ಹೈನುಗಾರಿಕೆ ಭಾರತದ ಜೀವನಾಡಿ: ಕಾಣಿಯೂರುಶ್ರೀ
ಹಾಲಿನ ಖರೀದಿ ದರ ಏರಿಸುವಂತೆ ಆಗ್ರಹಿಸಿ ರೈತ ಸಮಾವೇಶ

ಉಡುಪಿ : ಹೈನುಗಾರಿಕೆ ಭಾರತದ ಜೀವನಾಡಿ. ಕೃಷಿ ಮತ್ತು ಹೈನುಗಾರಿಕೆ ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಪ್ರತಿ ಮನೆಯಲ್ಲೂ ದನ-ಕರುಗಳ ಸಾಕಾಣಿಕೆ ನಡೆದಿತ್ತು. ಗೋಶಾಲೆಗಳು ಊರಿನಲ್ಲಿ ಸಾಮಾನ್ಯ ವಾಗಿತ್ತು. ಅಲ್ಲದೇ ಭಾರತೀಯ ಸಮಾಜದಲ್ಲಿ ಗೋದಾನಕ್ಕೆ ಹೆಚ್ಚಿನ ಮಹತ್ವವಿತ್ತು ಎಂದು ಉಡುಪಿ ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಉಡುಪಿ ಜಿಲ್ಲಾ ಸಹಕಾರ ಭಾರತಿ, ಭಾರತೀಯ ಕಿಸಾನ್ ಸಂಘ ಉಡುಪಿ ಜಿಲ್ಲೆ ಇದರ ಸಹಯೋಗದೊಂದಿಗೆ ಹಾಲಿನ ಖರೀದಿ ದರ ಏರಿಸುವಂತೆ ಒತ್ತಾಯಿಸಲು ಗುರುವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿದ ಹೈನುಗಾರಿಕೆ ಮತ್ತು ರೈತ ಸಮಾವೇಶವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಆದರೆ ಇಂದು ಹೈನುಗಾರರಿಗೆ ಸರಿಯಾದ ಪ್ರೋತ್ಸಾಹ ಸಿಗದ ಕಾರಣ, ಹೈನುಗಾರಿಕೆ ದೇಶದಲ್ಲಿ ಕ್ಷೀಣಿಸುತ್ತಿದೆ. ದನಗಳ ಸಾಕಾಣಿಕೆ ಕಷ್ಟದಾಯಕ ಹಾಗೂ ವೆಚ್ಚದಾಯಕ ಎನಿಸಿಕೊಂಡಿದೆ.ಹೀಗಾಗಿ ಸರಕಾರವು ಹೈನುಗಾರರ ನೆರವಿಗೆ ಬರುವಂತಾಗಬೇಕಾಗಿದೆ ಎಂದವರು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಮಾತನಾಡಿ, ಕಳೆದ ಹಲವು ತಿಂಗಳುಗಳಿಂದ ತಮ್ಮ ಒಕ್ಕೂಟದ ಪ್ರತಿದಿನ ಹಾಲು ಸಂಗ್ರಹದಲ್ಲಿ ಸುಮಾರು ಒಂದು ಲಕ್ಷ ಲೀ.ನಷ್ಟು ಕಡಿಮೆಯಾಗಿದ್ದು, ಈಗ ಪ್ರತಿ ದಿನ 4.65ಲಕ್ಷ ಲೀ. ಹಾಲು ಮಾತ್ರ ಸಂಗ್ರಹವಾಗುತ್ತಿದೆ. ಅದೇ ರೀತಿ ರಾಜ್ಯದಲ್ಲಿ 96 ಲಕ್ಷ ಲೀ. ಹಾಲು ಸಂಗ್ರಹವಾಗುತಿದ್ದುದು ಈಗ 76ಲಕ್ಷ ಲೀ.ಹಾಲಿಗೆ ಇಳಿದಿದೆ ಎಂದು ವಿವರಿಸಿದರು.
ಕೃಷಿ ಪರಂಪರೆಯೊಂದಿಗೆ ಹೈನುಗಾರಿಕೆಯನ್ನು ಉಳಿಸಲು ಹೈನುಗಾರಿಕಾ ಕ್ಷೇತ್ರಕ್ಕೆ ಸೂಕ್ತ ಪ್ರೋತ್ಸಾಹವನ್ನು ನೀಡಬೇಕಾಗಿದೆ. ಒಕ್ಕೂಟದ ವತಿಯಿಂದ ಹೈನುಗಾರರಿಗೆ ಬೇಕಾದ ಎಲ್ಲಾ ನೆರವು ಹಾಗೂ ಪ್ರೋತ್ಸಾಹ ನೀಡಲಾಗುವುದು. ಹಾಲಿಗೆ ಸೂಕ್ತ ಬೆಲೆಯನ್ನು ನಿಗದಿಪಡಿಸಲು ಒತ್ತಾಯಿಸಬೇಕಾಗಿದೆ ಎಂದರು.
ಸಹಕಾರಿ ಭಾರತಿ ಹಾಲು ಪ್ರಕೋಷ್ಠದ ರಾಜ್ಯ ಸಂಚಾಲಕ ಸಾಣೂರು ನರಸಿಂಹ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ಲಕ್ಷಾಂತರ ಹೈನುಗಾರರ ನೆರವಿಗೆ ಮುಖ್ಯಮಂತ್ರಿ ಬರುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಅಂಚೆ ಕಾರ್ಡ್ ಚಳುವಳಿಯನ್ನು ಈ ಸಮಾವೇಶದ ಮೂಲಕ ಆರಂಭಿಸ ಲಾಗುತ್ತಿದೆ. ಇದರೊಂದಿಗೆ ಈ ರೈತ ಪರ ಹೋರಾಟವನ್ನು ಜಿಲ್ಲೆಯಿಂದ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದರು.
ಕೊರೋನ ಸಂದರ್ಭದಲ್ಲಿ ದೇಶ-ವಿದೇಶಗಳಲ್ಲಿದ್ದು ಉದ್ಯೋಗ ಕಳೆದು ಕೊಂಡು ಊರಿಗೆ ಮರಳಿದವರಿಗೆ, ಐಟಿ-ಬಿಟಿ ಕ್ಷೇತ್ರದವರಿಗೆ ಕೈಹಿಡಿದು ಸಲಹಿದ್ದು ಕೃಷಿ ಹಾಗೂ ಹೈನುಗಾರಿಕೆ. ಹೀಗಾಗಿ ಕಳೆದೆರಡು ವರ್ಷಗಳಲ್ಲಿ ಹಡಿಲು ಗದ್ದೆಗಳಲ್ಲೂ ಫಸಲು ಬರುವಂತಾಗಿದೆ. ಆದರೆ ಈಗ ಹೈನುಗಾರಿಕೆಗೆ ಸರಕಾರದ ನೆರವು ಬೇಕಾಗುತ್ತದೆ. ಕಳೆದ ಮೂರು ವರ್ಷಗಳಿಂದ ಹಾಲಿನ ಎಂಆರ್ಪಿ ಹೆಚ್ಚಾಗಿಲ್ಲ. ದ.ಕ.ಹಾಲು ಒಕ್ಕೂಟದಿಂದ ಹೈನುಗಾರರಿಗೆ ಈಗ ಲೀ.ಮೇಲೆ 29ರೂ. ದರ ಹಾಗೂ ಐದು ರೂ.ಪ್ರೋತ್ಸಾಹಧನ ಸೇರಿ ಸಿಗುವುದು 34 ರೂ. ಮಾತ್ರ. ಹೀಗಾಗಿ ಹೈನುಗಾರಿಕೆ ನಷ್ಟದಲ್ಲಿದೆ ಎಂದು ವಿವರಿಸಿದರು.
ಸರಕಾರ ಹೈನುಗಾರರಿಗೆ ೫ರೂ. ಪ್ರೋತ್ಸಾಹಧನ ನೀಡಿ ಎಂಟು ವರ್ಷವಾಯಿತು. ಈಗ ಹತ್ತು ರೂ.ಗಳನ್ನು ಹಾಲು ಖರೀದಿ ದರದಲ್ಲಿ ಹೆಚ್ಚಳ ಮಾಡಲೇಬೇಕಾಗಿದೆ. ಇದು ನಾವು ನೀಡುವ ಮೊದಲ ಎಚ್ಚರಿಕೆ. ಇದಕ್ಕೆ ಸ್ಪಂಧಿಸದಿದ್ದರೆ ಬೀದಿಗಿಳಿದು ಪ್ರತಿಭಟಿಸಲೂ ಸಿದ್ಧರಿದ್ದೇವೆ ಎಂದು ನರಸಿಂಹ ಕಾಮತ್ ತಿಳಿಸಿದರು.
ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಭಾಕಿಸಂನ ಜಿಲ್ಲಾಧ್ಯಕ್ಷ ನವೀನಚಂದ್ರ ಜೈನ್, ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಹಾಲು ಪ್ರಕೋಷ್ಟದ ಮೈಸೂರು ವಿಭಾಗದ ಪ್ರಮುಖ್ ಮೋಹನ್ ಕುಂಬ್ಳೇಕರ್, ಸರಕಾರ ಭಾರತಿಯ ಪ್ರಶಾಂತ್, ಸುಚಿತ್ ಶೆಟ್ಟಿ ಉಪಸ್ಥಿತರಿದ್ದರು.
ಸಹಕಾರಿ ಭಾರತಿ ಹಾಲು ಪಕೋಷ್ಟದ ಜಿಲ್ಲಾ ಸಂಚಾಲಕ ಕನ್ನಾರು ಕಮಲಾಕ್ಷ ಹೆಬ್ಬಾರ್ ಸ್ವಾಗತಿಸಿದರು.







