾಗಿ ಆಲಿಸಿರುವ ಏಕೈಕ ನಾಯಕ ಅವರು. ರಾಷ್ಟ್ರ ರಾಜಕಾರಣವನ್ನು ಬೇರೆ ದಿಕ್ಕಿನೆಡೆ ತೆಗೆದುಕೊಂಡು ಹೋಗುವ ಆಂದೋಲನವಾಗಿ ಈ ಯಾತ್ರೆ ಸಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣ್ಣಿಸಿದ್ದಾರೆ.
ಮಂಗಳವಾರ ನಗರದ ಕ್ವೀನ್ಸ್ರಸ್ತೆಯಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆ ಯಶಸ್ವಿಯಾಗಿ ಮುಗಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಚಾಮರಾಜನಗರದಲ್ಲಿ ಆದಿವಾಸಿಗಳು, ಆಕ್ಸಿಜನ್ ದುರಂತದಲ್ಲಿ ಮಡಿದವರ ಕುಟುಂಬದವರು, ರಾಯಚೂರಿನಲ್ಲಿ ದೇವದಾಸಿಗಳು, ನರೇಗಾ ಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಐಟಿ ಉದ್ಯೋಗಿಗಳು, ನಿರುದ್ಯೋಗಿ ಯುವಕರು, ರೈತರು, ನಿವೃತ್ತ ಸೈನಿಕರು, ವ್ಯಾಪಾರಸ್ಥರ ಜತೆ ಸಂವಾದ ನಡೆಸಿದರು. ವಿಕಲಚೇತನ ಅತಿಥಿ ಶಿಕ್ಷಕಿ, ಮೆಕಾನಿಕ್ ಜತೆಗಿನ ಚರ್ಚೆ ಸಂದರ್ಭದಲ್ಲಿ ಅವರು ಬಹಳ ಸ್ಪೂರ್ತಿದಾಯಕ ಅನುಭವ ಪಡೆದರು ಎಂದು ಹೇಳಿದರು.
ಈ ಐಕ್ಯತಾ ಯಾತ್ರೆ ಎಲ್ಲರ ಬದುಕಿನ ಭಾಗವಾಗಿದೆ. ಬಳ್ಳಾರಿಯಲ್ಲಿ ರಾಹುಲ್ ಗಾಂಧಿ ಅವರ ಗಮನ ಸೆಳೆದದ್ದು ಜೀನ್ಸ್ ತಯಾರಿಕಾ ಉದ್ದಿಮೆಗಳ ಜತೆಗಿನ ಸಂವಾದ. ಕಡಿಮೆ ಬೆಲೆಗೆ ಅತ್ಯುತ್ತಮ ಜೀನ್ಸ್ ಪ್ಯಾಂಟ್ ತಯಾರು ಮಾಡುತ್ತಿದ್ದಾರೆ. ಇಂತಹ ಸಂಪನ್ಮೂಲದ ಉದ್ದಿಮೆಯನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದು ಅವರು ಹೇಳಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ರಾಜ್ಯದಲ್ಲಿ ದಕ್ಷ ಆಡಳಿತ ನೀಡಬೇಕು, ಭ್ರಷ್ಟ ಸರಕಾರ ಕಿತ್ತೊಗೆಯಬೇಕು, ಯುವಕರಿಗೆ ಆಗುತ್ತಿರುವ ಮೋಸ ತಡೆಯಬೇಕು, ಸ್ಥಳೀಯ ಭಾಷೆ, ಕೇಂದ್ರದ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಆದ್ಯತೆ, ಕನ್ನಡದ ಸ್ವಾಭಿಮಾನಕ್ಕೆ ಧಕ್ಕೆ ಆಗಬಾರದು ಎಂಬ ಸ್ಪಷ್ಟ ಸಂದೇಶ ನೀಡಿರುವ ರಾಹುಲ್ ಗಾಂಧಿ, ನಿರುದ್ಯೋಗಿ ಯುವಕರ ಸಮಸ್ಯೆಯನ್ನು ಪ್ರತ್ಯೇಕವಾಗಿ ಆಲಿಸಿದ್ದಾರೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಯಾತ್ರೆ ಮುಂದುವರೆಸಲು ಚರ್ಚೆ: ರಾಜ್ಯದಲ್ಲಿ ಈ ಯಾತ್ರೆಯನ್ನು ಇಲ್ಲಿಗೆ ನಿಲ್ಲಿಸದೆ, ಎಲ್ಲ ಜಿಲ್ಲೆಗಳಲ್ಲಿ ಯಾತ್ರೆಯ ಛಾಯಾಚಿತ್ರ ಪ್ರದರ್ಶನ ಮಾಡಲಾಗುವುದು. ಧ್ರುವನಾರಾಯಣ್ ಅಧ್ಯಕ್ಷತೆಯಲ್ಲಿ ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್, ಪ್ರೊ.ರಾಧಾಕೃಷ್ಣ, ಡಾ.ಸಿ.ಎಸ್.ದ್ವಾರಕನಾಥ್, ಐಶ್ವರ್ಯ ಮಹಾದೇವ್, ಗುರುಪಾದಸ್ವಾಮಿ, ಶಶಿಕಾಂತ್ ಸೆಂಥಿಲ್, ಮನ್ಸೂರ್ ಅಲಿ ಖಾನ್ ಹಾಗೂ ದಿನೇಶ್ ಗೂಳಿಗೌಡ ಅವರನ್ನೊಳಗೊಂಡ ಸಮಿತಿ ಮಾಡಿ, ಈ ಯಾತ್ರೆ ಬಗ್ಗೆ ಅಧ್ಯಯನ ಮಾಡಿ, ರಾಜ್ಯದಲ್ಲಿ ಈ ಯಾತ್ರೆ ಮುಂದುವರಿಸಲು ನಾಯಕರ ಜತೆ ಚರ್ಚೆ ಮಾಡುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.
ರಾಹುಲ್ ಗಾಂಧಿ ರಾಯಚೂರಿನಲ್ಲಿ ಸಭೆ ಮಾಡಿ ಯಾತ್ರೆ ಕುರಿತು ನಮ್ಮ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಯಾತ್ರೆಯನ್ನು ಮುಂದಿನ ದಿನಗಳಲ್ಲಿ ಹೇಗೆ ತೆಗೆದುಕೊಂಡು ಹೋಗಬೇಕು ಎಂದು ಕಾರ್ಯಯೋಜನೆ ರೂಪಿಸುತ್ತೇವೆ. ಜನ ಹೇಳಿಕೊಂಡಿರುವ ಸಮಸ್ಯೆ ಬಗ್ಗೆ ಚರ್ಚಿಸಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ ಎಂದು ಅವರು ಹೇಳಿದರು.
ಈ ಯಾತ್ರೆಯೂ ಇಡೀ ದೇಶ ಕೋಮು ಸಾಮರಸ್ಯ ಬೆಸೆಯುವತ್ತ ಗಮನಹರಿಸುವಂತೆ ಮಾಡಿದೆ. ಬೆಲೆ ಏರಿಕೆ, ರೈತರ ಸಮಸ್ಯೆ, ಭ್ರಷ್ಟಾಚಾರ, ನಿರುದ್ಯೋಗ, ಕೋಮು ದ್ವೇಷದ ವಿರುದ್ದದ ಈ ನಡಿಗೆ ಹಳ್ಳಿ, ಹಳ್ಳಿಯಲ್ಲೂ ಜನರ ಮನ ಮುಟ್ಟಿದೆ. ವಿಶೇಷವಾಗಿ ಮಕ್ಕಳು ಯಾತ್ರೆಗೆ ಬಂದು ಭಾಗವಹಿಸಿದ್ದು ಅವಿಸ್ಮರಣೀಯ ಕ್ಷಣವಾಗಿತ್ತು ಎಂದು ಶಿವಕುಮಾರ್ ತಿಳಿಸಿದರು.
ಈ ಯಾತ್ರೆಯಲ್ಲಿ ನೋವು ತಂದ ವಿಚಾರ ಎಂದರೆ ನಮ್ಮ ಕಾರ್ಯಕರ್ತರೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದು, ಪೊಲೀಸ್ ಹೆಣ್ಣು ಮಗಳು ನಿಧನರಾಗಿದ್ದು. ನಾನು ಇದೇ 28ರಂದು ಶಿವಮೊಗ್ಗಕ್ಕೆ ಭೇಟಿ ಕೊಟ್ಟು ಕಾರ್ಯಕರ್ತನ ಕುಟುಂಬಕ್ಕೆ ಘೋಷಣೆ ಮಾಡಿರುವಂತೆ 10 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದರು. ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಉಪಸ್ಥಿತರಿದ್ದರು.
-------------------------------------
‘ಬದನವಾಳು ಗ್ರಾಮದಲ್ಲಿ ಸವರ್ಣೀಯರು ಹಾಗೂ ದಲಿತರ ಮಧ್ಯೆ ದಶಕಗಳಿಂದ ಇದ್ದ ವೈಮನಸ್ಸಿಗೆ ಅಂತ್ಯವಾಡಿ, ಅವರ ಮಧ್ಯೆ ನಾಶವಾಗಿದ್ದ ಸಾಮರಸ್ಯವನ್ನು ಮತ್ತೆ ಬೆಸೆದು, ಅಲ್ಲಿ ರಸ್ತೆ ನಿರ್ಮಾಣ ಮಾಡಿದ್ದೇವೆ. ಅದು ಸಣ್ಣ ರಸ್ತೆ. ಅದಕ್ಕೆ ಭಾರತ ಜೋಡೋ ರಸ್ತೆ ಎಂದು ಹೆಸರಿಟ್ಟು, ಎರಡೂ ಸಮಾಜದವರ ಜತೆ ಒಟ್ಟಿಗೆ ಕೂತು ಊಟ ಮಾಡಿ, ಅವರಲ್ಲಿ ಮತ್ತೆ ಬಾಂಧವ್ಯ ಬೆಸೆಯಲಾಗಿದೆ. ಈ ಯಾತ್ರೆ ಯಶಸ್ಸಿಗೆ ಇದಕ್ಕಿಂತ ಬೇರೆ ಯಾವ ಸಾಕ್ಷಿ ಬೇಕು?'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ







