ಸೂರ್ಯಗ್ರಹಣದ ಮೌಢ್ಯಕ್ಕೆ ಸಡ್ಡು: ಸಾರ್ವಜನಿಕವಾಗಿ ಆಹಾರ ಸೇವಿಸಿ ಸಂಭ್ರಮ

ಮಂಗಳೂರು, ಅ.25: ಎಡ್ ವಿದೌಟ್ ರಿಲೀಜನ್ ಆ್ಯಂಡ್ ಟ್ರಸ್ಟ್( ರಿ) ಮತ್ತು ದಕ್ಷಿಣ ಕನ್ನಡ ವಿಚಾರವಾದಿಗಳ ಅಸೋಸಿಯೇಶನ್ನ ವತಿಯಿಂದ ನಗರದ ಲೇಡಿಹಿಲ್ ಬಳಿ ಮಂಗಳವಾರ ಸಾಮೂಹಿಕವಾಗಿ ಸೂರ್ಯಗ್ರಹಣ ವನ್ನು ವಿಭಿನ್ನವಾಗಿ ವೀಕ್ಷಿಸಿ ಮೌಢ್ಯಕ್ಕೆ ಸಡ್ಡು ಹೊಡೆಯಲಾಯಿತು.
ಗ್ರಹಣದ ವೇಳೆ ಆಹಾರ ಸೇವನೆ ಮಾಡುವುದರಿಂದ ಮನುಷ್ಯನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂಬ ಮೂಢನಂಬಿಕೆಯ ವಿರುದ್ಧ ವೈಜ್ಞಾನಿಕ ಮನೋಭಾವನೆ ಬೆಳೆಸುವ ಸಲುವಾಗಿ ವಿಚಾರವಾದಿ ವೇದಿಕೆಯ ಕಾರ್ಯಕರ್ತರು ಸಾರ್ವಜನಿಕವಾಗಿ ಆಹಾರಗಳನ್ನು ಸೇವಿಸಿ ಗ್ರಹಣವನ್ನು ಸಂಭ್ರಮಿಸಿದರು.
ಕಾರ್ಯಕ್ರಮದ ನೇತೃತ್ವವನ್ನು ವಿಚಾರವಾದಿ ವೇದಿಕೆಯ ಮುಖಂಡರಾದ ಪ್ರೊ. ನರೇಂದ್ರ ನಾಯಕ್, ಪ್ರಭಾಕರ್ ಕಾಪಿಕಾಡ್ ವಹಿಸಿದ್ದರು. ವಿಚಾರವಾದಿ ಎರಿಕ್ ಲೋಬೋ, ೫೧ಎ (ಎಚ್) ಸಂಘಟನೆಯ ಸದಸ್ಯರಾದ ವಿವೇಕ್, ಮಯೂರ್, ಡಿವೈಎಫ್ಐ ಮುಖಂಡರಾದ ಸಂತೋಷ್ ಬಜಾಲ್, ಪ್ರಮೀಳಾ ಶಕ್ತಿನಗರ, ಅಸುಂತ, ಆಶಾ ಬೋಳೂರು, ಪ್ರಮಿಳಾ ದೇವಾಡಿಗ, ನಿತಿನ್ ಕುತ್ತಾರ್, ಎಸ್ಎಫ್ಐ ಜಿಲ್ಲಾ ಮುಖಂಡ ರೇವಂತ್ ಕದ್ರಿ ಉಪಸ್ಥಿತರಿದ್ದರು.
Next Story





