'ಇದು ರಾಜಕೀಯ ಸ್ಟಂಟ್' ಎಂಬ ಬಿಜೆಪಿ ಆರೋಪಕ್ಕೆ ಕೇಜ್ರಿವಾಲ್ ತಿರುಗೇಟು ನೀಡಿದ್ದು ಹೀಗೆ
![ಇದು ರಾಜಕೀಯ ಸ್ಟಂಟ್ ಎಂಬ ಬಿಜೆಪಿ ಆರೋಪಕ್ಕೆ ಕೇಜ್ರಿವಾಲ್ ತಿರುಗೇಟು ನೀಡಿದ್ದು ಹೀಗೆ ಇದು ರಾಜಕೀಯ ಸ್ಟಂಟ್ ಎಂಬ ಬಿಜೆಪಿ ಆರೋಪಕ್ಕೆ ಕೇಜ್ರಿವಾಲ್ ತಿರುಗೇಟು ನೀಡಿದ್ದು ಹೀಗೆ](https://www.varthabharati.in/sites/default/files/images/articles/2022/10/27/354318-1666872629.jpg)
ಹೊಸದಿಲ್ಲಿ: ಕರೆನ್ಸಿ ನೊಟುಗಳಲ್ಲಿ ಗಣೇಶ, ಲಕ್ಷ್ಮಿ ದೇವಿಯ ಚಿತ್ರಗಳನ್ನು ಮುದ್ರಿಸಬೇಕೆಂದು ಕೇಂದ್ರ ಸರಕಾರವನ್ನು ಕೋರಿರುವುದು ಒಂದು ರಾಜಕೀಯ ಸ್ಟಂಟ್ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇಂತಹ ಒಂದು ಕ್ರಮ ಮತಗಳನ್ನು ಆಕರ್ಷಿಸಬಹುದು ಎಂದು ಬಿಜೆಪಿ ಅಂದುಕೊಂಡಿದ್ದರೆ ಅದನ್ನು ಜಾರಿಗೊಳಿಸಬೇಕು ಎಂದಿದ್ದಾರೆ.
ಗಝೀಪುರ್ ತ್ಯಾಜ್ಯ ಗುಂಡಿ ಇರುವ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಮಾದ್ಯಮ ಮಂದಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಕೇಜ್ರಿವಾಲ್ ಮೇಲಿನಂತೆ ಹೇಳಿದ್ದಾರೆ.
ಕೇಜ್ರಿವಾಲ್ ಅವರ ಬೇಡಿಕೆ ಹಿಮಾಚಲ ಪ್ರದೇಶ ಮತ್ತು ಗುಜರಾತ್ನಲ್ಲಿ ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟು ಮಾಡಲಾಗಿದೆ ಎಂಬ ಬಿಜೆಪಿ ಆರೋಪ ಕುರಿತಂತೆ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್ "ಹಾಗಿದ್ದರೆ ಅವರು ಅದನ್ನು ಮಾಡಬೇಕು, ಮತಗಳನ್ನು ಆಕರ್ಷಿಸಬಹುದು ಎಂದು ಅವರು ಅಂದುಕೊಂಡಿದ್ದರೆ ಜಾರಿಗೊಳಿಸಲಿ. ಅವರು ಕೇಂದ್ರ ಸರಕಾರ ನಡೆಸುತ್ತಿದ್ದಾರೆ, ಜಾರಿಗೊಳಿಸಿ ಮತ ಗಳಿಸಲಿ" ಎಂದು ಹೇಳಿದರು.